Site icon Suddi Belthangady

ಅಳದಂಗಡಿಯಲ್ಲಿ ವಿಶ್ವ ಯೋಗ ದಿನಾಚರಣೆ

ಅಳದಂಗಡಿ: ದೀಪಾ ಸಭಾಭವನದಲ್ಲಿ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ ಅಜಿಲರವರು ವಹಿಸಿದ್ದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಶಿವಪ್ರಸಾದ ಅಜಿಲರವರು “ಯೋಗವು ನಮ್ಮ ಶಾರೀರಿಕ ಮಾನಸಿಕ ಸ್ವಾಸ್ಥ್ಯದ ಉದ್ದೀಪನದ ಜೊತೆಗೆ ವ್ಯಕ್ತಿತ್ವ ವಿಕಸನ ಮಾಡುತ್ತದೆ.ಯೋಗವು ನಮ್ಮ ಜೀವನಕ್ರಮವಾಗಿ ರೂಪುಗೊಳ್ಳಬೇಕು” ಎಂದು ತಿಳಿಸಿ ಶುಭ ಹಾರೈಸಿದರು.

21 ದಿನಗಳ ಉಚಿತ ಯೋಗ ಶಿಬಿರದ ತರಬೇತುದಾರರಾಗಿ ಸೇವೆ ಸಲ್ಲಿಸಿದ ಕು.ಸುಖಿತಾ ಪಡ್ಯೋಡಿಗುತ್ತುರವರನ್ನು ಯೋಗ ಶಿಬಿರಾರ್ಥಿಗಳ ವತಿಯಿಂದ ಹಾಗೂ ಶ್ರೀ ಸತ್ಯದೇವತಾ ದೈವಸ್ಥಾನದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ಸಭಾ ವೇದಿಕೆಯಲ್ಲಿ ಅಳದಂಗಡಿ ಅರಮನೆಯ ಮಧುರಾ ಪದ್ಮಪ್ರಸಾದ ಅಜಿಲ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು, ಶಿರ್ಲಾಲು ಸಿಎ ಬ್ಯಾಂಕ್ ಅಧ್ಯಕ್ಷ ನವೀನ್ ಕೆ ಸಾಮಾನಿ, ಯುವ ಸಂಘಟಕ ಸಂತೋಷ್ ಕಾಪಿನಡ್ಕ, ಪದ್ಮಾಂಬ ಅರೇಂಜರ್ಸ್ ಮಾಲಕರ ಸುಕೇಶ್ ಜೈನ್, ತರಬೇತುದಾರೆ ಕು.ಸುಖಿತಾ ಪಡ್ಯೋಡಿಗುತ್ತು, ಮಮತಾ ಎಸ್ ರೈ ಉಪಸ್ಥಿತರಿದ್ದರು.

ಸಂತೋಷ್ ಕಾಪಿನಡ್ಕ, ನವೀನ್ ಸಾಮಾನಿ ಅತಿಥಿ ನುಡಿಗಳನ್ನಾಡಿದರು.ಶಿಬಿರಾರ್ಥಿಗಳಾದ ಜಯರಾಜ್, ಜಯಲಕ್ಷ್ಮಿ ಎನ್ ಸಾಮಾನಿ ಅನಿಸಿಕೆ ವ್ಯಕ್ತಪಡಿಸಿದರು.ಸಭಾಭವನದ ಮಾಲಕ ಪ್ರಭಾಕರ ಶೆಟ್ಟಿರವರಿಗೆ ಕೃತಜ್ಞತೆ ಸಲ್ಲಿಸಲಾಯಿತು.ಶಿಬಿರಾರ್ಥಿ ಸಂದೀಪ್ ಎಸ್ ನೀರಲ್ಕೆ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

Exit mobile version