Site icon Suddi Belthangady

ವೇಣೂರು: ಕುಂಭಶ್ರೀ ಶಿಕ್ಷಣ ಸಂಸ್ಥೆಗೆ ಶಿಕ್ಷಣಭೀಷ್ಮ ಪ್ರಶಸ್ತಿ ಪುರಸ್ಕಾರ

ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಪದವಿಪೂರ್ವ ಕಾಲೇಜು ಗುರುಕುಲ ಮಾದರಿ ಶಿಕ್ಷಣಕ್ಕೆ 2024- 25ರ ಬೆಳ್ತಂಗಡಿ ತಾಲೂಕಿನ ಉತ್ತಮ ಶಾಲೆ, ಶಿಕ್ಷಣಭೀಷ್ಮ ಪ್ರಶಸ್ತಿಯಿಂದ ಪುರಸ್ಕಾರ ಗೊಂಡಿತು. ಸಂಸ್ಥೆಯ ಸ್ಥಾಪಕ ಕೆ. ಹೆಚ್. ಗಿರೀಶ್ ರವರಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ನೀಡಿ ಗೌರವಿಸಿದರು.

ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಗುರುಕುಲ ಮಾದರಿ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಲಾಗುತ್ತಿದೆ. 1996ರಲ್ಲಿ ಪ್ರಾರಂಭಗೊಂಡ ಕುಂಭಶ್ರೀ ವಸತಿ ಶಾಲೆಯಲ್ಲಿ ಅನುಭವಿ ಶಿಕ್ಷಕರು ಮತ್ತು ಉಪನ್ಯಾಸಕರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕುಂಭಶ್ರೀ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಾಧನೆಗೆ ರಾಷ್ಟ್ರೀಯ ವಿದ್ಯಾ ಗೌರವ್ ಚಿನ್ನದ ಪದಕ ಪ್ರಶಸ್ತಿ, ಪ್ರಬುದ್ಧ ಭಾರತ, ಸ್ಟಾರ್ ಆಫ್ ಏಷ್ಯಾ ಪ್ರಶಸ್ತಿಗಳು ಲಭಿಸಿವೆ. ಇದೀಗ ಕುಂಭಶ್ರೀ ವಿದ್ಯಾ ಸಂಸ್ಥೆ ಇಡೀ ಕರ್ನಾಟಕ ರಾಜ್ಯದಲ್ಲಿ ಬೆಳ್ತಂಗಡಿ ತಾಲೂಕಿನ ಅತ್ಯುತ್ತಮ ಶಾಲೆ ಎಂದು ಗುರುತಿಸಲ್ಪಟ್ಟು ಶಿಕ್ಷಣಭೀಷ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಎಸ್.ಎಸ್.ಎಲ್.ಸಿ.ಯಲ್ಲಿ ಸತತ 11ನೇ ಬಾರಿ ಶೇ.100 ಫಲಿತಾಂಶ, ಪಿಯುಸಿಯಲ್ಲಿ ಮೂರನೇ ಬಾರಿ ನೂರು ಶೇಕಡ ಫಲಿತಾಂಶವನ್ನು ಪಡೆದುಕೊಂಡಿರುತ್ತದೆ. ಬರೀ ಶಿಕ್ಷಣಕ್ಕೆ ಮಾತ್ರ ಮಹತ್ವವನ್ನು ನೀಡುವುದಲ್ಲದೆ ಕಂಪ್ಯೂಟರ್, ಭರತನಾಟ್ಯ, ಯೋಗ, ಸಂಗೀತ, ಕರಾಟೆ, ಯಕ್ಷಗಾನ ಮುಂತಾದ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದು, ಉತ್ತಮ ತರಬೇತಿದಾರರಿಂದ ತರಬೇತಿಯನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ವಾಹನದ ವ್ಯವಸ್ಥೆ ಮತ್ತು ಮೂರನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ವಸತಿ ನಿಲಯದ ವ್ಯವಸ್ಥೆ ಇದೆ. ಬೇರೆ ಬೇರೆ ಜಿಲ್ಲೆ, ರಾಜ್ಯಗಳ ಮಕ್ಕಳು ಇಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಉತ್ತಮ ಪಿಯು ಕಾಲೇಜಿನ ವ್ಯವಸ್ಥೆಯಿದ್ದು, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ, ಜೆಇಇ ವಿಶೇಷ ತರಬೇತಿಗಳನ್ನು ನೀಡಲಾಗುತ್ತಿದೆ. ಮಾತಾ-ಪಿತಾ, ಗುರುದೇವೋಭವ ಎಂಬ ಪೂಜ್ಯನೀಯ ಕಾರ್ಯಕ್ರಮ, ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವು ಪ್ರತಿ ವರ್ಷ ನಡೆಯುತ್ತದೆ.

Exit mobile version