Site icon Suddi Belthangady

ಸುದ್ದಿ ಬಿಡುಗಡೆ, ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗ, ರೋಟರಿ ಕ್ಲಬ್, ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಿಕಾ ಕಾರ್ಯಾಗಾರ- ಗ್ರಾಮೀಣ ಪತ್ರಿಕೋದ್ಯಮದ ಅವಕಾಶ, ವರದಿಗಾರರು ಎದುರಿಸುವ ಸಮಸ್ಯೆ, ಅಭಿವೃದ್ಧಿ ಪತ್ರಿಕೋದ್ಯಮ, ಪಾಸಿಟಿವ್-ನೆಗೆಟಿವ್ ಪತ್ರಿಕೋದ್ಯಮದ ಕುರಿತು ಚರ್ಚೆ, ಸಂವಾದ

ಬೆಳ್ತಂಗಡಿ: ಸುದ್ದಿ ಬಿಡುಗಡೆ ಪತ್ರಿಕೆ ಬೆಳ್ತಂಗಡಿ ಮತ್ತು ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಕಾಲೇಜು ಉಜಿರೆ ಇದರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಸಹಿತ ವಿವಿಧ ಸಂಘ ಸಂಸ್ಥೆಗಳ ಸಹಯೋಗ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ.ಕ. ಮಂಗಳೂರು ಮತ್ತು ಬೆಳ್ತಂಗಡಿಯ ಪತ್ರಕರ್ತರ ಹಾಗೂ ಮಾಧ್ಯಮದವರ ಸಹಕಾರದೊಂದಿಗೆ ಉಜಿರೆ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಸಭಾಂಗಣದಲ್ಲಿ ಅ.೪ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪತ್ರಿಕಾ ಕಾರ್ಯಾಗಾರ ನಡೆಯಿತು.
ಉದ್ಘಾಟನಾ ಸಮಾರಂಭದ ಬಳಿಕ ಗ್ರಾಮೀಣ ಪತ್ರಿಕೋದ್ಯಮದ ಅವಕಾಶಗಳು, ಗ್ರಾಮೀಣ ವರದಿಗಾರರು ಎದುರಿಸುವ ಸಮಸ್ಯೆಗಳು, ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪಾಸಿಟಿವ್ ಹಾಗೂ ನೆಗೆಟಿವ್ ಪತ್ರಿಕೋದ್ಯಮದ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ದ.ಕ. ಜಿಲ್ಲೆಯ ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಸುದ್ದಿ ಬಿಡುಗಡೆ ಗ್ರಾಮೀಣ ಪತ್ರಿಕೋದ್ಯಮಕ್ಕೆ ಮಾದರಿ-ಪಿ.ಬಿ. ಹರೀಶ್ ರೈ: ಸಂವಾದಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷರೂ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರೂ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರರೂ ಆಗಿರುವ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅವರು ಡಾ.ಯು.ಪಿ.