Site icon Suddi Belthangady

ಚಾರ್ಮಾಡಿ ಗ್ರಾ.ಪಂ ನ ಎದುರು ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತಿನ ಬೀಟಿಗೆ ಪ್ರದೇಶದ ಹಲವು ಮನೆಗಳಿಗೆ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಸ್ಥಗಿತಗೊಂಡಿದ್ದು ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಇಲ್ಲಿನ ನಿವಾಸಿಗಳು ಆ.29ರಂದು ಬೆಳಗ್ಗೆ ಚಾರ್ಮಾಡಿ ಗ್ರಾ.ಪಂ ನ ಎದುರು ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಕಚೇರಿ ತೆರೆಯುವ ಮೊದಲೇ ಗ್ರಾಮ ಪಂಚಾಯತಿನ ಎದುರು ಪ್ರತಿಭಟನೆ ಆರಂಭಿಸಿದ ಜನರು ತಮ್ಮ ಸಮಸ್ಯೆಗೆ ಪರಿಹಾರ ಒದಗಿಸಿದ ಬಳಿಕ ಮಾತ್ರ ಗ್ರಾ.ಪಂ ಕಚೇರಿಯ ಬಾಗಿಲು ತೆರೆಯಲು ಅವಕಾಶ ನೀಡುವುದಾಗಿ ತಿಳಿಸಿ ಪ್ರತಿಭಟನೆ ಮುಂದುವರಿಸಿದರು.

ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಬೋರ್ ಹಾಳಾಗಿದೆ ಪಂಪ್ ಹಾಳಾಗಿದೆ ಎಂದು ಹೇಳಿ ಹತ್ತು ದಿನಗಳಾಯಿತು ಇನ್ನೂ ಸರಿಪಡಿಸಿಲ್ಲ ನಾವು ಮಳೆ ನೀರು ಕುಡಿಯಬೇಕಾದ ಸ್ಥಿತಿಯಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಸ್ಥಳೀಯರಾದ ಅಬ್ದುಲ್ ನಝೀರ್ ಹಾಗೂ ಅಬ್ದುಲ್ ಖಾದರ್ ಅವರು ವಹಿಸಿದ್ದರು.

ಪ್ರತಿಭಟನೆಯ ಬಳಿಕ ಗ್ರಾ.ಪಂ ಆಡಳಿತ ಎಚ್ಚೆತ್ತುಕೊಂಡಿದ್ದು ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕುಡಿಯುವ ನೀರಿನ ಸಂಪರ್ಕ ಸರಿಪಡಸಲು ಕ್ರಮ ಆರಂಭಿಸಿದ್ದಾರೆ.

Exit mobile version