Site icon Suddi Belthangady

ಉಜಿರೆ: ಭಾರತ್ ಅಕ್ಕಿ ಮಾರಾಟದ ಲಾರಿಗೆ ಸ್ಥಳೀಯರಿಂದ ತಡೆ- ನಾಫೆಡ್ ರಶೀದಿ ನೀಡುತ್ತಿದ್ದ ಲಾರಿ ಪೊಲೀಸರ ವಶಕ್ಕೆ- ಸೂಕ್ತ ದಾಖಲೆ ನೀಡಿದರೆ ಬಿಡುಗಡೆ ಮಾಡುತ್ತೇವೆಂದ ತಹಶೀಲ್ದಾರ್

ಬೆಳ್ತಂಗಡಿ: ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಎಸ್.ಆರ್. ಬಾರ್ ಬಳಿ ಭಾರತ್ ಬ್ರ್ಯಾಂಡ್‌ನ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಲಾರಿಯನ್ನು ಸ್ಥಳೀಯರು ತಡೆ ಹಿಡಿದಿರುವ ಘಟನೆ ಜುಲೈ 15ರಂದು ಸಂಜೆ ನಡೆದಿದೆ.

ಪಿ.ಕೆ.ಮಳಗಿ ಆಗ್ರೋ ಟೆಕ್ ಎಂಬ ಬೋರ್ಡ್ ಹೊಂದಿರುವ ಕೆಎ27 ಸಿ6204 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಭಾರತ್ ಅಕ್ಕಿ ಮೂಟೆಗಳಿದ್ದು, ಕೆ.ಜಿ.ಗೆ 29 ರೂಪಾಯಿಗಳಂತೆ ಮಾರಾಟ ಮಾಡಲಾಗುತ್ತಿತ್ತು.

ಸ್ಥಳಕ್ಕೆ ತಹಶೀಲ್ದಾರ್ ಪೃಥ್ವಿ ಸಾನಿಕಂ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾರಿ ಪೊಲೀಸರ ವಶಕ್ಕೆ: ಅಕ್ಕಿ ಮಾರಾಟದ ಲಾರಿಯನ್ನು ಸ್ಥಳೀಯರು ತಡೆಹಿಡಿದ ಬಳಿಕ ಭಾರಿ ಸಂಚಲನ ಮೂಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್, ಲಾರಿಯನ್ನು ಬೆಳ್ತಂಗಡಿ ಠಾಣೆಗೆ ಕೊಂಡೊಯ್ಯುವಂತೆ ಸೂಚಿಸಿದ್ದಾರೆ.

ಈ ವೇಳೆ ಲಾರಿಯಲ್ಲಿದ್ದ ಸಿಬ್ಬಂದಿ, ತಾವು ಅಧಿಕೃತವಾಗಿಯೇ ಅಕ್ಕಿ ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ನಾಫೆಡ್ (ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ)ನ ರಶೀದಿಯನ್ನೂ ಅಕ್ಕಿ ಖರೀದಿಸಿದ ಗ್ರಾಹಕರಿಗೆ ಲಾರಿಯವರು ನೀಡುತ್ತಿದ್ದು, ಇದು ಅಧಿಕೃತ ಎಂದು ವಾದಿಸಿದ್ದಾರೆ.

ಇದು ಮೇಲ್ನೋಟಕ್ಕೆ ಅಧಿಕೃತವಾಗಿರುವಂತೆ ಕಂಡುಬರುತ್ತಿದೆ. ತನಿಖೆ ನಡೆಸಿ ಸತ್ಯಾಂಶ ಕಂಡುಕೊಳ್ಳಲಾಗುವುದು. ಲಾರಿಯವರು ಸೂಕ್ತ ದಾಖಲೆ, ಅಕ್ಕಿ ಮಾರಾಟ ಕುರಿತ ಪರವಾನಗಿ ನೀಡಿದರೆ ಲಾರಿಯನ್ನು ಬಿಡುಗಡೆ ಮಾಡಲು ಸೂಚಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

Exit mobile version