ಶಿವಾನಂದರವರ ಸಾರಥ್ಯದ ಸುದ್ದಿ ಬಿಡುಗಡೆ ಪತ್ರಿಕೆ ಗ್ರಾಮೀಣ ಭಾಗದಲ್ಲಿ ಕ್ರಾಂತಿ ಮಾಡಿದೆ. ಸುದ್ದಿ ಬಿಡುಗಡೆ ಗ್ರಾಮೀಣ ಪತ್ರಿಕೋದ್ಯಮಕ್ಕೆ ಮಾದರಿಯಾಗಿದೆ, ಪತ್ರಿಕೆ ಪ್ರಾರಂಭದ ಹಂತದಲ್ಲಿ ನಾವು ನಮ್ಮದೇ ಭಾಷೆಯಲ್ಲಿ ಕಳುಹಿಸುತ್ತಿದ್ದ ವರದಿಗಳನ್ನು ಸುದ್ದಿ ಬಿಡುಗಡೆಯಲ್ಲಿ ಪ್ರಕಟಗೊಳಿಸಲಾಗುತ್ತಿತ್ತು. ಇದೇ ನಾವು ಪತ್ರಕರ್ತರಾಗಲು ಪ್ರೇರಣೆಯಾಯಿತು ಎಂದರು. ಪಂಚಾಯತ್ ಪ್ರಕಟಣೆಗಳು, ವಿವಿಧ ಸಂಘ ಸಂಸ್ಥೆಗಳ ಜಾಹೀರಾತುಗಳು ಗ್ರಾಮೀಣ ಪತ್ರಿಕೆಗಳಲ್ಲಿ ನೀಡಲಾಗುತ್ತದೆ. ಸುದ್ದಿ ಬಿಡುಗಡೆಯಂತಹ ಗ್ರಾಮೀಣ ಪತ್ರಿಕೆಗಳ ಬೆಳವಣೀಗೆಯಿಂದಾಗಿ ರಾಜ್ಯಮಟ್ಟದ ಬೇರೆ ಪತ್ರಿಕೆಗಳು ಪ್ರತ್ಯೇಕ ಎಡಿಶನ್‌ಗಳನ್ನು ಪ್ರಾರಂಭಿಸುವಂತಾಯಿತು ಎಂದು ಹೇಳಿದ ಅವರು ವರದಿಗಾರರಿಗೆ ಸಂಸ್ಥೆಯ ವೇತನದೊಂದಿಗೆ ಜಾಹೀರಾತು ಸಂಗ್ರಹಣೆಗೆ ಅವಕಾಶಗಳಿವೆ ಎಂದು ಹೇಳಿದರು. ಕೊರೋನಾದ ಬಳಿಕ ರಾಜ್ಯದಲ್ಲಿ ಪತ್ರಿಕೆಗಳ ಪ್ರಸಾರ ಸಂಖ್ಯೆ ೮ ಲಕ್ಷದವರೆಗೆ ಕಡಿಮೆಯಾಗಿದೆ. ಆದರೂ ಗ್ರಾಮೀಣ ಭಾಗದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ಶಿವಾನಂದರ ಬರಹ ಮುದ್ದಿಸುತ್ತದೆ, ಹಾಗೆಯೇ ಬೆತ್ತದ ಏಟಿನ ರುಚಿ ತೋರಿಸುತ್ತದೆ -ಕುಂದೇಶ್ವರ : ಹಿರಿಯ ಪತ್ರಕರ್ತರೂ ಅಂಕಣಗಾರರೂ, ಕಲಾವಿದರೂ, ವಿಶ್ವವಾಣಿ ಪತ್ರಿಕೆಯ ಹಿರಿಯ ವರದಿಗಾರರೂ ಆಗಿರುವ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಅವರು ಮಾತನಾಡಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಳು ಸವಿಸವಿ ನೆನಪಿನ ಹಾಗೆ ಇರುತ್ತದೆ. ಹಾಗೂ ಸುದ್ದಿ ಬಿಡುಗಡೆಯ ಮಾಲಕರಾದ ಡಾ. ಯು.ಪಿ. ಶಿವಾನಂದರ ಬರಹ ಮುದ್ದಿಸುತ್ತದೆ. ಹಾಗೆಯೇ ಬೆತ್ತದ ಏಟಿನ ರುಚಿ ತೋರಿಸುತ್ತದೆ ಎಂದು ವಿಶ್ಲೇಷಣೆ ನಡೆಸಿದರು. ಸವಾಲುಗಳನ್ನು ಎದುರಿಸಿ ಮೆಟ್ಟಿ ನಿಲ್ಲುವ ಸಾಮರ್ಥ್ಯ ಸುದ್ದಿ ಬಿಡುಗಡೆ ಪತ್ರಿಕೆಗೆ ಹಾಗೂ ಎಸ್‌ಡಿಎಮ್ ಸಂಸ್ಥೆಗೆ ಇದೆ ಎಂದು ಹೇಳಿದ ಅವರು ಗ್ರಾಮೀಣ ಪತ್ರಿಕೋದ್ಯಮದಲ್ಲಿ ಪ್ರತಿದಿನ ಸವಾಲು ಎದುರಿಸ ಬೇಕಾಗುತ್ತದೆ, ಸುದ್ದಿಬಿಡುಗಡೆ ಅದರಲ್ಲಿ ಯಶಸ್ವಿಯಾಗಿದೆ, ಜಾಹೀರಾತು ಪತ್ರಿಕೆಯ ಆರ್ಥಿಕ ಶಕ್ತಿಯಾಗಿದೆ. ವಾಟ್ಸಾಪ್ ಬಂದ ಮೇಲೆ ವರದಿಗೆ ಸುಲಭವಾಗಿದೆ. ಆದರೆ ವರದಿಗಾರನಿಗೆ ನೆಟ್‌ವರ್ಕ್ ಕಡಿಮೆಯಾಗುತ್ತಿದೆ. ವರದಿಗಾರರು ವಸ್ತು ನಿಷ್ಠೆಯಿಂದ ಇರಬೇಕು ಎಂದು ಅವರು ಹೇಳಿದರು.

