Site icon Suddi Belthangady

ಮಾಚಾರಿನಲ್ಲಿ 32ನೇ ವರ್ಷದ ಮೊಸರು ಕುಡಿಕೆ – ವಿವಿಧ ಆಟೋಟ ಸ್ಪರ್ಧೆಗಳ ಮೂಲಕ ಆಚರಣೆ

ಮಾಚಾರು: ಪ್ರಗತಿ ಯುವಕ ಮಂಡಲ ಮಾಚಾರು, ಪ್ರಗತಿ ಯುವತಿ ಮಂಡಲ ಮತ್ತು ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ, ಇವರ ಸಂಯುಕ್ತ ಆಶ್ರಯದಲ್ಲಿ 32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಸೆ.1ರಂದು ನಡೆದವು.ಕಾರ್ಯಕ್ರಮವನ್ನು ಬೆಳಗ್ಗೆ ಉಜಿರೆ ಪ್ರಗತಿ ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಗೌಡ ಉದ್ಘಾಟಿಸಿದರು.

ಮಕ್ಕಳ, ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ಜಾರುಕಂಭ,ಮಡಿಕೆ ಒಡೆಯುವುದು, ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬದನಾಜೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಿರಂಜನ್ ಶ್ರೀ ಕೃಷ್ಣನ ಜೀವನ ಚರಿತ್ರೆ ನಮ್ಮ ಬದುಕಿಗೆ ದಾರಿದೀಪವಾಗಬೇಕು.ಮಾಚಾರಿನ ಅಷ್ಟಮಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ರೆಂಬ ಭೇದ ಇಲ್ಲದೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಆಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘ ಬದನಾಜೆಯ ಅಧ್ಯಕ್ಷ ರಾಮಯ್ಯ ಗೌಡ, ಭಜನಾ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಪಾಲೆಂಜ, ಗ್ರಾ.ಪಂ.ಸದಸ್ಯ ಅನಿಲ್ ಡಿಸೋಜ, ಅಕ್ಬರ್ ಆಲಿ ಬದ್ರಿಯಾ ಬಂಡಶಾಲೆ, ಪ್ರಗತಿ ಯುವಕ ಮಂಡಲದ ಅಧ್ಯಕ್ಷ ಸೋಮಶೇಖರ್ ಕೆ, ಯುವತಿ ಮಂಡಲದ ಅಧ್ಯಕ್ಷೆ ನವೀನ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಯುವಕ ಮಂಡಲದ ಕಾರ್ಯದರ್ಶಿ, ಶಿಕ್ಷಕ ಸುರೇಶ್ ಮಾಚಾರ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version