Site icon Suddi Belthangady

ಬಳಂಜ: ಕುಸಿಯುತ್ತಿರುವ ಧರೆ- ಅಪಾಯದಲ್ಲಿ ನಾಲ್ಕು ಮನೆಗಳು- ತಾತ್ಕಾಲಿಕ ಕಾಳಜಿ ಕೇಂದ್ರದಲ್ಲಿ ಬಡ ಕುಟುಂಬಗಳು

ಬಳಂಜ: ಬಳಂಜ ಗ್ರಾಮದ ಕರ್ಮಂದೊಟ್ಟು ಜನತಾ ಕಾಲನಿಯಲ್ಲಿ ಭಾರಿ ಮಳೆಗೆ ನಾಲ್ಕು ಮನೆಗಳು ಅಪಾಯಕಾರಿ ಧರೆಯ ಕುಸಿತದಿಂದಾಗಿ ಬೀಳುವ ಸಾಧ್ಯತೆ ಇರುವುದರಿಂದನಮ್ಮ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದಿನೇಶ್ ಪಿ.ಕೆ ರವರು ಈ ಸ್ಥಳಕ್ಕೆ ಬಂದು ಮನೆ ಕಾಲಿ ಮಾಡಿಸಿ ಪಂಚಾಯತ್ ನಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಕಳುಹಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು.

ಸರಕಾರದಿಂದ ಕೊಟ್ಟಿರುವ ಜಾಗದಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ಮನೆ ನಿರ್ಮಿಡಿಕೊಂಡಿದ್ದು ಕಡಿದಾದ ಬೆಟ್ಟ ಗುಡ್ಡದ ರೀತಿಯಲ್ಲಿ ಇದ್ದ ಜಾಗವನ್ನು ಸಮತಟ್ಟು ಮಾಡದೇ ಇಚ್ಛಾನುಸಾರ ಮನೆ ಕಟ್ಟಲು ಅವಕಾಶ ಮಾಡಿ ಕೊಟ್ಟ ಪರಿಣಾಮ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದಲ್ಲದೇ ಕೆಳಗಿನ ಪದರದಲ್ಲಿ ಮನೆ ನಿರ್ಮಿಸಿದವರು ಜೆಸಿಬಿ ಮೂಲಕ ಧರೆಯನ್ನು ಅಗೆತ ಮಾಡಿದ್ದು ಸಹ ಮೇಲಿನ ಪದರಲ್ಲಿರುವ ಮನೆಗಳು ಕುಸಿಯಲು ಕಾರಣವಾಗಿದೆ.

ಮೇಲ್ಭಾಗದಲ್ಲಿ ಮನೆ ಕಟ್ಟಿರುವ ಆನಂದ ಆಚಾರ್ಯ, ಉಸ್ಮಾನ್ ರವರ ಮನೆಗಳು ಕುಸಿಯುತ್ತಿದ್ದು ಈ ಮನೆಗಳು ಬಿದ್ದಲ್ಲಿ ಕೆಳಗಿನಲ್ಲಿ ಇರುವ ಚಂದ್ರಹಾಸ ಹಾಗೂ ಚಂದ್ರಾವತಿ ಯವರ ಮನೆಗಳು ಸಹ ಬೀಳುವ ಸಾಧ್ಯತೆ ಇದೆ.ಈಗಾಗಲೇ ಇಲ್ಲಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಅಧ್ಯಕ್ಷರಾದ ಶೋಭಾ ಕುಲಾಲ್, ಉಪಾಧ್ಯಕ್ಷರಾದ ಯಶೋಧರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ, ಬಿ.ಅಮೀನ್, ರಕ್ಷಿತ್ ಶಿವಾರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಕಷ್ಟದಲ್ಲಿರುವ ಕುಟುಂಬಗಳು ಸೂಕ್ತ ಜಾಗವನ್ನು ನೀಡಿ ಮನೆ ಕಟ್ಟಿಕೊಡಲು ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಸಾದಿಕ್ ಬಳಂಜ, ಕಾಂಗ್ರೆಸ್ ಮುಖಂಡರಾದ ಜೆರಾಮ್ ಲೋಬೋ ಅಶ್ವಿನ್ ಕುಮಾರ್ ಬೊಂಟ್ರೋಟ್ಟು, ಪುರಂದರ ಪೂಜಾರಿ ಪೇರಾಜೆ, ಸದಾನಂದ ತೋಟದಪಲ್ಕೇ ಹಾಜರಿದ್ದರು.

Exit mobile version