Site icon Suddi Belthangady

ವೇಣೂರು: ಕ್ರಿಸ್ತರಾಜ ನವಚೇತನ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ವೇಣೂರು: ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ವೇಣೂರು ಕ್ರಿಸ್ತರಾಜ ನವಚೇತನ ವಿಶೇಷ ಶಾಲೆ ಇವರ ಜಂಟಿ – ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆ.14ರಂದು ನವಚೇತನ ಅಂಗ್ಲಮಾಧ್ಯಮ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ 11 ಶಾಲೆಗಳಿಂದ 190 ಶಿಕ್ಷಕರು ಹಾಗೂ ಶಿಕ್ಷಕೇತರರು ಹಾಜರಾಗಿದ್ದರು. ವಾದ್ಯದೊಂದಿಗೆ ನವಚೇತನ ಅಂಗ್ಲಮಾಧ್ಯಮದ ಮಕ್ಕಳು ಅತಿಥಿಗಳನ್ನು ಸ್ವಾಗತಿಸಿದರು. ಉದ್ಘಾಟನೆಯನ್ನು ಭಗಿನಿ ತೆಲ್ಮಾ ಡಿ’ಸೋಜ ಸಂಚಾಲಕಿ ನೆರವೇರಿಸಿದರು.

ಮುಖ್ಯ ಅತಿಥಿಗಳಾದ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಮಾತಾನಾಡಿ ಎಲ್ಲಾ ವಿಶೇಷ ಶಿಕ್ಷಕರನ್ನು ನೀಡುವ ಸೇವೆಯನ್ನು ಹೊಗಳಿ ಅವರನ್ನು ಹುರಿದುಂಬಿಸಿದರು. ಕರ್ನಾಟಕ ರಾಜ್ಯ ಶಿಕ್ಷಕ-ಶಿಕ್ಷಕೇತರರ ಸಂಘ ಪ್ರಧಾನ ಕಾರ್ಯದರ್ಶಿ ಮತ್ತು ಶಕ್ತಿನಗರ ಸಾನಿಧ್ಯ ವಸತಿಯುತ ವಿಶೇಷ ಶಾಲೆ ಸ್ಥಾಪಕರು ಡಾ.ವಸಂತ ಕುಮಾರ್ ಶೆಟ್ಟಿರವರು ಮಾತನಾಡಿ ಪ್ರಸ್ತುತ ವಿಶೇಷ ಶಾಲಾ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿ, ಸಂಬಂಧಿಸಿದ ಮೇಲಾಧಿಕಾರಿಗಳನ್ನು ಭೇಟಿ ಮಾಡಿ ಬಗೆ ಹರಿಸುವಂತೆ ಭರವಸೆಯನ್ನೀಡಿದರು.

ಗೌರವಾನ್ವಿತ ಅತಿಥಿಗಳಾದ ನವಚೇತನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಶಾಲಿನಿ ಡಿ’ಸೋಜ, ಭಗಿನಿ ಲಿಲ್ಲಿ ಗೋಮ್ಸ್ ರವರು ಉಪಸ್ಥಿತರಿದ್ದರು. ಜಿಲ್ಲಾ ವಿಶೇಷ ಶಿಕ್ಷಕ-ಶಿಕ್ಷಕೇತರರ ಸಂಘದ ಅಧ್ಯಕ್ಷೆ ಮತ್ತು ಕಿನ್ನಿಗೋಳಿ ಸೈಂಟ್ ಮೇರಿಸ್ ಶಾಲೆ ಮುಖ್ಯೋಪಾಧ್ಯಾಯಿನಿ ರೇಷ್ಮಾ ಮರಿಯ ಮಾರ್ಟಿಸ್ ಇವರು ಎಲ್ಲಾ ವಿಶೇಷ ಶಿಕ್ಷಕರು ಹಾಗೂ ಸಂಘದ ಪದಾಧಿಕಾರಿಗಳು ನೀಡುವ ಬೆಂಬಲಕ್ಕೆ ವಂದಿಸಿ, ಎಲ್ಲರನ್ನು ಶ್ಲಾಘಿಸಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ನಮ್ಮ ಶಾಲಾ ಸಿಬ್ಬಂದಿಗಳಾದ ಗೀತಾ ಶೆಟ್ಟಿ ಮತ್ತು ಭಗಿನಿ ಲಿಲ್ಲಿ ಗೋಮ್ಸ್ ರವರನ್ನು ಸಂಘದ ಅಧ್ಯಕ್ಷರು ಹಾಗೂ ಸಮಿತಿ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು. ಶಾಲಾ ವತಿಯಿಂದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕ-ಶಿಕ್ಷಕೇತರರ ಸಂಘ ಡಾ|ವಸಂತ ಕುಮಾರ್ ಶೆಟ್ಟಿ ಮತ್ತು ರೇಷ್ಮಾ ಮರಿಯ ಮಾರ್ಟಿಸ್ ಇವರನ್ನು ಸನ್ಮಾನಿಸಲಾಯಿತು.

ಪ್ರತಿ ಶಾಲಾ ಸಿಬ್ಬಂದಿಗಳು ವಿವಿಧ ನೃತ್ಯ ಹಾಗೂ ಹಾಸ್ಯಮಯದ ಮೂಲಕ ಎಲ್ಲರನ್ನು ಆನಂದಿಸಿದರು. ವಿವಿಧ ಆಟೋಟ ಸ್ಪರ್ಧೆಗಳನ್ನು ಆಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಸಂಘದ ಪದಾಧಿಕಾರಿಗಳ ಹುದ್ದೆಯು ಇನ್ನೊಂದು ವರ್ಷಕ್ಕೆ ಪುರ್ನವರ್ತಿಸಲಾಯಿತು. ಸುಮಾ ಡಿ’ಸಿಲ್ವಾರವರು ಧನ್ಯವಾದಗೈದರು.ಮತ್ತು ನೆನಪಿನ ಕಾಣಿಕೆಯನ್ನು ನೀಡಲಾಯಿತು.

Exit mobile version