ಪುತ್ತೂರಿನಲ್ಲಿ ಸುದ್ದಿ ಬಿಡುಗಡೆ ದಿನಪತ್ರಿಕೆ ಓದುವುದು ಬೆಳಿಗ್ಗೆ ಕಾಫಿ ಕುಡಿದಂತೆ-ಕಮ್ಮಾಜೆ: ಪುತ್ತೂರು ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯರೂ ಲೇಖಕರೂ ಆಗಿರುವ ರಾಕೇಶ್ ಕುಮಾರ್ ಕಮ್ಮಾಜೆ ಮಾತನಾಡಿ ಪತ್ರಿಕೋದ್ಯಮವನ್ನು ಪಾಸಿಟಿವ್-ನೆಗೆಟಿವ್ ಎಂದು ವಿಭಾಗ ಮಾಡಲು ಸಾಧ್ಯವಿಲ್ಲ. ಆದರೆ ಸುದ್ದಿಗಳಲ್ಲಿ ವಿಭಾಗ ಮಾಡಬಹುದು. ನಕರಾತ್ಮಕ ಮತ್ತು ಸಕಾರತ್ಮಾಕ ಸುದ್ದಿಗಳು ಎಂದು ವಿಭಜಿಸಬಹುದು. ಸಕರಾತ್ಮಕ ಸುದ್ದಿ ಎಂದರೆ ಸಮಾಜದ ಏಳಿಗೆಗಾಗಿನ ಬರಹಗಳು. ನಕರತ್ಮಾಕ ಎಂದರೆ ಕ್ರೈಂ ಸುದ್ದಿಗಳು ಎಂದರು. ಸಾಮಾನ್ಯ ಸುದ್ದಿಗಳು ಮಾಹಿತಿ ನೀಡುತ್ತದೆ. ವರದಿಗಾರನ ಕೈಯಲ್ಲಿ ಈ ಅಂಶಗಳಿವೆ. ಧ್ವನಿ ಎತ್ತಲಾಗದವರ ಧ್ವನಿಯಾಗಿರುವುದು ಪತ್ರಿಕೋದ್ಯಮ. ಸಕಾರತ್ಮಾಕ ಸಂಗತಿಗಳನ್ನು ನೀಡುವ ಕುರಿತು ಚಿಂತಿಸಬೇಕು. ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಅಲ್ಲದೆ ಯಾವುದೇ ಸಂಸ್ಥೆಗಳ ಪಿ.ಆರ್.ಓ ಆಗಲೂ ವಿಪುಲ ಅವಕಾಶವಿದೆ ಎಂದು ತಿಳಿಸಿದ ಅವರು ಪುತ್ತೂರಿನಲ್ಲಿ ಸುದ್ದಿ ಬಿಡುಗಡೆ ದಿನಪತ್ರಿಕೆ ಓದುವುದು ಬೆಳಿಗ್ಗೆ ಕಾಫಿ ಕುಡಿದಂತೆ ಎಂದು ಹೇಳಿದರು.

ನಮ್ಮ ಸುತ್ತಲಿನ ವಿಷಯಗಳು ತಿಳಿಯಲು ಸುದ್ದಿ ಬಿಡುಗಡೆಯಂತಹ ಗ್ರಾಮೀಣ ಪತ್ರಿಕೆ ಅವಶ್ಯಕ-ಶೈಲೇಶ್ : ಹಲವು ಪತ್ರಿಕೆಗಳನ್ನು ಓದುವ ಮೂಲಕ ವಿಶ್ಲೇಷಕರಾಗಿ ಗುರುತಿಸಿಕೊಂಡಿರುವ ಎಸ್.ಡಿ.ಎಂ.ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್ ಮಾತನಾಡಿ ಗ್ರಾಮೀಣ ಪತ್ರಿಕೆಯ ವರದಿಗಾರರು ವಸ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ನಮ್ಮ ಸುತ್ತಲಿನ ವಿಷಯಗಳು ತಿಳಿಯಲು ಸುದ್ದಿ ಬಿಡುಗಡೆಯಂತಹ ಗ್ರಾಮೀಣ ಪತ್ರಿಕೆ ಅವಶ್ಯಕ. ಗ್ರಾಮೀಣ ಪತ್ರಿಕೋದ್ಯಮ ಗ್ರಾಮೀಣ ಸಾಧಕರನ್ನು ಪರಿಚಯಿಸುತ್ತದೆ. ಪುಂಜಾಲಕಟ್ಟೆ-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕುರಿತು ಸುದ್ದಿ ಬಿಡುಗಡೆ ನಿರಂತರ ವರದಿ ಮಾಡಿದೆ. ಗ್ರಾಮೀಣ ಪತ್ರಿಕೆಗಳ ಮೇಲೆ ವಿದ್ಯಾರ್ಥಿಗಳು ಅಭಿರುಚಿ ತೋರಬೇಕು ಎಂದು ಹೇಳಿದರು.

