Site icon Suddi Belthangady

ನಾಳ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ

ನಾಳ: ಗರ್ಭಿಣಿ, ಬಾಣಂತಿ ಮಹಿಳೆಯರು ಹಾಗೂ ಮಕ್ಕಳು ಹಿತ, ಮಿತ ಆಹಾರದ ಜೊತೆಗೆ ಪೌಷ್ಠಿಕ ಆಹಾರ ಸೇವನೆಯಿಂದ ಪರಿಪೂರ್ಣ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ನಿವೃತ್ತ ಅಧಿಕಾರಿ ಬನಶಂಕರಿ ವೆಂಕಟೇಶ್ವರ ಭಟ್ ಹೇಳಿದರು. ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಪೋಷನ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ಪೌಷ್ಠಿಕ‌ ಆಹಾರದ ಕುರಿತು ಜಾಗೃತಿ ಮೂಡಿಸಿದರು. ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸ್ತ್ರೀ ಶಕ್ತಿ ಸ್ವಸಹಾಯ ಸಂಘ ನಾಳ, ಅಂಗನವಾಡಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಾಸಾಚರಣೆ ನಡೆಯಿತು.

ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಮಕ್ಕಳ ಪೋಷಕರು ಮನೆಯಲ್ಲೇ ತಯಾರಿಸಿದ ೨೦ಕ್ಕೂ ಹೆಚ್ಚಿನ ವಿವಿಧ ಬಗೆಯ ತಿಂಡಿ, ತಿನಿಸುಗಳ ಪ್ರದರ್ಶನ ಮತ್ತು ಸಾಮೂಹಿಕ ವಿತರಣೆ ಜರುಗಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಭವಾನಿ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಮೋಹಿನಿ, ಪುಷ್ಪ, ಕಳಿಯ ಸಿ.ಎ. ಬ್ಯಾಂಕ್ ನಿರ್ದೇಶಕಿ ಮಮತಾ ವಿ.ಆಳ್ವ, ಸ್ಥಳೀಯರಾದ ಸೌಭಾಗ್ಯ ರಾಜೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಳ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಸ್ವಾಗತಿಸಿದರು. ರಕೇಶ್ವರಿ ಪದವು ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಕೆ.ಎಸ್. ವಂದಿಸಿದರು.

ಸನ್ಮಾನ: ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಣಿಯೂರು ವಲಯದ ಮೇಲ್ವಿಚಾರಕಿ ನಂದನ ಶೆಟ್ಟಿಯವರು ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವರ್ಗಾವಣೆ ಹೊಂದಿದ್ದಾರೆ. ಈ ನಿಮಿತ್ತವಾಗಿ ಕಣಿಯೂರು ವಲಯದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯವರ ವತಿಯಿಂದ ನಂದನ ಶೆಟ್ಡಿಯವರಿಗೆ ಸನ್ಮಾನಿಸಿ, ಗೌರವಿಸಲಾಯಿತು.

Exit mobile version