Site icon Suddi Belthangady

ಬೆಳ್ತಂಗಡಿ: ಯುವವಾಹಿನಿ ಘಟಕ, ಯುವವಾಹಿನಿ ಮಹಿಳಾ ಸಂಚಲನಾ ಸಮಿತಿ ಆಶ್ರಯದಲ್ಲಿ “ಮನಸು” ಅಂತರಾಳದ ಅವಲೋಕನ ಕಾರ್ಯಕ್ರಮ

ಬೆಳ್ತಂಗಡಿ: ಯುವವಾಹಿನಿ ಘಟಕ, ಯುವವಾಹಿನಿ ಮಹಿಳಾ ಸಂಚಲನಾ ಸಮಿತಿ ಇದರ ಆಶ್ರಯದಲ್ಲಿ “ಮನಸು” ಅಂತರಾಳದ ಅವಲೋಕನ ಎಂಬ ಕಾರ್ಯಕ್ರಮವು ಸೆ.15ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ ಬೆಳ್ತಂಗಡಿ ಅನ್ನಪೂರ್ಣ ಮೆಟಲ್ ಉದ್ಯಮಿ ರಕ್ಷಾ ರಾಘ್ನೇಶ್ ಇವರು ಮಾತನಾಡುತ್ತಾ, ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆಗೆ ಇಂತಹ ಕಾರ್ಯಕ್ರಮ ಅತ್ಯಂತ ಅಗತ್ಯ ಇದೆ, ಯುವ ವಾಹಿನಿ ಇಂತಹ ಹಲವಾರು ಸಮಾಜಮುಖಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ, ಇನ್ನಷ್ಟು ಸಮಾಜಕ್ಕೆ ಯುವ ಜನತೆಗೆ ಉಪಯೋಗವಾಗುವಂತಹ ಕೆಲಸಗಳು ಘಟಕ ಮತ್ತು ಮಹಿಳಾ ಸಂಚಾಲನಾ ಸಮಿತಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿಯ ಕೇಂದ್ರೀಯ ವಿದ್ಯಾಲಯದ ಶೈಕ್ಷಣಿಕ ಆಪ್ತ ಸಮಾಲೋಚಕರಾದ ಕುಮಾರಿ ಹರ್ಷಿತಾ ಎಂ ವಿ , ಇವರು ಮಾಹಿತಿ ನೀಡುತ್ತಾ, ಮಕ್ಕಳು ಮತ್ತು ಮಹಿಳೆಯರ ಮೇಲಾಗಿರುವ ದೌರ್ಜನ್ಯದ ಹಲವಾರು ನೈಜ ಘಟನೆಗಳನ್ನು ಹಾಗು ತಾನು ನಿರ್ವಹಣೆ ಮಾಡಿರುವ ಘಟನೆಗಳ ಅನುಭವಗಳನ್ನು ಹಂಚಿಕೊಂಡರು.

ಪೋಷಕರು ಮಕ್ಕಳನ್ನು ಅವರ ಮುಂದಿನ ಬದುಕು, ಭವಿಷ್ಯ ಭದ್ರತೆಯಿಂದ ಕೂಡಿರುವಂತೆ ಗಟ್ಟಿಗೊಳಿಸಬೇಕು ತಲೆಯಲ್ಲಿ ಯುಕ್ತಿ, ಮನಸ್ಸಲ್ಲಿ ಭಕ್ತಿ, ತೋಳಿನಲ್ಲಿ ಶಕ್ತಿ ಬೆಳೆಸಿಕೊಳ್ಳುವಂತೆ ಮಕ್ಕಳನ್ನು ನಾವು ಬೆಳೆಸಬೇಕು ಹಾಗೂ ಸಾಮಾಜಿಕ ಜಾಲತಾಣದ ಒಳಿತು ಕೆಡುಕುಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು.

ಸಭಾಧ್ಯಕ್ಷತೆ ವಹಿಸಿದ ಘಟಕದ ಅಧ್ಯಕ್ಷ ಸದಾಶಿವ ಊರ ಮಾತನಾಡುತ್ತಾ ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ಯುವ ಜನತೆ ಜಾಗೃತರಾಗಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ವೇದಿಕೆಯಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, ಮಹಿಳಾ ಸಂಚಾಲನ ಸಮಿತಿಯ ಸಂಚಾಲಕಿ ವನಿತಾ ಜನಾರ್ಧನ್, ಘಟಕದ ಮಹಿಳಾ ನಿರ್ದೇಶಕಿ ಲೀಲಾವತಿ ವಸಂತ ಪೂಜಾರಿ, ಉಪಸ್ಥಿತರಿದ್ದರು.

ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಜಾತ ಅಣ್ಣಿ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಲಹೆಗಾರರಾದ ಸುಧಾಮಣಿ ಸ್ವಾಗತಿಸಿ, ವನಿತಾ ಜನಾರ್ಧನ್ ಧನ್ಯವಾದ ನೀಡಿದರು.

Exit mobile version