ಸುದ್ದಿ ಬಿಡುಗಡೆ ಗ್ರಾಮೀಣ ಪತ್ರಿಕೋದ್ಯಮಕ್ಕೆ ಮಾದರಿ- ಪಿ.ಬಿ. ಹರೀಶ್ ರೈ

ಡಾ.ಶಿವಾನಂದರ ಬರಹ ಮುದ್ದಿಸುತ್ತದೆ, ಹಾಗೆಯೇ ಬೆತ್ತದ ಏಟಿನ ರುಚಿ ತೋರಿಸುತ್ತದೆ – ಕುಂದೇಶ್ವರ

ಪುತ್ತೂರಿನಲ್ಲಿ ಸುದ್ದಿ ಬಿಡುಗಡೆ ದಿನಪತ್ರಿಕೆ ಓದುವುದು ಬೆಳಿಗ್ಗೆ ಕಾಫಿ ಕುಡಿದಂತೆ- ಕಮ್ಮಾಜೆ

ನಮ್ಮ ಸುತ್ತಲಿನ ವಿಷಯಗಳು ತಿಳಿಯಲು ಸುದ್ದಿ ಬಿಡುಗಡೆಯಂತಹ ಗ್ರಾಮೀಣ ಪತ್ರಿಕೆ ಅವಶ್ಯಕ- ಶೈಲೇಶ್

ಸುದ್ದಿ ಬಿಡುಗಡೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ- ಡಾ.ಯು.ಪಿ.ಶಿವಾನಂದ

ಸಂವಾದಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರು ಗ್ರಾಮೀಣ ವಿಷಯವನ್ನು ಜಗತ್ತಿಗೆ ತಲುಪಿಸುವುದು ಗ್ರಾಮೀಣ ಪತ್ರಿಕೋದ್ಯಮ. ನಮ್ಮ ಪತ್ರಿಕೆಯಲ್ಲಿ ಸಮಾಜದ ಸಾಧಕರನ್ನು ಪರಿಚಯಿಸಲಾಗುತ್ತದೆ. ಕೃಷಿಕರಿಗೂ ಆದ್ಯತೆ ನೀಡಲಾಗುತ್ತದೆ. ಪತ್ರಿಕೆಯ ಬಂಡಲ್ ಕಟ್ಟಲು ಬಂದವರು ನಮ್ಮಲ್ಲಿ ವರದಿಗಾರರಾಗಿದ್ದಾರೆ. ಯಾವುದೇ ಕ್ಷೇತ್ರದಲ್ಲೂ ಕಲಿಕೆಗೆ ವಿಫುಲವಾದ ಅವಕಾಶವಿದೆ. ಪತ್ರಿಕೋದ್ಯಮವನ್ನು ಜಗತ್ತು ಕಾಣುವ ಶಕ್ತಿಯಿದೆ. ಸಂಬಂಧಿಕ, ಜಾಹೀರಾತು ನೀಡುವ ವ್ಯಕ್ತಿ ಎನ್ನದೇ ಅವರ ಒಳಿತು-ಕೆಡಕಿನ ವರದಿ ಪ್ರಕಟಿಸಿzವೆ ಎಂದರು.
ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗದ ಗ್ರಾಮದ ತಳಮಟ್ಟದ ವರದಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹಾಗೂ ಇಲಾಖಾಧಿಕಾರಿಗಳ ಕಾರ್ಯಕ್ರಮ ನಮ್ಮ ಪತ್ರಿಕೆಯಲ್ಲಿ ಇರುತ್ತದೆ. ಇದರಿಂದ ಗ್ರಾಮೀಣ ಜನರಿಗೆ ಅನಗತ್ಯ ಅಲೆದಾಡುವುದು ತಪ್ಪುತ್ತದೆ. ಜನರಿಗೆ ಮಾಹಿತಿಯನ್ನು ನೀಡುವ ಕೆಲಸ ಸುದ್ದಿ ಬಿಡುಗಡೆ ಪತ್ರಿಕೆ ಮಾಡುತ್ತಿದೆ ಎಂದು ಹೇಳಿದ ಅವರು ಸುಳ್ಯ, ಬೆಳ್ತಂಗಡಿ, ಪುತ್ತೂರಿನಲ್ಲಿ ಸುದ್ದಿ ಬಿಡುಗಡೆ ಅಧಿಕ ಪ್ರಸಾರ ಸಂಖ್ಯೆ ಹೊಂದಿದೆ. ಬಂಟ್ವಾಳದಲ್ಲಿಯೂ ಮಾಧ್ಯಮ ಆರಂಭಿಸಲು ಯೋಜನೆ ರೂಪಿಸಿzವೆ ಎಂದು ತಿಳಿಸಿದ ಅವರು ನಮ್ಮ ವರದಿಗಾರರಿಗೆ ಸಮಾಜದಲ್ಲಿ ಉತ್ತಮ ಗೌರವಗಳು ಸಿಗುತ್ತದೆ. ಇದಕ್ಕಾಗಿ ಅವರು ಪ್ರಕಟಿಸುವ ನೈಜ ವರದಿಗಳು ಕಾರಣವಾಗಿದೆ ಎಂದು ಹೇಳಿದರು.

