Site icon Suddi Belthangady

ಸಾಹಸಮಯ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ

ಬೆಳ್ತಂಗಡಿ: ಮೊದಲ ವರ್ಷದ ಪ್ರಯತ್ನದಲ್ಲಿ ಫಲ ಸಿಗದೇ ಇದ್ದಾಗ, ಎರಡನೇ ವರ್ಷ ಮತ್ತೆ ತಯಾರಿ ನಡೆಸಿದ ಯುವಕರ ಶ್ರಮಕ್ಕೆ ಸೂಕ್ತ ಪ್ರತಿಫಲ ಸಿಕ್ಕಿದೆ. ರಾಜ್ಯದ ಕುಗ್ರಾಮ, ನಕ್ಸಲ್ ಪೀಡಿತ ಗ್ರಾಮವೆಂದೇ ಗುರುತಿಸಲ್ಪಟ್ಟಿದ್ದ ಕುತ್ಲೂರು ಈಗ ದೇಶದ ಪ್ರವಾಸೋದ್ಯಮ ಕ್ಷೇತ್ರದ ಭೂಪಟದಲ್ಲಿ ಹೊಸ ಗೆರೆ ಎಳೆದಿದೆ.
ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ ಮೂಲಕ ಸುಸ್ಥಿರ ಅಭಿವೃದ್ಧಿ ಹೊಂದುತ್ತಿರುವ ಹಳ್ಳಿ-ಗ್ರಾಮಗಳನ್ನು ಗುರುತಿಸುವ ಸಂಬಂಧ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಸ್ಪರ್ಧೆ -೨೦೨೪ನ್ನು ಏರ್ಪಡಿಸಿದ್ದು, ಇದರ ಸಾಹಸಮಯ ಪ್ರವಾಸಿ ತಾಣ (ಅಡ್ವೆಂಚರ್ ಟೂರಿಸಂ) ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಲೂರು ಗ್ರಾಮ ಆಯ್ಕೆಯಾಗಿದೆ. ಸೆ.೨೭ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪಟ್ಟು ಬಿಡದ ಯುವಕರು: ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಗ್ರಾಮದ ಹರೀಶ್ ಡಾಕಯ್ಯ ಪೂಜಾರಿ ಹಾಗೂ ಕತಾರ್ ಉದ್ಯೋಗಿ ಸಂದೀಪ್ ಪೂಜಾರಿ ಕುತ್ಲೂರು ಈ ಸಾಧನೆಯ ಹಿಂದಿನ ರೂವಾರಿಗಳು. ಇವರಿಗೆ ಶಿವರಾಜ್ ಅಂಚನ್ ಎಂಬುವವರೂ ಸಹಕರಿಸಿದ್ದಾರೆ. ನಾರಾವಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಈ ಮೂವರು ಸೇರಿಕೊಂಡು ಗ್ರಾಮದ ಪ್ರವಾಸೋದ್ಯಮ ಅವಕಾಶಗಳ ಕುರಿತು ಸಮಗ್ರ ವಿವರಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು. ಸುದೀರ್ಘವಾದ ಈ ಪ್ರಕ್ರಿಯೆಯು ವಿಡಿಯೋ, ಫೋಟೋ, ಪಿಪಿಟಿ ಸಹಿತ ಹಲವು ಸುತ್ತುಗಳನ್ನು ಒಳಗೊಂಡಿತ್ತು. ಆನ್‌ಲೈನ್ ಮೂಲಕವೇ ಎಲ್ಲ ಪ್ರಕ್ರಿಯೆಗಳು ನಡೆದಿದ್ದವು. ಕಳೆದ ವರ್ಷವೂ ಇದೇ ತಂಡ ಸ್ಪರ್ಧಿಸಿ ರಾಷ್ಟ್ರಮಟ್ಟದವರೆಗೆ ಹೋಗಿದ್ದರೂ, ಅಂತಿಮವಾಗಿ ಹಂಪಿ ಗ್ರಾಮ ಆಯ್ಕೆಯಾಗಿದ್ದರಿಂದ ನಿರಾಸೆಯಾಗಿತ್ತು. ಈ ಬಾರಿ ತಂಡವು ಮತ್ತಷ್ಟು ಶ್ರಮವಹಿಸಿ, ರಾಷ್ಟ್ರಮಟ್ಟದಲ್ಲಿ ಕುತ್ಲೂರು ಗ್ರಾಮಕ್ಕೆ ಪ್ರವಾಸೋದ್ಯಮದ ಕಿರೀಟ ತೊಡಿಸುವಲ್ಲಿ ಯಶಸ್ವಿಯಾಗಿದೆ.

