Site icon Suddi Belthangady

ಸಂಗಾತಿ ಗುಂಪು ಯೋಜನೆಯಿಂದ ರೈತ ಕಾರ್ಮಿಕರ ಆಟಿಯಲ್ಲೊಂದು ದಿನ ಮಹಾಸಂಗಮ- ಸೌಹಾರ್ದತೆ ತುಳುನಾಡಿನ ಮಣ್ಣಿನ ಗುಣ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿಳಿಮಲೆ

ಬೆಳ್ತಂಗಡಿ: ತುಳುನಾಡಿನ ಹುರಿ ಹಗ್ಗ ಎಷ್ಟು ಗಟ್ಟಿಯೋ ತುಳುವರು ಕೂಡಾ ಅಷ್ಟೇ ಗಟ್ಟಿವಂತರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು. ಬೆಳ್ತಂಗಡಿಯ ಲಾಯಿಲ ಸಂಗಮ ಸಭಾಂಗಣದಲ್ಲಿ ಸಂಗಾತಿ ಗುಂಪು ಯೋಜನೆ ಬೆಳ್ತಂಗಡಿ ಇದರ ನೇತೃತ್ವದಲ್ಲಿ ನಡೆದ ರೈತ ಕಾರ್ಮಿಕರ ಆಟಿಯಲ್ಲೊಂದು ದಿನ ಸಂಗಾತಿ ಮಹಾಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತುಳುನಾಡಿನ ಮಣ್ಣಿನ ಮಹತ್ವವನ್ನು ತಿಳಿಸಿದರು. ಸೌಹಾರ್ದತೆ ತುಳುನಾಡಿನ ಮಣ್ಣಿನ ಗುಣವಾಗಿದೆ. ಇದರ ವಿರುದ್ಧದ ನಡೆಯೇ ನಮ್ಮ ತುಳು ಸಂಸ್ಕೃತಿಗೆ ಬಂದಿರುವ ಅಪಾಯ ಎಂದು ಬಿಳಿಮಲೆ ಹೇಳಿದರು.

ದುಡಿಯುವ ಜನರ ಧ್ವನಿ ಮತ್ತೆ ಮೊಳಗುವಂತಾಗಲಿ-ಮುನೀರ್ ಕಾಟಿಪಳ್ಳ: ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡಿ ಇಂದಿನ ಮಾರಿ ತೊಲಗಿಸಲು ಅಂದರೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಂದಿನ ಆಟಿಯ ಕಳೆಂಜಗಳು ಇಂದು ನಾವಾಗಬೇಕು ಆ ಮೂಲಕ ಅನ್ಯಾಯದ ವಿರುದ್ಧ ದುಡಿಯುವ ಜನರ ಧ್ವನಿ ಮತ್ತೆ ಮೊಳಗುವಂತಾಗಲಿ ಎಂದರು.

ಶೋಷಣೆಯ ವಿರುದ್ಧ ಧ್ವನಿ ಎತ್ತುವವರಾಗೋಣ-ಬಿ.ಎಂ. ಭಟ್: ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮುಖಂಡರಾದ ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ ನಾವು ಗಂಟೆಯ ಹಿಂದೆ ಹೋಗದೇ ದನದ ಹಿಂದೆ ಹೋಗುವಂತವರಾಗಿ ಅಜ್ಞಾನದತ್ತ ಸಾಗದೇ ನಮ್ಮ ಬದುಕು ನಾಶವ ತಡೆಯುವತ್ತ ಸಾಗಬೇಕು. ಬೆಲೆ ಏರಿಕೆ, ನಿರುದ್ಯೋಗ, ವೇತನ ಕಡಿತ, ಶೋಷಣೆಯ ವಿರುದ್ಧ ಧ್ವನಿ ಎತ್ತುವವರಾಗೋಣ. ಅದುವೇ ಸಂಗಾತಿ ಮಹಾ ಸಂಗಮದ ಮುಖ್ಯ ಗುರಿಯಾಗಿದೆ ಎಂದರು.

ಸರಕಾರದ ಸಾಧನೆ ವಿವರಿಸಿದ ರಕ್ಷಿತ್ ಶಿವರಾಂ: ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಮಾತನಾಡಿ ರಾಜ್ಯ ಸರಕಾರದ ಸಾಧನೆಗಳನ್ನು ವಿವರಿಸಿದರಲ್ಲದೆ ಕಾರ್ಮಿಕರ ಪರವಾದ ನ್ಯಾಂiಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ರೈತ ಮುಖಂಡರಾದ ಪಾಂಗಳ ಲಕ್ಷ್ಮಣ ಗೌಡ, ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಮತ್ತು ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘದ ಅಧ್ಯಕ್ಷೆ ಈಶ್ವರಿ ಶಂಕರ್ ಮಾತನಾಡಿ ಶುಭ ಹಾರೈಸಿದರು.
ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಸ್ವಾಗತಿಸಿ, ಸಂಘದ ಉಪಾಧ್ಯಕ್ಷೆ ಪುಷ್ಪಾ ವಂದಿಸಿದರು.