ಸುದ್ದಿ ಬಿಡುಗಡೆಯಂತಹ ಪತ್ರಿಕೆ ಎಲ್ಲಾ ತಾಲೂಕುಗಳಲ್ಲಿ ಬರುವಂತಾಗಲಿ ಡಾ.ಬಿ.ಎ. ಕುಮಾರ ಹೆಗ್ಡೆ

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಅವರು ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳು ಸುಸ್ಥಿರ ಪ್ರಗತಿಯನ್ನು ಸಾಧಿಸಬೇಕಾದರೆ ಆರ್ಥಿಕ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಸಾರ್ವಕಾಲಿಕ ಮೌಲ್ಯಗಳೊಂದಿಗೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದರು. ಸುದ್ದಿ ಬಿಡುಗಡೆಯಂತಹ ಪತ್ರಿಕೆ ಎಲ್ಲಾ ತಾಲೂಕುಗಳಲ್ಲಿ ಬರುವಂತಾಗಲಿ ಎಂದು ಹೇಳಿದ ಅವರು ಪತ್ರಿಕೆಗಳ ಸಾಮಾನ್ಯ ಓದುಗರು ಕೂಡಾ ಇಂದು ಗೊಂದಲದಲ್ಲಿದ್ದಾರೆ. ಪತ್ರಿಕೆಗಳು ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು, ಜಾಗೃತಿ ಮೂಡಿಸಿ ಆರೋಗ್ಯಪೂರ್ಣ ಸಮಾಜ ರೂಪಿಸಲು ಪ್ರಯತ್ನಿಸಬೇಕು. ನಮ್ಮ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಸದಾಕಾಲ ಚಟುವಟಿಕೆಗಳಲ್ಲಿ ಮೂಂಚಣಿಯಲ್ಲಿದೆ. ರಾಜ್ಯದ ಉನ್ನತ ಮಾಧ್ಯಮಗಳಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ವೃತ್ತಿ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದರಲ್ಲದೇ ಸುದ್ದಿ ಬಿಡುಗಡೆ ತಾಲೂಕಿನ ಜನಪ್ರಿಯ ಪತ್ರಿಕೆಯಾಗಿದೆ. ತಾಲೂಕಿನ ಹಳ್ಳಿಗಳ ಹೆಸರು, ಭೌಗೋಳಿಕ ಜೀವನಗಳನ್ನು ಸುದ್ದಿ ಬಿಡುಗಡೆ ಪತ್ರಿಕೆಯಿಂದ ತಿಳಿಯಬಹುದು. ಪತ್ರಿಕೆ ತಾಲೂಕಿನ ಚಿತ್ರಣವನ್ನು ಬಣ್ಣಿಸುತ್ತಿರುವುದು ಆಶಾದಾಯಕ. ಪತ್ರಿಕೆಗಳು ವಿಶ್ವಾಸರ್ಹತೆಯಿಂದ ಕೂಡಿರಬೇಕು. ಮೌಲ್ಯಗಳನ್ನು ಆಧಾರಿತವಾಗಿರಿಸಬೇಕು ಎಂದು ಹೇಳಿದರು.