ಕುತ್ಲೂರಿನಲ್ಲಿ ಅಂಥzನಿದೆ?
ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕುತ್ಲೂರು ಗ್ರಾಮ ಪ್ರಾಕೃತಿಕ ಸೌಂದರ್ಯವನ್ನೇ ಹೊದ್ದು ಮಲಗಿದೆ. ಗ್ರಾಮದಲ್ಲಿ ಅರ್ಬಿ ಫಾಲ್ಸ್ ಎಂದು ಸ್ಥಳೀಯರು ಕರೆಯುವ ಅದ್ಭುತವಾದ ಜಲಪಾತವಿದ್ದು, ವರ್ಷದ ಏಳೆಂಟು ತಿಂಗಳು ತುಂಬಿ ಹರಿಯುತ್ತಿರುವುದನ್ನು ವೀಕ್ಷಿಸುವುದೇ ಸೊಬಗು. ಇಲ್ಲಿನ ಬೆಟ್ಟದಲ್ಲಿ ಹಲವರು ಟ್ರೆಕ್ಕಿಂಗ್ ಮಾಡುತ್ತಿದ್ದು, ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಬೆಟ್ಟದಲ್ಲಿ ಬೈಕ್‌ಗಳಲ್ಲಿ ಸಾಹಸ ಕ್ರೀಡೆಗಳೂ ನಡೆಯುತ್ತವೆ. ಪಕ್ಕದಲ್ಲೇ ನದಿ ಇದ್ದು, ಫಿಶಿಂಗ್ ಮಾಡಬಹುದು. ಕುತ್ಲೂರಿನ ೫೦ ಕಿ.ಮೀ. ಆಸುಪಾಸಿನಲ್ಲಿ ಧರ್ಮಸ್ಥಳ, ಕಾರ್ಕಳ, ಮೂಡುಬಿದಿರೆ, ಮಂಗಳೂರು ಮತ್ತಿತರ ಜನಪ್ರಿಯ ಪ್ರವಾಸಿ ತಾಣ, ಬೀಚ್, ದೇವಸ್ಥಾನ, ತೀರ್ಥಕ್ಷೇತ್ರಗಳಿವೆ. ಇವೆಲ್ಲ ಮಾಹಿತಿಯನ್ನು ಯುವಕರ ತಂಡ ಪ್ರವಾಸೋದ್ಯಮ ಇಲಾಖೆಗೆ ಅಚ್ಚುಕಟ್ಟಾಗಿ ಫೋಟೋ, ವಿಡಿಯೋ ಸಹಿತ ದಾಖಲೆಗಳಲ್ಲಿ ಒಪ್ಪಿಸಿದೆ.

ಗ್ರಾಮದ ಅಭಿವೃದ್ಧಿ ಉತ್ತೇಜನ:
ಕುಗ್ರಾಮವೆಂದು ಗುರುತಿಸಲ್ಪಡುವ ನಮ್ಮ ಕುತ್ಲೂರು ಗ್ರಾಮ ಈಗ ದೇಶದ ಅಡ್ವೆಂಚರ್ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೇಂದ್ರದಿಂದ ಗುರುತಿಸಲ್ಪಟ್ಟಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ಯಾವುದೇ ನಗದು ಬಹುಮಾನ ಹೊಂದಿಲ್ಲ. ಆದರೆ, ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್, ಜಾಹೀರಾತುಗಳಲ್ಲಿ ಕುತ್ಲೂರು ಸ್ಥಾನ ಪಡೆಯಲಿದೆ. ಆ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತು, ಗ್ರಾಮದ ಅಭಿವೃದ್ಧಿಯೂ ಆಗಬೇಕೆಂಬುದು ನಮ್ಮ ತಂಡದ ಆಶಯ ಎಂದು ರೂವಾರಿಗಳಾದ ಹರೀಶ್ ಡಾಕಯ್ಯ ಹಾಗೂ ಸಂದೀಪ್ ಪೂಜಾರಿ ತಿಳಿಸಿದ್ದಾರೆ.

Exit mobile version