Site icon Suddi Belthangady

ನಾಗ್ಪುರದಲ್ಲಿ ಡಿ.ಪಿ.ಜೈನ್‌‌ ಕಂಪನಿ ಕಚೇರಿ ಎದುರು ಕ್ರಷರ್ ಮಾಲಕರ ಪ್ರತಿಭಟನೆ

ಬೆಳ್ತಂಗಡಿ: ಮಹಾರಾಷ್ಟ್ರ ರಾಜ್ಯದ ನಾಗ್ಪುರದಲ್ಲಿ ಆ.26ರಂದು ಕರ್ನಾಟಕದ ಕ್ರಷರ್ ಮಾಲಕರೆಲ್ಲ ರಾಜ್ಯ ಕ್ರಷರ್ ಮಾಲಕರ ಸಂಘದ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆಯ ಗುತ್ತಿಗೆದಾರರ ವಂಚನೆ ವಿರುದ್ದ ಹೋರಾಟ ನಡೆಸಿದ ಘಟನೆ ವರದಿ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರಾಷ್ಟ್ರೀಯ ಹೆದ್ದಾರಿ 73ರ 35 ಕಿ.ಮೀ ರಸ್ತೆಯನ್ನು ನಾಗ್ಪುರ ಮೂಲದ ಡಿ.ಪಿ ಜೈನ್ ಇನ್ಫ್ರಾಸ್ಟ್ರಕ್ಚರ್ ಗೆ ಟೆಂಡರ್ ಆಗಿತ್ತು. ಈ ರಸ್ತೆಗೆ ರೂ.385 ಕೋಟಿ ಅನುದಾನ ಮಂಜೂರು ಆಗಿತ್ತು.

ರಸ್ತೆಗೆ ಬೇಕಾದ ಜಲ್ಲಿ ಹಾಗೂ ವಾಹನಗಳಿಗೆ ಪೆಟ್ರೋಲ್ ಹಾಗೂ ಡಿಸೇಲ್, ಜೀನಸು ಉತ್ಪನ್ನ, ಪ್ರಿಂಟಿಂಗ್, ಫರ್ನಿಚರ್, ಕಾರ್ಮಿಕರ ಕಂಟ್ರಾಕ್ಟರ್ ಗಳಿಗೆ ವೇತನ ಹಾಗೂ ಇನ್ನೂ ಹಲವಾರು ಮಂದಿ ವ್ಯವಸ್ಥೆಯನ್ನು ಒದಗಿಸಿದ್ದರು.2023ನೇ ಸಾಲಿನಿಂದ ಈ ರಸ್ತೆ ಕಾಮಗಾರಿ ಆರಂಭ ಆಗಿತ್ತು. ಆದರೆ ಕಾಮಗಾರಿ ಮಾಡಲು ಕಚ್ಚಾ ಉತ್ಪನ್ನಗಳನ್ನು ನೀಡಿದವರಿಗೆ ಹಣ ನೀಡದೆ ಬಾಕಿ ಇರಿಸಿ ತೊಂದರೆ ನೀಡಲು ಡಿಪಿ ಜೈನ್ ಕಂಪನಿ ಆರಂಭ ಮಾಡಿತ್ತು.

ಈ ಬಗ್ಗೆ ಫೆಡರೇಷನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಷಾರ್ ಅಸೋಸಿಯೇಷನ್ ನ ರಾಜ್ಯ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿಯವರಿಗೆ ತಮ್ಮ ತೊಂದರೆಯನ್ನು ತೊಂದರೆಗೊಳಗಾದ 75 ಮಂದಿ ದೂರು ಸಲ್ಲಿಸಿದ್ದರು.ಈ ಸಮಸ್ಯೆ ಆಲಿಸಿದ ಡಾ.ರವೀಂದ್ರ ಶೆಟ್ಟಿಯವರು ಆ.26ರಂದು ನಾಗ್ಪುರದಲ್ಲಿ ತನ್ನ ನೇತೃತ್ವದಲ್ಲಿ ಪ್ರತಿಭಟನೆ ಆರಂಭ ಮಾಡಿ ಡಿ.ಪಿ ಜೈನ್ ಕಂಪನಿಗೆ ಮುತ್ತಿಗೆ ಹಾಕಿದ್ದಾರೆ.

ಬಳಿಕ ನೆಲದಲ್ಲಿ ಕುಳಿತು ತಮ್ಮ ಮೌನ ಪ್ರತಿಭಟನೆ ಆರಂಭ ಮಾಡಿದ್ದಾರೆ. ಡಾ.ರವೀಂದ್ರ ಶೆಟ್ಟಿಯವರ ಜೊತೆಗೆ ತುಮಕೂರು, ರಾಮನಗರ, ಮೈಸೂರು, ಕಾಸರಗೋಡು, ದಾವಣಗೆರೆ, ದಕ್ಷಿಣ ಕನ್ನಡ, ಫಳ್ನೀರ್, ಬಳ್ಳಮಂಜ, ಸುರತ್ಕಲ್, ಜೋಕಟ್ಟೆ, ಪಕ್ಷಿ ಕೆರೆ, ಪಡುಬಿದ್ರೆಯ ಗಣಿ ಮಾಲಕರು, ಪೆಟ್ರೋಲ್ ಬಂಕ್ ಮಾಲಕರು, ಜೀನಸು ಅಂಗಡಿ ಮಾಲಕರು, ಫರ್ನಿಚರ್ ಅಂಗಡಿ ಮಾಲಕರು ಮತ್ತಿತರರು ಭಾಗವಹಿಸಿದ್ದಾರೆ.

ಪ್ರತಿಭಟನೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

Exit mobile version