Site icon Suddi Belthangady

ನಡ ಸರಕಾರಿ ಪಿ.ಯು ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ- ತಿಳಿ ಮನಸ್ಸು ಹಾಳುಗೆಡವಲು ಯತ್ನಿಸುವವರ ಬಗ್ಗೆ ಎಚ್ಚರ ಅಗತ್ಯ: ಪ್ರಾಚಾರ್ಯ ಚಂದ್ರಶೇಖರ್

ಬೆಳ್ತಂಗಡಿ: ಹದಿಹರೆಯದ ವಿದ್ಯಾರ್ಥಿಗಳ ಮನಸ್ಸು ತಿಳಿಯಾಗಿದ್ದು ಅದನ್ನು ಕೆದಕಿ ಅವರ‌ ಮನದಲ್ಲಿ ದುಶ್ಚಟ ಮತ್ತು ಇತರ ವಿಚಾರಗಳ ಬಗ್ಗೆ ತುಂಬುವ ಕಾರ್ಯ ಮಾಡುವ‌‌ ವ್ಯಕ್ತಿ ಮತ್ತು ಶಕ್ತಿಗಳ ಬಗ್ಗೆ ಸಾಕಷ್ಟು ಎಚ್ಚರ ವಹಿಸುವುದು ಅತೀ ಅಗತ್ಯ ಎಂದು ನಡ ಸರಕಾರಿ ಪ.ಪೂ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಮರೋಡಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ, ಲಾಯಿಲ ವಲಯ, ತಾಲೂಕು ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕಾಲೇಜಿನ ರೇಂಜರ್ಸ್ ವಿಭಾಗ ಹಾಗೂ ನಡ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಅಜಿತ್‌ ಕುಮಾರ್ ಆರಿಗಾ ಮಾತಮಾಡಿ, ಹೆಗ್ಗಡೆಯವರು ಜನ ಕಲ್ಯಾಣ ಕಾರ್ಯವಾಗಿ ಗ್ರಾ. ಯೋಜನೆ ಪ್ರಾರಂಭಿಸಿದರೂ ಜನರು ದುಶ್ಚಟಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿರುವುದನ್ನು ಮನಗಂಡು ವ್ಯಸನಮುಕ್ತ ಸಮಾಜದ ಕನಸು ಕಂಡರು ಎಂದು ಸ್ಮರಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಪತ್ರಕರ್ತ ಹಾಗೂ ಜನಜಾಗೃತಿ ವೇದಿಕೆ ತಾಲೂಕು ಸಮಿತಿ ಸದಸ್ಯ ಅಚ್ಚು ಮುಂಡಾಜೆ ಇವರು ಮಾತನಾಡಿ ವ್ಯಸನಗಳ ವಿಧಗಳು, ನೀಡುವ ಪರಿಣಾಮ, ಹಾಗೂ ಹೊರಬರಲು ಇರುವ ಮಾರ್ಗಗಳು ಇತ್ಯಾದಿ ವಿಚಾರಗಳನ್ನು ಉದಾಹರಣೆ ಸಹಿತ ತಿಳಿಸಿ, ವಿದ್ಯಾರ್ಥಿಗಳಿಗೆ ವ್ಯಸನಗಳ ವಿರುದ್ಧದ ಸಂಕಲ್ಪ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿಬಂಧು ಒಕ್ಕೂಟ ನಡ ಎ ಇದರ ಅಧ್ಯಕ್ಷ ಅಬ್ದುಲ್ ರಝಾಕ್, ಸೇವಾ ಪ್ರತಿನಿಧಿ ಶಕುಂತಲಾ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಾಯಿಲ ವಲಯದ ಮೇಲ್ವಿಚಾರಕ ಸುಶಾಂತ್ ಪ್ರಸ್ತಾವನೆಗೈದರು.

ಉಪನ್ಯಾಸಕಿ ಲಿಲ್ಲಿ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕಿ ಶಿಲ್ಪಾ ಸ್ವಾಗತಿಸಿದರು. ಹಿರಿಯ ಉಪನ್ಯಾಸಕಿ ವಸಂತಿ ಜಿ ಕುಳಮರ್ವ ವಂದಿಸಿದರು.

Exit mobile version