ಈ ಕಾರ್ಯಾಗಾರ ಪತ್ರಿಕೋದ್ಯಮಕ್ಕೆ ಅಡಿಪಾಯ-ಭಾಸ್ಕರ ಹೆಗ್ಡೆ

ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪತ್ರಿಕೋದ್ಯಮದ ಸವಾಲಿನ ಚಿಂತನೆಗಳು ಕಾರ್ಯಾಗಾರದಲ್ಲಿ ನಡೆಯಲಿ. ವಿದ್ಯಾರ್ಥಿಗಳ ಮಂಬರುವ ಜೀವನಕ್ಕೆ ಮತ್ತು ಪತ್ರಿಕೋದ್ಯಮಕ್ಕೆ ಈ ಕಾರ್ಯಾಗಾರ ಉತ್ತಮ ಅಡಿಪಾಯವಾಗುತ್ತದೆ ಎಂದರು. ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ವಂದಿಸಿದರು.
ಸುದ್ದಿ ಬಿಡುಗಡೆ ಸಿಇಓ ಸಿಂಚನಾ ಊರುಬೈಲು, ವಿದ್ಯಾರ್ಥಿಗಳಾದ ಮದನ್, ವಿಷ್ಣು, ಯಕ್ಷಿತ್ ಮತ್ತು ನೈದಿಲೆ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ದಿವ್ಯಶ್ರೀ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕಲಾನ್ವಿತ ಮತ್ತು ಬಳಗದವರು ಪ್ರಾರ್ಥಿಸಿದರು. ಹಿರಿಯ ಪತ್ರಕರ್ತರಾದ ನಾಗರಾಜ ಪೂವಣಿ, ಸಾಣೂರು ಶ್ರೀನಿವಾಸ ತಂತ್ರಿ ಮತ್ತು ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಮಂಜುನಾಥ ರೈ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಸುದ್ದಿ ಬಳಗದ ಜಾರಪ್ಪ ಪೂಜಾರಿ ಬೆಳಾಲು, ಹೆರಾಲ್ಡ್ ಪಿಂಟೋ, ಮನೀಶ್ ವಿ.ಅಂಚನ್, ನಿಶಾನ್ ಬಂಗೇರ, ನೈನಾ ಪ್ರಸಾದ್, ರೂಪೇಶ್, ಪುಷ್ಪರಾಜ್ ಶೆಟ್ಟಿ, ಶ್ರೇಯಾ ಶೆಟ್ಟಿ, ಸಂದೀಪ್ ಶೆಟ್ಟಿ, ಪಂಚೇಶ್ ಚಾರ್ಮಾಡಿ, ಕುಶಾಲಪ್ಪ ಗೌಡ, ಸುವೀರ್ ಜೈನ್, ಆದಿತ್ಯ ಶೆಟ್ಟಿ, ಗಿರೀಶ್ ಮತ್ತಿತರರು ಭಾಗವಹಿಸಿದ್ದರು.

ವಿದ್ಯಾರ್ಥಿಗಳೊಂದಿಗೆ ಸಂವಾದ
ಪತ್ರಿಕಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹಿರಿಯ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಾದ ಅತುಲ್, ಕಾರ್ತಿಕ್, ರಂಗಸ್ವಾಮಿ, ಅರ್ಜುನ್‌ತೇಜ್, ಅಕ್ಷಿತ್, ಶ್ರೇಯಾ, ಯಕ್ಷಿತ್ ನಾಳ, ವಿನುತಾ ಸಹಿತ ಹಲವು ಮಂದಿ ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ ಮತ್ತು ವಿದ್ಯಾರ್ಥಿನಿ ಮಾನಸ ಸಂವಾದ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗ್ಡೆ ಸ್ವಾಗತಿಸಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕಾರ್ಯಾಗಾರದ ಕೊನೆಯಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Exit mobile version