Site icon Suddi Belthangady

ಬೆಳ್ತಂಗಡಿ ಮಾರಿಗುಡಿಯಲ್ಲಿ ಶಾಸಕ ಪೂಂಜ ಆಣೆ ಪ್ರಮಾಣ

ಬೆಳ್ತಂಗಡಿ: ತಾಲೂಕಿನಲ್ಲಿ ನಡೆದ ಪ್ರವಾಸಿ ಬಂಗಲೆ ಸಹಿತ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಷಾರ ನಡೆದಿದೆ ಎಂಬ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್ ಆರೋಪಕ್ಕೆ ಶಾಸಕ ಹರೀಶ್ ಪೂಂಜ ಅವರು ಆ.14ರಂದು ಬೆಳ್ತಂಗಡಿ ಮಾರಿಗುಡಿಯಲ್ಲಿ ದೇವರ ಮುಂದೆ ಪ್ರಮಾಣ ಮಾಡಿದರು.

“ತಾನು ಯಾವುದೇ ರೀತಿಯಲ್ಲಿ ಭ್ರಷ್ಟಾಷಾರ ನಡೆಸಿಲ್ಲ, ಇಂದು ರೂಪಾಯಿ ಕಿಕ್ ಬ್ಯಾಕ್ ಒಡೆದಿಲ್ಲ. ನನ್ನ ಮೇಲೆ ವಿನಾಕಾರಣ ಆರೋಪ ಎಸಗಿರುವ ರಕ್ಷಿತ್ ಶಿವರಾಮ್, ಅವರ ಪತ್ನಿ, ಮಕ್ಕಳು, ಕುಟುಂಬಕ್ಕೆ ಮಾರಿಯಮ್ಮ ಶಿಕ್ಷೆ ವಿಧಿಸಬೇಕು. ಬೆಳ್ತಂಗಡಿಯಲ್ಲಿ ಅಭಿವೃದ್ಧಿ ರಾಜಕೀಯದ ಬದಲಾಗಿ ಕೆಸರೆರಚಾಟದ ರಾಜಕೀಯ ಇಂದಿಗೆ ಅಂತ್ಯವಾಗಬೇಕು. ನಾನು ಭ್ರಷ್ಟಾಷಾರ ಎಸಗಿದ್ದರೆ ನನಗೆ ಶಿಕ್ಷೆಯಾಗಲಿ” ಎಂದು ಮಾರಿಗುಡಿಗೆ ಫಲಪುಷ್ಪ ಅರ್ಪಿಸಿ ಬಳಿಕ ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು.

ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್, ಪಟ್ಟಣ ಪಂಚಾಯತ್ ಸದಸ್ಯ ಶರತ್ ಶೆಟ್ಟಿ, ಲಾಯಿಲ ಗ್ರಾ.ಪಂ. ಸದಸ್ಯ ಗಣೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಗೌಡ ನಾವೂರು, ಜಿಲ್ಲಾ ಸಾಮಾಜಿಕ ಜಾಲತಾಣ ಸದಸ್ಯ ಸುಪ್ರಿತ್ ಜೈನ್, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಬಿಜೆಪಿ ಪ್ರಮುಖರಾದ ಪ್ರಭಾಕರ ಸವಣಾಲ್, ರಂಜಿತ್ ಶೆಟ್ಟಿ ಮದ್ದಡ್ಕ, ಪ್ರಕಾಶ್ ಆಚಾರ್ಯ, ಚಂದ್ರರಾಜ್ ಮೇಲಂತಬೆಟ್ಟು ಈ ವೇಳೆ ಹಾಜರಿದ್ದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ರಕ್ಷಿತ್ ಶಿವರಾಮ್ ಅವರು ಹರೀಶ್ ಪೂಂಜ ವಿರುದ್ಧ ಪರಾಭವಗೊಂಡಿದ್ದರು. ರಕ್ಷಿತ್ ಶಿವರಾಮ್ ಅವರು ಪೂಂಜ ಮೇಲೆ ಐಬಿ ಹಗರಣ, ರಾಷ್ಟ್ರೀಯ ಹೆದ್ದಾರಿ ಕಿಕ್ ಬ್ಯಾಕ್, ಬಿಮಲ್‌ನಲ್ಲಿ ಪಾಲುದಾರಿಕೆ ಕುರಿತು ಆರೋಪ ಮಾಡಿದ್ದರು.

Exit mobile version