Site icon Suddi Belthangady

ಪತ್ರಿಕಾಗೋಷ್ಠಿ- ಕೆ.ಆರ್.ಎಸ್ ಪಕ್ಷ ನೂತನ ತಾಲೂಕು ಸಮಿತಿ ರಚನೆ- ಭ್ರಷ್ಟಾಚಾರದ ವಿರುದ್ಧ ಹೋರಾಟ: ಜಿಲ್ಲಾಧ್ಯಕ್ಷ ವೇಣುಗೋಪಾಲ್

ಬೆಳ್ತಂಗಡಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ.ಆರ್.ಎಸ್) ಬೆಳ್ತಂಗಡಿ ತಾಲೂಕು ನೂತನ ಸಮಿತಿ ಆಸ್ತಿತ್ವಕ್ಕೆ ಬಂದಿದ್ದು ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದ ಗುರಿ ಹೊಂದಿದೆ ಎಂದು ಕೆ ಆರ್ ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್ ಹೇಳಿದರು.

ಅವರು ಸೆ.20ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

2016ರಲ್ಲಿ ಕೃಷ್ಣರೆಡ್ಡಿಯವರ ನೇತೃತ್ವದಲ್ಲಿ ಪಕ್ಷ ಸ್ಥಾಪನೆಯಾಗಿದ್ದು, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮೂಲಕ ರಾಜ್ಯದ ನೂರಾರು ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಭಿಯಾನ ನಡೆಸುತ್ತಿದೆ. ಸರಕಾರಿ ಕಚೇರಿಗಳಿಗೆ ಬರುವ ಜನಸಾಮಾನ್ಯರಿಗೆ ಅಧಿಕಾರಿಗಳು ಗೌರವ ನೀಡುತ್ತಿಲ್ಲ, ಬಡವರಿಗೆ ಅನ್ಯಾಯವಾಗುತ್ತಿದೆ. ಯಾವುದೇ ಕೆಲಸ ಲಂಚ ನೀಡದೆ ಆಗುತ್ತಿಲ್ಲ, ತಾಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಇದೆ. ಇಂತಹ ವಿಷಯಗಳ ದೂರು ನಮಗೆ ಬಂದಾಗ ನಾವು ಅಮಾಯಕರ ಪರವಾಗಿ ಹೋರಾಟಗಳನ್ನು ನಡೆಸುತ್ತೇವೆ. ಯಾವುದೇ ದೌರ್ಜನ್ಯ ದಬ್ಬಾಳಿಕೆ, ಶೋಷಣೆ, ಅನ್ಯಾಯಗಳು ನಡೆದಾಗ ನಮ್ಮ ಕಾರ್ಯಕರ್ತರು ನ್ಯಾಯ ಒದಗಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಬಂಟ್ವಾಳದಲ್ಲಿ ನಮ್ಮ ಪಕ್ಷದ ಜಿಲ್ಲಾ ಕಚೇರಿ ಇದ್ದು, ಸರಕಾರಿ ಕಚೇರಿಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರು ನಮ್ಮ ಗಮನಕ್ಕೆ ತರಬಹುದು. ಪತ್ರಿಕೆ ಅಥವಾ ಮಾಧ್ಯಮದ ಮೂಲಕ ನಮ್ಮ ಗಮನಕ್ಕೆ ಬಂದರೆ, ನಾವಾಗಿಯೇ ಖುದ್ದು ಬಂದು ಅವರಿಗೆ ಕೆಲಸ ಮಾಡಿಸಿಕೊಡುತ್ತೇವೆ. ರಾಜ್ಯದಲ್ಲಿ 48 ಸಾವಿರ ಸದಸ್ಯರನ್ನು ಹೊಂದಿದ್ದು ಮುಂದೆ ಬರುವ ಉಪ ಚುನಾವಣೆ, ಹಾಗೂ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ವಿಧಾನ ಸಭಾ ಎಲ್ಲಾ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡಲಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಈಗ ಪಕ್ಷ ಆಸ್ತಿತ್ವಕ್ಕೆ ಬಂದಿದ್ದು, ಮುಂದೆ ತಾಲೂಕಿನಲ್ಲಿ ಕಚೇರಿ ತೆರೆದು ಜನರ ಸೇವೆ ಮಾಡಲು ಸಿದ್ದರಾಗಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್.ಎಸ್ ಪಕ್ಷದ ತಾಲೂಕು ಅಧ್ಯಕ್ಷ ಹೈದರಾಲಿ, ಪ್ರಧಾನ ಕಾರ್ಯದರ್ಶಿ ರಫೀಕ್ ಉಪ್ಪಿನಂಗಡಿ, ಕಾರ್ಯದರ್ಶಿಗಳಾದ ಆಶ್ರಫ್ ಜಾರಿಗೆಬೈಲ್, ರಮೀಝ್, ನಝೀರ್, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸಲೀಂ ಜಾರಿಗೆಬೈಲ್‌, ಶುಕ್ರು ಜಾರಿಗೆಬೈಲ್‌, ಜಿಲ್ಲಾ ಸಮಿತಿಯ ಅನೀಸ್ ಉಪಸ್ಥಿತರಿದ್ದರು.

Exit mobile version