Site icon Suddi Belthangady

ಬಳಂಜದಲ್ಲಿ ವಿಶ್ವ ಯೋಗ ದಿನಾಚರಣೆ

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಇವರ ಮಾರ್ಗದರ್ಶನದಲ್ಲಿ 10ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಒಂದು ವಾರಗಳ ಕಾಲ ಯೋಗ ತರಬೇತಿಯು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.

ಉಜಿರೆ ನ್ಯಾಚಿರೋಪತಿ ಕಾಲೇಜಿನ ಡಾ.ಅಭಿಷೇಕ್ ಯೋಗವನ್ನು ನಡೆಸಿಕೊಟ್ಟರು.ಕು.ಸುಶ್ಮಿತಾ ಶೆಟ್ಟಿ ಸಹಕಾರ ನೀಡಿದರು.

ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ನೇತೃತ್ವದಲ್ಲಿ ನಡೆದ ಈ ಯೋಗ ಕಾರ್ಯಕ್ರಮದಲ್ಲಿ ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ, ಮಂಜುಶ್ರೀ ಜೇಸಿಐ ಬೆಳ್ತಂಗಡಿಯ ಅಧ್ಯಕ್ಷರಂಜಿತ್ ಎಚ್.ಡಿ.ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಎಸ್.ಜಯರಾಜ್ ಹೆಗ್ಡೆ, ಸತೀಶ್.ಬಿ.ಕೆ, ಸದಾನಂದ ಸಾಲಿಯಾನ್ ಬಳಂಜ, ಕರುಣಾಕರ್ ಹೆಗ್ಡೆ ನಾಲ್ಕೂರು, ನಾರಾಯಣ ಪೂಜಾರಿ ನಿಟ್ಟಡ್ಕ, ಪಂಚಶ್ರೀ ಮಹಿಳಾ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಪುಷ್ಪಾ ಗಿರೀಶ್ ಹಾಗೂ 50 ಕ್ಕೂ ಹೆಚ್ಚು ಯೋಗ ಬಂಧುಗಳು ಉಪಸ್ಥಿತರಿದ್ದರು.

ಪ್ರಾಚೀನ ಋಷಿ ಮುನಿಗಳಾದ ಪತಂಜಲಿ ಮಹರ್ಷಿಗಳಿಂದ ಬೋದಿಸಲ್ಪಟ್ಟ ಯೋಗ ಇಂದು ವಿಶ್ವಾದ್ಯಂತ ಜನಮನ್ನಣೆ ಪಡೆಯುತ್ತಿದ್ದು ರೋಗ ಮುಕ್ತ ಆರೋಗ್ಯಪೂರ್ಣ ಸಮಾಜ ಕಟ್ಟಲು ಪ್ರತಿಯೊಬ್ಬರೂ ಯೋಗ ಸಾಧನೆ ಮಾಡುವುದರಿಂದ ಸಾಧ್ಯವಿದ್ದು ಯೋಗ, ಪ್ರಾಣಾಯಾಮ ಸೂರ್ಯ ನಮಸ್ಕಾರ ಮತ್ತು ಧ್ಯಾನವನ್ನು ಪ್ರತಿದಿನ ನಾವು ಮಾಡುವುದರಿಂದ ನರ ಮಂಡಲಗಳು ವಿಕಸಿತಗೊಂಡು ಇಡೀ ನಮ್ಮ ಶರೀರ ಶಾಂತಿಯ ಅನುಭೂತಿಯನ್ನು ಪಡೆಯುತ್ತದೆ.

ಯೋಗದಿಂದ ನಮ್ಮ ಆಧ್ಯಾತ್ಮಿಕ ಶಕ್ತಿಯು ಸಹ ಜಾಗೃತಗೊಳ್ಳುತ್ತದೆ.ಯುವ ಸಮುದಾಯ ಯೋಗವನ್ನು ತಮ್ಮ ಜೀವನದ ಅಂಗವಾಗಿಸುವ ನಿಟ್ಟಿನಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಯೋಗಕ್ಕೆ ವಿಶ್ವ ಮಾನ್ಯತೆಯನ್ನು ತಂದು ಕೊಟ್ಟಿರುವುದರಿಂದ ಇಡೀ ಜಗತ್ತಿನಲ್ಲಿ ಯೋಗ ಮನೆ ಮಾತಾಗಿದೆ.ನಮ್ಮ ದೇಶದ ಪ್ರತಿಯೊಂದು ಶಾಲೆಯಲ್ಲಿಯೂ ಮಕ್ಕಳಿಗೆ ಯೋಗ ತರಬೇತಿ ನೀಡಲಾಗುತ್ತದೆ.

Exit mobile version