ಸಿಪಿಐಎಂ ನಾಯಕ ಶ್ಯಾಮರಾಜ್ ಪಟ್ರಮೆ ಕಾರ್ಯಕ್ರಮ ನಿರೂಪಿಸಿದರು. ಕು. ಖುಷಿ ಸಂಧಿ ಹೇಳುವ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಪುರುಷೋತ್ತಮ ಬಿಳಿಮಲೆಯವರು ಚೆನ್ನೆ ಮಣೆಗೆ ಕಾಯಿ ಹಾಕುವ ಮೂಲಕ ಉದ್ಘಾಟಿಸಿದರು. ಅತಿಥಿಗಳ ಭಾಷಣಗಳ ಮಧ್ಯೆ ಯಕ್ಷಗಾನ ಕುಣಿತ, ಭಾಗವತಿಕೆ, ಆಟಿಕಳೆಂಜ, ಕಂಗೀಲು, ಸಾವುಕೋಲ, ದುಡಿ ಮೊದಲಾದ ಸಂಸ್ಕೃತಿಯ ಅನಾವರಣ ನಡೆಯಿತು.

ವೇದಿಕೆಯಲ್ಲಿ ಸಿಪಿಐಎಂ ಮುಖಂಡರುಗಳಾದ ಧನಂಜಯ ಗೌಡ, ಲೋಕೇಶ್ ಕುದ್ಯಾಡಿ, ಜಯರಾಮ ಮಯ್ಯ, ರೈತ ಮತ್ತು ಕಾರ್ಮಿಕ ಸಾಮೂಹಿಕ ಸಂಘಟನೆಗಳ ಮುಖಂಡರುಗಳಾದ ಕಿರಣಪ್ರಭಾ, ಕುಮಾರಿ, ರಾಮಚಂದ್ರ, ಅಭಿಷೇಕ್, ವಿನುಶ ರಮಣ, ಸಾತ್ವಿಕ್ ಮತ್ತು ಯುವರಾಜ್ ಉಪಸ್ಥಿತರಿದ್ದರು. ಹಿರಿಯರಾದ ಸುಂದರ ಶೆಟ್ಟಿ ಮೂಡಬಿದ್ರೆ, ಬಾಬು ಪಿಲಾರ್, ಡಾಗಯ ಗೌಡ ಪಾಂಗಳ, ವಿ.ಜಿ.ಎಂ. ಜೋಸೆಫ್, ಜನಾರ್ದನ ಆಚಾರ್ಯ, ದಿನೇಶ್ ಮಾಚಾರು, ಅಶ್ವಿತ, ಅಧಿತಿ, ಗೀತಾ ಶೆಟ್ಟಿ, ಸುಜಾತ, ಕುಸುಮ ಮಾಚಾರು, ಪ್ರೇಮ ಕಳೆಂಜ, ಮಹಮ್ಮದ್ ಅನಸ್, ಡೊಂಬಯ ಗೌಡ, ಉಷಾ ಕಡ್ಯ, ವಸಂತ ಟೈಲರ್, ಕೇಶವ ಪದ್ಮುಂಜ, ಶಂಕರ್, ಶ್ರೀಧರ ಮುದ್ದಿಗೆ, ನೀಲೇಶ್ ಪೆರಿಂಜೆ, ಫಾರೂಕ್ ಮಡಂಜೋಡಿ, ಚೋಮ ಪಾದೆಜಾಲು, ಸುಂದರಿ ಕುತ್ಲೂರು, ಪ್ರಭಾವತಿ ಲ್ಯಾಲ, ಗಣೇಶ್ ಪ್ರಸಾದ್, ಅಟೋ ರಝಾಕ್, ರಮೇಶ ಮುದ್ದಿಗೆ, ಜಾನಕಿ, ವೇದಾವತಿ ಸಹಿತ ಹಲವರು ಭಾಗವಹಿಸಿದ್ದರು.

ಮಧ್ಯಾಹ್ನ ಆಟಿದ ಊಟದ ಬಳಿಕ ಸಂಗಾತಿ ಸ್ವಸಹಾಯ ಗುಂಪುಗಳ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊನೆಗೆ ಒಂದು ತಿಂಗಳಿಂದ ನಡೆದ ಪ್ರತಿಭಾ ಪ್ರದರ್ಶನ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.

ಸುದ್ದಿಯಲ್ಲಿ ನೇರಪ್ರಸಾರ: ರೈತ ಕಾರ್ಮಿಕರ ಆಟಿಯಲ್ಲೊಂದು ದಿನ ಮಹಾಸಂಗಮ ಕಾರ್ಯಕ್ರಮವನ್ನು ಸುದ್ದಿ ನ್ಯೂಸ್ ಬೆಳ್ತಂಗಡಿ ಯೂ ಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗಿದ್ದು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

Exit mobile version