Site icon Suddi Belthangady

ಸುದ್ದಿ ಬಿಡುಗಡೆ, ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗ, ರೋಟರಿ ಕ್ಲಬ್ ಬೆಳ್ತಂಗಡಿ, ಮಂಗಳೂರು ಪತ್ರಕರ್ತರ ಸಂಘದ ಸಹಕಾರದೊಂದಿಗೆ ಪತ್ರಿಕಾ ಕಾರ್ಯಾಗಾರ: ಗ್ರಾಮೀಣ ಪತ್ರಿಕೋದ್ಯಮದ ಅವಕಾಶ, ಗ್ರಾಮೀಣ ವರದಿಗಾರರು ಎದುರಿಸುವ ಸಮಸ್ಯೆ, ಅಭಿವೃದ್ಧಿ ಪತ್ರಿಕೋದ್ಯಮ, ಪಾಸಿಟಿವ್-ನೆಗೆಟಿವ್ ಪತ್ರಿಕೋದ್ಯಮದ ಕುರಿತು ಚರ್ಚೆ, ಸಂವಾದ

ಬೆಳ್ತಂಗಡಿ: ಸುದ್ದಿ ಬಿಡುಗಡೆ ಪತ್ರಿಕೆ ಬೆಳ್ತಂಗಡಿ ಮತ್ತು ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಕಾಲೇಜು ಉಜಿರೆ ಇದರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ.ಕ. ಮಂಗಳೂರು ಮತ್ತು ಬೆಳ್ತಂಗಡಿಯ ಪತ್ರಕರ್ತರ ಹಾಗೂ ಮಾಧ್ಯಮದವರ ಸಹಕಾರದೊಂದಿಗೆ ಉಜಿರೆ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಸಭಾಂಗಣದಲ್ಲಿ ಅಕ್ಟೋಬರ್ 4ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪತ್ರಿಕಾ ಕಾರ್ಯಾಗಾರ ನಡೆಯಿತು.

ಗ್ರಾಮೀಣ ಪತ್ರಿಕೋದ್ಯಮದ ಅವಕಾಶಗಳು, ಗ್ರಾಮೀಣ ವರದಿಗಾರರು ಎದುರಿಸುವ ಸಮಸ್ಯೆಗಳು, ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪಾಸಿಟಿವ್ ಹಾಗೂ ನೆಗೆಟಿವ್ ಪತ್ರಿಕೋದ್ಯಮದ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ‌ ಕಾರ್ಯಕ್ರಮ ನಡೆಯಿತು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ವಂದಿಸಿದರು.‌ ಸುದ್ದಿ ಬಿಡುಗಡೆ ಸಿಇಓ ಸಿಂಚನಾ ಊರುಬೈಲು, ವಿದ್ಯಾರ್ಥಿಗಳಾದ ಮದನ್, ವಿಷ್ಣು, ಯಕ್ಷಿತ್ ಮತ್ತು ನೈದಿಲೆ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ದಿವ್ಯಶ್ರೀ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕಲಾನ್ವಿತ ಮತ್ತು ಬಳಗದವರು ಪ್ರಾರ್ಥಿಸಿದರು.‌ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರ ಅಧ್ಯಕ್ಷತೆಯಲ್ಲಿ ಸಂವಾದ ಗೋಷ್ಠಿ‌ ನಡೆಯಿತು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ಬಿ. ಹರೀಶ್ ರೈ, ಹಿರಿಯ ಪತ್ರಕರ್ತರಾದ ಅಂಕಣಗಾರ ಜಿತೇಂದ್ರ ಕುಂದೇಶ್ವರ, ಪುತ್ತೂರು ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲರಾದ ಲೇಖಕ ರಾಕೇಶ್ ಕುಮಾರ್ ಕಮ್ಮಾಜೆ ಮತ್ತು ಎಸ್.ಡಿ.ಎಂ.ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ ಮತ್ತು ವಿದ್ಯಾರ್ಥಿನಿ ಮಾನಸ ಸಂವಾದ ಕಾರ್ಯಕ್ರಮ‌ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗ್ಡೆ ಸ್ವಾಗತಿಸಿದರು.‌ ಹಿರಿಯ ಪತ್ರಕರ್ತರಾದ ನಾಗರಾಜ ಪೂವಣಿ, ಸಾಣೂರು ಶ್ರೀನಿವಾಸ ತಂತ್ರಿ ಮತ್ತು ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಮಂಜುನಾಥ ರೈ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸುದ್ದಿ ಬಳಗದ ಜಾರಪ್ಪ ಪೂಜಾರಿ, ಹೆರಾಲ್ಡ್ ಪಿಂಟೋ, ಮನೀಶ್ ವಿ.‌ಅಂಚನ್, ನಿಶಾನ್ ಬಂಗೇರ, ನೈನಾ ಪ್ರಸಾದ್, ರೂಪೇಶ್, ಪುಷ್ಪರಾಜ್ ಶೆಟ್ಟಿ, ಶ್ರೇಯಾ ಶೆಟ್ಟಿ, ಸಂದೀಪ್ ಶೆಟ್ಟಿ, ಪಂಚೇಶ್, ಕುಶಾಲಪ್ಪ ಗೌಡ, ಸುವೀರ್ ಜೈನ್, ಆದಿತ್ಯ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

Exit mobile version