Site icon Suddi Belthangady

ಬೆಳಾಲು: ಪ್ರೌಢಶಾಲೆಯಲ್ಲಿ ಗಮಕ ಪ್ರಾತ್ಯಕ್ಷಿಕೆ

ಬೆಳಾಲು: ಭಾಷೆಯ ಮೂಲಕ ಮಾನವತೆಯನ್ನು ಬೆಳೆಸಬೇಕು. ಅದಕ್ಕೆ ಗಮಕ ಕಲೆ ಮಾಧ್ಯಮವಾಗಿದೆ. ಜೀವನ ಮೌಲ್ಯಗಳನ್ನು ಮತ್ತು ಬದುಕಿಗೆ ಸೌಂದರ್ಯವನ್ನು ತಂದುಕೊಳ್ಳಲು ಕಾವ್ಯಾಧ್ಯಯನ ಮೂಲ ಪ್ರೇರಣೆಯಾಗಬಲ್ಲದು.ಕಾವ್ಯದ ರಸಮೌಲ್ಯಗಳು ಜನರಿಗೆ ಪರಿಣಾಮಕಾರಿಯಾಗಿ ತಲಪಿಸುವ ಕೆಲಸವನ್ನು ಗಮಕ ಕಲೆಯು ಮಾಡುತ್ತದೆ ಮತ್ತು ಹಳೆಗನ್ನಡ ಕಾವ್ಯಗಳು ನಿತ್ಯನೂತನವಾಗಿ, ಸಮಕಾಲೀನತೆಯ ಪ್ರಸ್ತುತಿಗೆ ಗಮಕ ಕಲೆಯೇ ಕಾರಣ ಎಂದು ದ.ಕ. ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯರು ಅಭಿಪ್ರಾಯ ಪಟ್ಟರು.

ಇವರು ಕರ್ನಾಟಕ ಗಮಕ ಕಲಾ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಜರಗಿದ ಗಮಕ ವಾಚನ ಪ್ರವಚನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ, ಗಮಕಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಉದ್ಘಾಟಿಸಿ ಶುಭಹಾರೈಸಿದರು. ವಾಚನಕಾರರಾಗಿ ಗಮಕಿಗಳಾದ ಶ್ರೀವಿದ್ಯಾ ಐತಾಳ್ ಉಜಿರೆ, ಪ್ರವಚನಕಾರರಾಗಿ ಮಧೂರು ಮೋಹನ ಕಲ್ಲೂರಾಯರು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕುಮಾರವ್ಯಾಸ ಭಾರತ ಮತ್ತು ರನ್ನನ ಗದಾಯುದ್ಧ ಕಾವ್ಯ ಭಾಗದಿಂದ ಆಯ್ದ ಪದ್ಯಗಳನ್ನು ವಾಚನ ಪ್ರವಚನದಲ್ಲಿ ಪ್ರಸ್ತುತಪಡಿಸಿದರು.

ಕನ್ನಡ ಶಿಕ್ಷಕ ಸುಮನ್ ಯು.ಎಸ್. ರವರ ಮಾರ್ಗದರ್ಶನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಲಿಖಿತಾ ಸ್ವಾಗತಿಸಿ, ಜೀವನ್ ಕುಮಾರ್ ವಂದಿಸಿ, ಇಂದುಮತಿ ಕಾರ್ಯಕ್ರಮ ನಿರೂಪಿಸಿದರು.

Exit mobile version