Site icon Suddi Belthangady

ನೆರಿಯ: ಸಿಯೋನ್ ಅಶ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಗಂಡಿಬಾಗಿಲು: ಸಿಯೋನ್ ಅಶ್ರಮದಲ್ಲಿ ಅ.10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಟ್ರಸ್ಟಿ ಸದಸ್ಯೆ ಮೇರಿ ಯು.ಪಿ. ಅಲಂಕರಿಸಿದ್ದರು.

ಅತಿಥಿಗಳಾಗಿ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಹರಿದಾಸ್ ಎಸ್.ಎಂ. ಮಾತನಾಡಿ ಮಾನಸಿಕ ಕಾಯಿಲೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಕಾರ್ಯಕಾರ ಸದಸ್ಯ ಅಡ್ವಕೇಟ್ ಶಿವಕುಮಾರ್ ಬಿ.ಎಸ್. ಮಾತನಾಡಿ ಮಾನಸಿಕ ಅಸ್ವಸ್ಥರನ್ನು ಸಾಕಿ ಸಲಹುತ್ತಿರುವ ಸಿಯೋನ್ ಆಶ್ರಮದ ಕೆಲಸ ಕಾರ್ಯಗಳು ಶ್ಲಾಘನೀಯ ಎಂದರು.

ಸಿಯೋನ್ ಆಶ್ರಮದ ಮ್ಯಾನೇಜರ್ ಸಂಧ್ಯಾ ಸುಭಾಷ್ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಸಂಸ್ಥೆಯ ವೈದ್ಯ ಶಿವಾನಂದ ಸ್ವಾಮಿಯವರು ಮಾನಸಿಕ ಕಾಯಿಲೆ ಬರಬಹುದಾದ ಸಾಧ್ಯತೆಗಳ ಕಾರಣಗಳು, ವಿಧಗಳು, ಲಕ್ಷಣಗಳು, ಪರಿಹಾರಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ರೆಡ್ ಕ್ರಾಸ್ ಸೊಸೈಟಿ ಕಾರ್ಯಕಾರ ಸದಸ್ಯೆ ಸುಕನ್ಯ, ಸಂಸ್ಥೆಯ ಟ್ರಸ್ಟಿ ಸದಸ್ಯ ಸುಭಾಷ್ ಯು.ಪಿ., ಆಶ್ರಮ ನಿವಾಸಿಗಳಾದ ರಾಜು ಮತ್ತು ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಸಿಯೋನ್ ಅಶ್ರಮದ ನಿವಾಸಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿವರ್ಗ, ಆಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಸಿಂಧು ವಿ.ಎಮ್. ಕಾರ್ಯಕ್ರಮ ನಿರೂಪಿಸಿದರು. ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಶಾಖೆಯ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

Exit mobile version