Site icon Suddi Belthangady

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೊಕ್ಕಡ ವಲಯ ಮಟ್ಟದ ಪ್ರತಿಭಾ ಕಾರಂಜಿ

ಉಜಿರೆ: ಬೆಳ್ತಂಗಡಿ ಶಾಲಾ ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಇದರ ಸಹಭಾಗಿತ್ವದಲ್ಲಿ ಕೊಕ್ಕಡ ವಲಯ ಮಟ್ಟದ ಪ್ರೌಢಶಾಲಾ ವಿಭಾಗದಪ್ರತಿಭಾ ಕಾರಂಜಿ ಸ್ಪರ್ಧೆಯು ಸೆ.11ರಂದು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಇವರು ವಹಿಸಿದ್ದರು. ತಾಲೂಕಿನ ಶಿಕ್ಷಣಾಧಿಕಾರಿ ತಾರಾ ಕೇಸರಿ ಅವರ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಇದೇ ವೇಳೆ ಮಾತನಾಡಿದ ಶಿಕ್ಷಣಾಧಿಕಾರಿಯವರು ಪ್ರತಿಭಾ ಕಾರಂಜಿಯು ಮಕ್ಕಳ ಪ್ರತಿಭೆಯ ಪ್ರದರ್ಶನಕ್ಕೊಂದು ಉತ್ತಮ ವೇದಿಕೆ ವಿದ್ಯಾರ್ಥಿಗಳಿಗೆ ಗೆಲುವು ಮಾತ್ರ ಮುಖ್ಯವಲ್ಲ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಇದು ಎಂಬ ಮಾತುಗಳನ್ನಾಡಿದರು ಸಂಚಾಲಕ ಫಾ.ಅಬೆಲ್ ಲೋಬೊ ಅವರು ಪ್ರತಿಭೆ ಎಂಬುದು ದೇವರ ಕರುಣೆ ಅದನ್ನು ಪೋಷಣೆ ನೀಡುವ ಕಾರ್ಯ ಶಿಕ್ಷಣ ಇಲಾಖೆಯಿಂದ ಆಗುತ್ತಿದೆ ಇದರಿಂದ ವಿದ್ಯಾರ್ಥಿಯ ವ್ಯಕ್ತಿತ್ವ ಅರಳುತ್ತದೆ ಎಂಬ ಮಾತನ್ನು ಹೇಳಿದರು.

ಶಿಕ್ಷಣ ಸಂಯೋಜಕಿ ಚೇತನಾಕ್ಷೀ, ಕ್ಷೇತ್ರ ಸಮೂಹ ವ್ಯಕ್ತಿ ಪ್ರತಿಮಾ ಕೆಎಂ, ಪ್ರಾಂಶುಪಾಲ ಫಾ.ವಿಜಯ್ ಲೋಬೊ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಡಿಸೋಜ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಅಂಟನಿ ಫೆರ್ನಾಂಡೀಸ್ ಮತ್ತು ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೆಳಗ್ಗಿನ ಉಪಹಾರದ ಪ್ರಯೋಜಕತ್ವವನ್ನು ಹರೀಶ್ ಪೈ, ಮಾಲಕರು ಸಂದ್ಯಾ ಟ್ರೇಡರ‍್ಸ್ ಉಜಿರೆ ಹಾಗೂ ಮಧ್ಯಾಹ್ನದ ಭೋಜನದ ಪ್ರಯೋಜಕತ್ವವನ್ನು ವಹಿಸಿದ್ದ ಮಂಡತ್ಯಾರು ದುರ್ಗಾ ಫರ್ನಿಚರ‍್ಸ್ ನ ಮಾಲಕ ಉಮೇಶ್ ಶೆಟ್ಟಿ ಇವರನ್ನು ಸಂಸ್ಥೆಯ ಪರವಾಗಿ ಅತ್ಮೀಯವಾದ ಕೃತಜ್ಞತೆಯನ್ನು ಸಲ್ಲಿಸಲಾಯಿತು. ಈ ವೇಳೆ 27 ಶಾಲೆಯ ವಿದ್ಯಾರ್ಥಿಗಳು ಧಾರ್ಮಿಕ ಪಠಣ, ಕನ್ನಡ ಭಾಷಣ, ಆಶುಭಾಷಣ, ಚಿತ್ರಕಲೆ, ರಂಗೋಲಿ, ಭಾವಗೀತೆ, ಜನಪದ ಗೀತೆ, ಕವ್ವಾಲಿ, ಭರತನಾಟ್ಯ, ಜಾನಪದ ನೃತ್ಯ ಮುಂತಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ಪ್ರಾಂಶುಪಾಲ ಫಾ.ವಿಜಯ್ ಲೋಬೊ ಸ್ವಾಗತಿಸಿ, ಸಹ ಶಿಕ್ಷಕಿ ಅರ್ಪಿತ ವಂದಿಸಿ, ಸಹ ಶಿಕ್ಷಕ ಗಣೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version