Site icon Suddi Belthangady

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ(ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಮಂತ್ರಿಮಂಡಲದ ಪದಗ್ರಹಣ, ವಿವಿಧ ಸಂಘಗಳ ಉದ್ಘಾಟನೆ

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಜು.5ರಂದು ಶಾಲಾ ಸರ್ಕಾರದ ಮಂತ್ರಿಮಂಡಲದ ಪದಗ್ರಹಣ ಮತ್ತು ಶಾಲಾ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಿತು.

ಮುಖ್ಯ ಅತಿಥಿಯಾಗಿ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ್ ಅವರು ಮಂತ್ರಿಮಂಡಲ ಮತ್ತು ಶಾಲಾ ಸಂಘಗಳ ವಾರ್ಷಿಕ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದರು.ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ಪಂಚತಂತ್ರದ ಕಥೆಗಳಲ್ಲಿನ ಜ್ಞಾನ, ನಾಯಕತ್ವದ ಗುಣ, ನೀತಿಪಾಠಗಳು, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ಉತ್ತಮ ನಾಯಕತ್ವಕ್ಕೆ ಮುನ್ನುಡಿಯಾಗಲಿ, ನಿಮ್ಮ ಜೀವನದ ಶಿಲ್ಪಿ ನೀವೇ. ಶಿಲ್ಪವು ಅದ್ಭುತವಾಗಿ ಮೂಡಿಬರಲಿ” ಎಂದು ಹಾರೈಸಿದರು.

ಮಂತ್ರಿಮಂಡಲದ ಮುಖ್ಯಮಂತ್ರಿಯಾಗಿ ಹತ್ತನೇ ತರಗತಿಯ ಆಲಾಪ್, ಉಪ ಮುಖ್ಯಮಂತ್ರಿಯಾಗಿ ಒಂಬತ್ತನೇ ತರಗತಿಯ ತೌಫಿರ, ಶಿಸ್ತುಪಾಲನ ಮಂತ್ರಿಯಾಗಿ 9ನೇ ತರಗತಿಯ ಜ್ಞಾನ್ ಅನ್ವೇಶ್, ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ಫಾಯಿಝಾ, ಕ್ರೀಡಾ ಮಂತ್ರಿಯಾಗಿ ಜಿತೆನ್, ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿಗಳಾಗಿ ಎಂಟನೇ ತರಗತಿಯ ಸಮನ್ವಿ ಮತ್ತು ಒಂಬತ್ತನೆ ತರಗತಿಯ ವಿಜಯ್, ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಆದ್ಯತಾ ಬಿ.ಆರ್., ಶಿಕ್ಷಣಮಂತ್ರಿಯಾಗಿ ಹತ್ತನೇ ತರಗತಿಯ ಐಶ್ವರ್ಯ, ಸಭಾಪತಿಯಾಗಿ ಮಧುಶ್ರೀ ಪ್ರಮಾಣವಚನ ಸ್ವೀಕರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮಿ ಅವರು ಮಾತನಾಡಿ, “ವಿದ್ಯಾರ್ಥಿಗಳು ಶಾಲೆಯಲ್ಲಿ ನಡೆಯುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳಿ” ಎಂದರು.ಸಂಸತ್ತು ಸಂಯೋಜಕ ವಿವೇಕ್ ಜೈನ್, ಕಾರ್ಯಕ್ರಮ ಸಂಯೋಜಕಿ ಶಶಿಪ್ರಭಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅದಿಶ್ ಸ್ವಾಗತಿಸಿ, ದಿಶಾನ್ ಅತಿಥಿ ಪರಿಚಯ ನೀಡಿ, ಸಚಿತ್ ಭಟ್ ವಂದಿಸಿ, ಪ್ರವಲ್ ರಾಜ್ ಮತ್ತು ಶ್ರೇಯ ನಿರೂಪಿಸಿದರು.

Exit mobile version