Site icon Suddi Belthangady

ಕಣಿಯೂರು ಗ್ರಾ.ಪಂ.ಸದಸ್ಯ ಪ್ರವೀಣ್ ಮೇಲೆ ತಂಡದಿಂದ ಹಲ್ಲೆ- ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು- ಶಾಸಕ ಹರೀಶ್ ಪೂಂಜ, ಸಂಜೀವ ಮಠಂದೂರು ಭೇಟಿ

ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯ ಕಸಬಾದ ಪ್ರವೀಣ್ ಎಂಬುವರಿಗೆ 8 ಮಂದಿಯ ತಂಡ ಹಲ್ಲೆ ನಡೆಸಿದ ಘಟನೆ ಜು.28ರಂದು ನಡೆದಿದೆ.

ಪ್ರವೀಣ್‌ ಕಣಿಯೂರಿನ ಕಸುಬಾದಲ್ಲಿ ದಿನಸಿ ಅಂಗಡಿ ಹೊಂದಿದ್ದು ಜು.28ರಂದು ಮಧ್ಯಾಹ್ನ ವ್ಯಾಪಾರದಲ್ಲಿ ನಿರತರಾಗಿದ್ದ ವೇಳೆ ಪ್ರವೀಣ್ ರವರ ಮೇಲೆ ಹಲ್ಲೆ ನಡೆಸಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರವೀಣ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪ್ಪಿನಂಗಡಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಹಾಗೂ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪ್ರವೀಣ್ ರವರ ಆರೋಗ್ಯ ವಿಚಾರಿಸಿದರು.

ಬಳಿಕ ಮಾತನಾಡಿದ ಶಾಸಕ ಹರೀಶ್ ಪೂಂಜ, ಕಾಂಗ್ರೆಸ್‌ ಆಡಳಿತಕ್ಕೆ ಬಂದ ಬಳಿಕ ರಾಜ್ಯ ಅರಾಜಕತೆಯ ರಾಜ್ಯವಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರಕಾರ ದೊಂಬಿ, ಗಲಾಟೆಗಳಿಗೆ ಪ್ರಚೋದನೆ ನೀಡುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ. ಪ್ರವೀಣ್ ಮೇಲೆ ನಡೆದಿರುವ ಹಲ್ಲೆ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಪ್ರವೀಣ್ ಗೌಡ ಅವರ ಮೇಲಿನ ಮಾರಣಾಂತಿಕ ಹಲ್ಲೆಯಿಂದ ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದೆಗೆಟ್ಟಿದೆ ಎಂಬುದು ಸಾಬೀತು ಆಗಿದೆ. ಕಾಂಗ್ರೆಸ್‌ ಸರಕಾರ ಬಂದ ಬಳಿಕ ಯಾರ್ಯಾರು ಗೂಂಡಾಗಿರಿ ಮಾಡುತ್ತಾರೋ ಅವರು ತಮ್ಮ ಬಾಲ ಬಿಚ್ಚಿ ಮತ್ತೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

ಬೆಳ್ತಂಗಡಿ ಯುವಮೋರ್ಚಾದ ಅದ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕರೆ, ಪದ್ಮುಂಜ ಫ್ಯಾಕ್ಸ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಬಂದಾರು ಗ್ರಾ.ಪಂ ಅಧ್ಯಕ್ಷ ದಿನೇಶ್ ಖಂಡಿಗ ಮತ್ತಿರರು ಉಪಸ್ಥಿತರಿದ್ದರು.

Exit mobile version