Site icon Suddi Belthangady

ನ.1-3: ಕಾಶಿಪಟ್ಣ ದಾರುನ್ನೂರು ಎಜುಕೇಶನ್ ಸೆಂಟರ್ ದಶಮಾನೋತ್ಸವ, ಮಹಾ ಸಮ್ಮೇಳನ- ಪತ್ರಿಕಾ ಗೋಷ್ಠಿ

ಕಾಶಿಪಟ್ಣ: ಕಾಶಿಪಟ್ಣ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸಗಳನ್ನು ಸಮನ್ವಯವಾಗಿ ನೀಡುತ್ತಿರುವ ಕರ್ನಾಟಕದ ಹೆಮ್ಮೆಯ ಸಂಸ್ಥೆ ಶಹೀದ್ ಸಿ.ಎಂ ಅಬ್ದುಲ್ಲ ಮುಸ್ಲಿಯಾರ್ ಫೌಂಡೇಶನ್ ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಇದರ ದಶಮಾನೋತ್ಸವ ಸಂಭ್ರಮ, ಧಾರ್ಮಿಕ ಪದವಿ ಪ್ರದಾನ ಸಮಾರಂಭ ನ.1ರಿಂದ 3 ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್ ಇಂಡಿಯಾ ತಿಳಿಸಿದರು.

ಸಂಸ್ಥೆಯಲ್ಲಿ ಅ. 18ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.

ಪ್ರಸ್ತುತ ಈ ವಿದ್ಯಾಕೇಂದ್ರದಲ್ಲಿ 330 ರಷ್ಟು ವಿದ್ಯಾರ್ಥಿಗಳು ಧಾರ್ಮಿಕ ವಿದ್ಯಾಭ್ಯಾಸದೊಂದಿಗೆ ಲೌಕಿಕ ವಿದ್ಯಾಭ್ಯಾಸವನ್ನು ಅಭ್ಯಸಿಸುತ್ತಿದ್ದು, ಪ್ರಮುಖ ಭಾಷೆಗಳಾಗಿ ಕನ್ನಡ, ಹಿಂದಿ, ಇಂಗ್ಲೀಷ್, ಅರಬಿ, ಉರ್ದು, ಮಲಯಾಳಂ ಭಾಷೆಗಳನ್ನೊಳಗೊಂಡ ಇತರ ಭಾಷಾ ಸಾಹಿತ್ಯದಲ್ಲೂ ಪ್ರಾವಿಣ್ಯತೆಯನ್ನು ಕೊಡಲಾಗುತ್ತಿದೆ. ಪ್ರಸ್ತುತ ವಿದ್ಯಾಭ್ಯಾಸಗೈಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಸನಿವಾಸ ಸಂಪೂರ್ಣ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಮಹಿಳಾ ಶರೀಅತ್ ಕಾಲೇಜನ್ನು ತೆರೆಯಲು ಉದ್ದೇಶಿಸಿರುತ್ತೇವೆ ಎಂದರು.

