Site icon Suddi Belthangady

ಕಳೆಂಜ ಸ.ನಂ. 309ರಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಸರ್ವೆ ಕಾರ್ಯ ಪೂರ್ಣಗೊಳಿಸಲು ಕೆ.ಎಸ್.ಎಂ.ಸಿ.ಎ. ನೇತೃತ್ವದಲ್ಲಿ ಎಂ ಎಲ್ ಸಿ ಐವನ್ ಡಿ’ಸೋಜರಿಗೆ ಮನವಿ

ಬೆಳ್ತಂಗಡಿ: ಕಳೆಂಜ ಗ್ರಾಮದ ಸ.ನಂ.309ರಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರನೀಡುವ ಸಲುವಾಗಿ ಜಮೀನಿನ ಜಂಟಿ ಸರ್ವೆ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೆ.ಎಸ್.ಎಂ.ಸಿ ಎ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಅವರಿಗೆ ಮನವಿ ಸಲ್ಲಿಸಿದರು.

ಕಳೆಂಜ ಗ್ರಾಮದ 309 ಸರ್ವೆ ನಂಬರ್ ನಲ್ಲಿ ದಶಕಗಳಿಂದ ವಾಸಿಸುತ್ತಾ ಬಂದಿರುವ ಜನರು ಜಮೀನು ಹಕ್ಕು ಪತ್ರ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿಂದೆ ಅಂದು ಶಾಸಕರಾಗಿದ್ದ ವಸಂತ ಬಂಗೇರ ಅವರು ಕೆಲವು ಕುಟುಂಬಗಳಿಗೆ ಅಕ್ರಮ ಸಕ್ರಮ ಸಮಿತಿಯಲ್ಲಿ ಜಮೀನು ಮಂಜೂರು ಮಾಡಿದ್ದರೂ ಹಕ್ಕು ಪತ್ರ ಲಭಿಸಿರಲಿಲ್ಲ. ಸದ್ರಿ ಸರ್ವೆ ನಂಬರ್ ನಲ್ಲಿ ಅರಣ್ಯ ಇಲಾಖೆಯ ಜಮೀನು ಹಾಗೂ ಕಂದಾಯ ಇಲಾಖೆಯ ಜಮೀನನ್ನು ಪ್ರತ್ಯೇಕಿಸದ ಕಾರಣದಿಂದಾಗಿ ಹಕ್ಕುಪತ್ರ ಪಡೆಯಲು ಸಮಸ್ಯೆಯಾಗುತ್ತಿದೆ. ಈ ಹಿನ್ನಲೆಯಲ್ಲಿ 309 ಸರ್ವೆ ನಂಬರ್ ನಲ್ಲಿ ಇರುವ ಜಮೀನಿನ ಜಂಟಿ ಸರ್ವೆಯನ್ನು ಸಾಧ್ಯವಾದಷ್ಟು ವೇಗವಾಗಿ ಪೂರ್ಣಗೊಳಿಸಿ ಕೊಡುವಂತೆ ಮುಖ್ಯಮಂತ್ರಿಯವರೊಂದಿಗೆ ಹಾಗೂ ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಂಡು ಹಕ್ಕುಪತ್ರ ಲಭಿಸಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಯ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಅವರು ಅಧಿಕಾರಿಗಳು ಸಾಧ್ಯವಾದಷ್ಟು ವೇಗವಾಗಿ ಸರ್ವೆ ಕಾರ್ಯವನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.

ನಿಯೋಗದಲ್ಲಿ ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ, ಕೇಂದ್ರ ಸಮಿತಿ ಸದಸ್ಯ ಜಾರ್ಜ್, ಧರ್ಮಸ್ಥಳ ವಲಯ ಸಮಿತಿ ಅಧ್ಯಕ್ಷ ಜೈಸನ್ ಪಟ್ಟೇರಿ, ಮುಖಂಡ ಜೋಮೆಟ್ ಕಳೆಂಜ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version