ಗುರುವಾಯನಕೆರೆ: ಎಕ್ಸೆಲ್ ಪಿಯು ಕಾಲೇಜಿನಲ್ಲಿ ಅಕ್ಟೋಬರ್ 2ರಂದು ರಾಷ್ಟ್ರ ಪಿತ ಮಹಾತ್ಮಾ ಗಾಂಧಿ ಮತ್ತು ಭಾರತದ ದ್ವಿತೀಯ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಅಂಗವಾಗಿ, ಎಕ್ಸೆಲ್ ಪಿಯು ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಅಯೋಜಿಸಲಾಯಿತು. ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಲಾಯಿತು.
ಎಕ್ಸೆಲ್ ಪಿಯು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು, ಗಾಂಧೀಜಿಯವರ ಅಹಿಂಸಾ ತತ್ತ್ವ, ಶಾಂತಿ, ಸ್ವಚ್ಛತೆ, ಹಾಗೂ ನೈತಿಕತೆ ಕುರಿತಾದ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಲಾಲ ಬಹಾದೂರ್ ಶಾಸ್ತ್ರಿಯವರ ಸ್ವಾತಂತ್ರ್ಯ ಹೋರಾಟದ ಹಾದಿ ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗುರುವಾಯನಕೆರೆಯಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ರಸ್ತೆಯ ಎರಡೂ ಬದಿಗಳನ್ನು ಸ್ವಚ್ಛಗೊಳಿಸುತ್ತಾ ಮಧ್ಯಾಹ್ನ 12 ಗಂಟೆಯವರೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದರು. ಗುರುವಾಯನಕೆರೆಯ ನಾಲ್ಕು ದಿಕ್ಕುಗಳ ಎರಡು ಬದಿಯ ಕಿಲೋ ಮೀಟರ್ ಗಟ್ಟಲೆ ಶುಚಿತ್ವ ಮಾಡಿದರು.ಎಕ್ಸೆಲ್ ಸ್ವಚ್ಛತಾ ಅಭಿಯಾನವನ್ನು ಉದ್ಘಾಟಿಸಿದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಸ್ವಚ್ಛತೆಗೆ ಸಂಬಂಧಿಸಿದಂತೆ ಕರೆ ನೀಡಿದರು. “ನಾವು ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರೆ, ದೇಶವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ಆರಂಭವಾಗುತ್ತದೆ ಮತ್ತು ಇದು ದೇಶದ ಒಟ್ಟಾರೆ ಅಭಿವೃದ್ದಿಗೆ ಸಹಾಯಕವಾಗುತ್ತದೆ” ಎಂದು ಹೇಳಿದರು. ಅಲ್ಲದೆ, ಅವರು ವಿದ್ಯಾರ್ಥಿಗಳು, ಉಪನ್ಯಾಸಕರು, ಹಾಗೂ ಹಾಸ್ಟೆಲ್ ವಾರ್ಡನ್ಗಳಿಗೆ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಅರಮಲೆ ಬೆಟ್ಟ ಕ್ಯಾಂಪಸ್ ನ ಪ್ರಭಾರ ಪ್ರಾಚಾರ್ಯ ಡಾ.ಪ್ರಜ್ವಲ್, ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ, ವಿಭಾಗ ಮುಖ್ಯಸ್ಥ ಪ್ರಸನ್ನ, ಪ್ರಭಾಕರ್, ರವಿ, ಹಾಗೂ ಉಪನ್ಯಾಸಕರು, ಹಾಸ್ಟೆಲ್ ವಾರ್ಡನ್ಗಳು, ಮತ್ತು ಮೊದಲ ವರ್ಷದ ಪಿಯು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಮುನೀರ್ ನಿರ್ವಹಿಸಿದರು, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ ಅವರು ಸ್ವಾಗತಿಸಿದರು, ಮತ್ತು ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್ ಅವರು ವಂದನಾರ್ಪಣೆ ಸಲ್ಲಿಸಿದರು.