Site icon Suddi Belthangady

ತಿರುಪತಿ ಪ್ರಸಾದದ ಲಡ್ಡುವಿನಲ್ಲಿ ಕೊಬ್ಬನ್ನು ಮಿಶ್ರಣ ಮಾಡಿರುವವರ ಮೇಲೆ ದೂರು ದಾಖಲಿಸಲು ದೇವಸ್ಥಾನ ಮಹಾಸಂಘದ ವತಿಯಿಂದ ತಹಶೀಲ್ದಾರ್ ಗೆ ಮನವಿ

ಬೆಳ್ತಂಗಡಿ: ಜಗತ್ತಿನಾದ್ಯಂತ ಇರುವ ಕೋಟ್ಯಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿನ ಪ್ರಸಾದದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿರುವುದು ಅತ್ಯಂತ ಗಂಭೀರ ವಿಷಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಬಹಿರಂಗಪಡಿಸಿದ ನಂತರ ಜಗತ್ತಿನಲ್ಲಿನ ಹಿಂದೂ ಜನಾಂಗದಲ್ಲಿ ತೀವ್ರ ಆಕ್ರೋಶದ ಅಲೆ ಭುಗಿಲೆದ್ದಿದೆ. ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸುವುದು, ಇದು ಕೇವಲ ಕಲಬೆರಿಕೆ ಅಲ್ಲದೆ ಹಿಂದೂಗಳ ಧರ್ಮಶ್ರದ್ಧೆಯ ಮೇಲೆ ಪ್ರಯತ್ನ ಪೂರ್ವಕವಾಗಿ ಮಾಡಿರುವ ಧಾರ್ಮಿಕ ಆಘಾತವಾಗಿದೆ. ಇದು ಹಿಂದೂಗಳ ಜೊತೆಗೆ ಮಾಡಿರುವ ವಿಶ್ವಾಸ ಘಾತವೇ ಆಗಿದೆ. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇವರ ತಂದೆ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿ ಇವರು ಮುಖ್ಯಮಂತ್ರಿ ಆಗಿರುವಾಗ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದ ಪವಿತ್ರ ಲಡ್ಡು ತಯಾರಿಸುವ ಕಾಂಟ್ರಾಕ್ಟ್ ಒಂದು ಕ್ರೈಸ್ತ ಕಂಪನಿಗೆ ನೀಡಿದ್ದರು. ದೇವಸ್ಥಾನದ ಟ್ರಸ್ಟಿ ಸ್ಥಾನದಲ್ಲಿ ಕ್ರೈಸ್ತ ವ್ಯಕ್ತಿಯನ್ನು ನೇಮಿಸಿದ್ದರು. ದೇವಸ್ಥಾನ ಪರಿಸರದಲ್ಲಿ ಕ್ರೈಸ್ತ ಮಿಶಿನರಿಗಳ ಮತಾಂತರಕ್ಕೆ ಪ್ರೋತ್ಸಾಹ ನೀಡಿದ್ದರು ಮುಂತಾದ ಅನೇಕ ಪಾಪ ಕೃತ್ಯಗಳು ಆ ಕಾಲದಲ್ಲಿ ನಡೆದಿದ್ದವು. ಅದರದೇ ಮುಂದುವರೆದ ಭಾಗ ಎಂದರೆ ಈ ಪ್ರಸಾದದ ಲಡ್ಡುವಿನಲ್ಲಿ ಕೊಬ್ಬು ಸೇರಿಸಿ ಹಿಂದೂಗಳ ಧರ್ಮಭ್ರಷ್ಟ ಮಾಡುವ ಷಡ್ಯಂತ್ರ ರಚಿಸಲಾಗಿತ್ತು ಎಂದು ಕರ್ನಾಟಕ ದೇವಸ್ಥಾನಗಳ ಮಹಾಸಂಘದ ರಾಜ್ಯ ಸಂಯೋಜಕ ಜಯ ಸಾಲಿಯಾನ್ ಇವರು ಪ್ರತಿಪಾದಿಸಿದ್ದಾರೆ. ಯಾರು ಈ ಮಹಾ ಪಾಪ ಮಾಡಿದ್ದಾರೆ, ಅವರ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ದೂರು ದಾಖಲಿಸಿ ಅವರನ್ನು ತಕ್ಷಣ ಬಂದಿಸಬೇಕು ಎಂದು ಜಯ ಸಾಲಿಯಾನ್ ರವರು ಆಗ್ರಹಿಸಿದ್ದಾರೆ.

