Site icon Suddi Belthangady

ಪದ್ಮುಂಜದಲ್ಲಿ ಹಲ್ಲೆ: ಪ್ರಕರಣ ದಾಖಲು

ಬೆಳ್ತಂಗಡಿ: ವಾಹನ ತಡೆದು ಹಲ್ಲೆ ನಡೆಸಿ ಗಾಯಗೊಳಿಸಿರುವ ಕುರಿತು ಕಣಿಯೂರು ನಿವಾಸಿ ಸಿದ್ದಿಕ್(43ವ)ರವರು ನೀಡಿದ ದೂರಿನಂತೆ ಶರತ್ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆ.27ರಂದು ರಾತ್ರಿ ಸಿದ್ದೀಕ್ ಅವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿಗೆ ತಲುಪಿದಾಗ ಶರತ್ ಎಂಬಾತ ನಿಂತುಕೊಂಡು ಪೋನ್ ನಲ್ಲಿ ಮಾತನಾಡುತ್ತಿದ್ದ. ಆ ಸಮಯ ಎದುರಿನಿಂದ ಬೇರೆ ವಾಹನ ಬಂದುದರಿಂದ ಸಿದ್ದೀಕ್ ಅವರು ತಮ್ಮ ವಾಹನವನ್ನು ಆರೋಪಿಯ ಸಮೀಪದಿಂದ ಚಲಾಯಿಸಿದ್ದಾರೆ. ಈ ವೇಳೆ ಶರತ್ ಅವಾಚ್ಯವಾಗಿ ಬೈದಿದ್ದಾನೆ. ನಂತರ ಸಿದ್ದೀಕ್ ಅವರು ವಾಹನ ಚಲಾಯಿಸುತ್ತಾ ಮುಂದೆ ಹೋದಾಗ ಅವರ ಹಿಂದಿನಿಂದ ಶರತ್ ಮೋಟಾರು ಬೈಕಿನಲ್ಲಿ ಹಿಂಬಾಲಿಸಿ ಬಂದು ಸಿದ್ದೀಕ್ ಅವರನ್ನು ತಡೆದು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾನೆ.

ಗಾಯಗೊಂಡ ಸಿದ್ದೀಕ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 100/2024ರಂತೆ ಕಲಂ 126(2), 115(2) , 352,351(2) BNS 2023 ರಡಿ ಪ್ರಕರಣ ದಾಖಲಾಗಿದೆ.

Exit mobile version