ಬಡತನ ರೇಖೆಗಿಂತ ಕೆಳಗಿರುವ ತೀರಾ ತಳಮಟ್ಟದ ಮುಸ್ಲಿಮರ ಧಾರ್ಮಿಕ, ಶೈಕ್ಷಣಿಕ, ವಿಜ್ಞಾನ, ಬೌದ್ಧಿಕ, ಔದ್ಯೋಗಿಕ ರಂಗಗಳ ಅಭಿವೃದ್ಧಿಯ ದೃಷ್ಟಿಯಿಂದ ಬಡಮಕ್ಕಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುವ ದೃಷ್ಟಿಯಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸುಮಾರು 12.5 ಎಕ್ರೆ ಸ್ಥಳದಲ್ಲಿ ಅಂದಾಜು 100 ಕೋಟಿ ರೂಪಾಯಿ ವೆಚ್ಚದ ಬೃಹತ್ ವಿದ್ಯಾಕೇಂದ್ರದ ಯೋಜನೆಗೆ ಸಯ್ಯಿದ್ ಹೈದರಾಲಿ ಶಿಹಾಬ್ ತಂಙಳ್ 2013ರ ಫೆ.10ರಂದು ಶಿಲಾನ್ಯಾಸ ಮಾಡಿದ್ದರು. ದ. ಕ ಜಿಲ್ಲೆಯ ಖಾಝಿಯವರಾದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝಹರಿಯವರ ಸಾರಥ್ಯದಲ್ಲಿ ಮತ್ತು ಉದಾರ ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ದಶಮಾನೋತ್ಸವದ ಅಂಗವಾಗಿ ನ.1ರಂದು ಮಧ್ಯಾಹ್ನ ತೋಡಾರು ಮಖಾಂ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಸಂಸ್ಥೆಯ ಕ್ಯಾಂಪಸ್ ವರೆಗೆ ವಾಹನ ಜಾಥಾವನ್ನು, ಸಂಸ್ಥೆಯ ಆವರಣದಲ್ಲಿ ದ್ವಜಾರೋಹಣ, ಮಗ್ರಿಬ್ ನಮಾಝಿನ ಬಳಿಕ ಅಂತರಾಷ್ಟ್ರೀಯ ವಾಗಿ ಅಲ್ ಹಾಫಿಕ್ ಅಹ್ಮದ್ ಕಬೀರ್ ಬಾಖವಿ ಕೇರಳ ಇವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ. ಮೂರು ದಿನಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಗಣಿತ, ಪಾರಂಪರಿಕ ವಸ್ತುಗಳು, ವಿಸ್ಮಯ ಲೋಕ, ಮೆಂಟಲಿಸಂ, ಎ.ಐ ಮತ್ತು ಇತರ ವಿಶೇಷ ಆಕರ್ಷಣೆಗಳ ದಾರುನ್ನೂರು ಎಕ್ಸ್ಪೋ 2024 ನಡೆಯಲಿದೆ.

ನ.2ರಂದು ಪೂರ್ವಾಹ್ನ ಬ್ಯಾರಿ ಸಾಂಸ್ಕೃತಿಕ ಸಮ್ಮಿಲನದಲ್ಲಿ ಬ್ಯಾರಿ ಸಾಹಿತ್ಯ, ಸಂಸ್ಕೃತಿ ಮತ್ತು ಬೆಳವಣಿಗೆಯ ತರಬೇತಿ, ಯೂತ್ ಮೀಟ್, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬ್ಯಾರಿ ಸಾಧಕರಿಗೆ ಸನ್ಮಾನ ನಡೆಯಲಿದೆ. ಅಪರಾಹ್ನ 2ರಿಂದ ಶಹೀದ್ ಸಿ.ಎಂ ಉಸ್ತಾದ್ ಕಾನ್ಸರೆನ್ಸ್ ನಲ್ಲಿ ಸಿ.ಎಂ ಉಸ್ತಾದ್ ಜೀವನ ಚರಿತ್ರೆಯ ಬಗ್ಗೆ ವಿವಿಧ ಸೆಮಿನಾರ್ ಗಳು ನಡೆಯಲಿದೆ. ಅಸರ್ ನಮಾಝಿನ ಬಳಿಕ ಅಸೈಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಇವರು ನೂತನ ಗ್ರಂಥಾಲಯ ಉದ್ಘಾಟನೆ ಮಾಡಲಿದ್ದಾರೆ. ಮಗ್ರಿಬ್ ನಮಾಝಿನ ಬಳಿಕ ಅಂತರಾಷ್ಟ್ರೀಯ ವಾಗಿ ಸಿಂಸಾರುಲ್ ಹಖ್ ಹುದವಿ ಕೇರಳ ಇವರಿಂದ ಮುಖ್ಯ ಪ್ರಭಾಷಣ ಹಾಗೂ ವಲಿಯುಲ್ಲಾಹಿ ಫೈಝಿ ವಾಯಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ.