ಈಗ ಕೇವಲ ಈ ಪ್ರಸಾದದ ಲಡ್ಡುವಿನ ಪ್ರಕರಣದಲ್ಲಿ ಅಷ್ಟೇ ಅಲ್ಲದೆ, ಜಗನ್ ಮೋಹನ್ ರೆಡ್ಡಿ ಸರಕಾರ ಮತ್ತು ಅವರ ತಂದೆ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿ ಇವರ ಕಾರ್ಯಕಾಲದಲ್ಲಿ ತಿರುಪತಿ ದೇವಸ್ಥಾನಕ್ಕೆ ಸಂಬಂಧಿತ ತೆಗೆದುಕೊಂಡುರುವ ಎಲ್ಲಾ ನಿರ್ಣಯದ ವಿಸ್ತೃತ ವಿಚಾರಣೆ ನಡೆಸಬೇಕು. ಇದರಲ್ಲಿ ಹಿಂದೂ ಧರ್ಮವಿರೋಧಿ ನಿರ್ಣಯ ತೆಗೆದುಕೊಂಡಿದ್ದರೆ, ಅವು ಎಲ್ಲವೂ ತಕ್ಷಣವೇ ರದ್ದು ಪಡಿಸಬೇಕೆಂದು ಕರ್ನಾಟಕ ದೇವಸ್ಥಾನಗಳ ಮಹಾಸಂಘ ಆಂಧ್ರಪ್ರದೇಶ ಸರಕಾರಕ್ಕೆ ಆಗ್ರಹಿಸಿದೆ.

ಅದೇ ರೀತಿ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದ ಪವಿತ್ರ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆ ಬೆರೆಸುವ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಇವರಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜಯಸಾಲಿಯಾನ್ ಬಳೆಂಜ ಶ್ರೀ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ, ತಿಮ್ಮಪ್ಪ ಗೌಡ ಬೆಳಾಲು ಶ್ರೀ ನಾಗಬ್ರಹ್ಮ ದೇವಸ್ಥಾನ ಇಂದಬೆಟ್ಟು, ಬಾಲಕೃಷ್ಣ ಗೌಡ ಶ್ರೀ ಗುಡ್ಡಮಲ್ಲೇಶ್ವರ ದೇವಸ್ಥಾನ ರೇಖ್ಯಾ, ಯಶವಂತ ಪಂಚದುರ್ಗಾ ದೇವಸ್ಥಾನ ಕೊಯ್ಯೂರು, ಸಂತೋಷ್ ಶ್ರೀ ನಾಗಾಂಬಿಕ ದೇವಸ್ಥಾನ ಮುಂಡೂರು, ಕುಸುಮಾಕರ ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ, ಕಿರಣ್ ಭಟ್ ಅರ್ಚಕರು ಶ್ರೀ ಪರಶುರಾಮ ದೇವಸ್ಥಾನ ಮುಂಡಾಜೆ, ಕೆ ಪದ್ಮನಾಭ ಶೆಟ್ಟಿಗಾರ್ ಪದ್ಮಶ್ರೀ ಉಜಿರೆ, ದಿನೇಶ್ ನಡ, ರಾಘವೇಂದ್ರ ಕಾಮತ್ ಉಜಿರೆ, ಸಂಜೀವ ಶೆಟ್ಟಿ ಉಜಿರೆ, ಹರೀಶ್ ಜೆಕೆ ಹಾಗೂ ಯೋಗೀಶ್ ಕೆ. ಉಪಸ್ಥಿತರಿದ್ದರು.

Exit mobile version