ನ.3 ಪೂರ್ವಾಹ್ನ ಮಹಲ್ಲ್ ಅಭಿವೃದ್ಧಿ, ನಾಯಕತ್ವದ ಕುರಿತಂತೆ ಮಹಲ್ಲ್ ಸಾರಥಿ ಸಂಗಮ ನಡೆಯಲಿದೆ. ಅಪರಾಹ್ನ 3ಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವರುಗಳಾದ ಝಮೀರ್ ಅಹಮದ್, ರಹೀಂ ಖಾನ್., ಶಾಸಕರುಗಳಾದ ಹರೀಶ್ ಪೂಂಜಾ, ಉಮಾನಾಥ ಕೋಟ್ಯಾನ್, ಐವನ್ ಡಿ’ಸೋಜಾ, ಮಾಜಿ‌ ಸಚಿವ ಅಭಯಚಂದ್ರ ಜೈನ್, ಮುಖ್ಯ ಮಂತ್ರಿಗಳ ರಾಜಕೀಯ‌ ಕಾರ್ಯದರ್ಶಿ ನಸೀರ್ ಅಹಮದ್ , ಕಾಶಿಪಟ್ಣ ಗ್ರಾ.ಪಂ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಮರೋಡಿ ಗ್ರಾ.ಪಂ ಅಧ್ಯಕ್ಷ ರತ್ನಾಕರ ಬುಣ್ಣನ್, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಸ್ಥಳೀಯ ಪ್ರಮುಖರಾದ ಜಯಂತ ಕೋಟ್ಯಾನ್ ಮೊದಲಾದವರು ಭಾಗವಹಿಸಲಿದ್ದಾರೆ.

ಮಗ್ರಿಬ್ ನಮಾಝಿನ ಬಳಿಕ ಸನದುದಾನ ಮಹಾ ಸಮ್ಮೇಳನ ನಡೆಯಲಿದೆ. ಇದರಲ್ಲಿ ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಪದವಿ ಪ್ರದಾನ ಮಾಡಲಿದ್ದಾರೆ. ಅಂತರಾಷ್ಟ್ರೀಯ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಕೇರಳ ಇವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ. ಈ ಸಮಾರಂಭಗಳಲ್ಲಿ ಉಲಮಾ ಉಮರಾ ನಾಯಕರುಗಳು, ಸಾಮಾಜಿಕ, ಶೈಕ್ಷಣಿಕ ನಾಯಕರುಗಳು ವಿವಿಧ ದಿನಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಾರುನ್ನೂರು ಕೇಂದ್ರ ಸಮಿತಿ ಅಧ್ಯಕ್ಷರು ಹಾಗೂ ದ.ಕ ಜಿಲ್ಲಾ ಖಾಝಿ ತ್ವಾಖಾ ಅಹಮದ್ ಮುಸ್ಲಿಯಾರ್, ಕಾರ್ಯದರ್ಶಿ ಅಬ್ದುಲ್ ಸಮದ್ ಹಾಜಿ, ದಶಮಾನೋತ್ಸವ ಸಮಿತಿ ಸಂಚಾಲಕ ಫಕೀರಬ್ಬ ಮರೋಡಿ, ಮುಖ್ಯೋಪಾಧ್ಯಾಯ ಹುಸೈನ್ ರಹ್ಮಾನಿ,‌ ಅಂಗರಕರಿಯ ಖತೀಬ್ ಸಯ್ಯಿದ್ ಅಕ್ರಂ ತಂಙಳ್, ಪ್ರಾಂಶುಪಾಲ ಅಮೀನ್ ಹುದವಿ, ಆಸ್ಕೋ ಅಬ್ದುಲ್ ರಹಿಮಾನ್ ಹಾಜಿ, ಶಾಹುಲ್ ಹಮೀದ್ ತಂಙಳ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Exit mobile version