Site icon Suddi Belthangady

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗದಿಂದ ಆಹಾರ ಸುರಕ್ಷತಾ ದಿನ

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗದಿಂದ ಆಹಾರ ಸುರಕ್ಷತಾ ದಿನವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಆರಂಭದಲ್ಲಿ “ಸುರಕ್ಷಿತ ಆಹಾರ ನಮಗೇಕೆ ಮುಖ್ಯ ಎನ್ನುವುದನ್ನು ಪ್ರಸ್ತುತ ಪಡಿಸುವ ಕಿರುನಾಟಕ, ನಂತರದಲ್ಲಿ ನಮ್ಮ ಸುತ್ತಮುತ್ತಲು ಸುಲಭದಲ್ಲಿ ದೊರೆಯುವ ಅನೇಕ ಅಹಾರ ಪದಾರ್ಥಗಳಾದ ಮಾವಿನಕಾಯಿ, ಎಳನೀರು, ಒಂದೆಲಗ, ಪೇರಲೆಕಾಯಿ, ಬಾಳೆಹಣ್ಣು, ಈರುಳ್ಳಿ ಇತ್ಯಾದಿಗಳ ಉಪಯೋಗಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಸಾಗಿಬಂತು.

ಕಾರ್ಯಕ್ರಮವನ್ನು ಕೊಬ್ಬರಿ-ಬೆಲ್ಲವನ್ನು ಅತಿಥಿಗಳಿಂದ ಮಕ್ಕಳಿಗೆ ನೀಡಿ ಆರಂಭಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಸಿದ್ದ – ಸಂಪನ್ಮೂಲ ವ್ಯಕ್ತಿ ಆಳ್ವಾಸ್ ಆರ್ಯುವೇದ ವೈದ್ಯಕೀಯ ಕಾಲೇಜಿನ ಡಾ.ಸ್ಮಿತಾ ಭಟ್ ಯು.ಎಸ್ ರವರು- ಆಹಾರ ಕೇವಲ ಒಂದು ಜಡವಸ್ತುವಲ್ಲ ಅದು ನಮ್ಮ ದೇಹವನ್ನು ಪ್ರವೇಶಿಸಿ ದೇಹಕ್ಕೆ ಶಕ್ತಿ ತುಂಬುವ ಅಪರೂಪದ ವಸ್ತು. ನಮ್ಮ ದೇಹ ಕಸದ ಬುಟ್ಟಿಯಲ್ಲ. ಹಾಗಾಗಿ ಆಹಾರವೆಂದುಕೊಂಡು ಸಿಕ್ಕಿದನ್ನೆಲ್ಲ ತಿನ್ನದೇ ಸಮತೂಕದ ಆಹಾರವನ್ನು ಸೇವಿಸುವಂತೆ ಕರೆಯಿತ್ತರು.

ಆಹಾರದ ಘಟಕಗಳು ಅವುಗಳ ಮೂಲಗಳು ಮತ್ತು ಅವುಗಳ ಉಪಯುಕ್ತತೆ ತಿಳಿಸಿಕೊಟ್ಟು, ಅದರ ಜೊತೆಗೆ ಸಿಕ್ಕಿದನ್ನೆಲ್ಲ ತಿನ್ನುತ್ತಾ ಹೋದರೆ, ನಾವು ತಿಂದ ಆಹಾರವೇ ಮುಂದೆ ವಿಷವಾಗಿ ನಮಗೆ ಅಪಾಯ ತರುತ್ತದೆ. ಜಂಕ್‌ಫುಡ್ ಎಂಬ ಮಾರಿಯನ್ನು ದೂರವಿಟ್ಟು, ಅತಿಯಾದ ಸಕ್ಕರೆ, ಉಪ್ಪು, ರಾಸಾಯನಿಕ ಬಳಸಿದ ಆಹಾರ ಪದಾರ್ಥಗಳನ್ನು ತ್ಯಜಿಸಿ -ಉತ್ತಮ ಆರೋಗ್ಯವನ್ನು ನಮ್ಮದಾಗಿಸುವತ್ತ ಗಮನ ಕೊಡುವಂತೆ ಕರೆನೀಡಿದರು. ಯಾವುದೇ ಆಹಾರ ಪದಾರ್ಥಗಳನ್ನು ತೆಗೆದುಕೊಂಡಾಗ ಅದನ್ನು ತಯಾರಿಸಲು ಬಳಸುವ ಸಾಮಾಗ್ರಿಗಳ ಮಾಹಿತಿಯನ್ನು ತಪ್ಪದೇ ಓದಿಕೊಳ್ಳಿ. ಸದಾಕಾಲ ಸಮತೂಕದ ಆಹಾರವನ್ನು ಸೇವಿಸಿ ಎನ್ನುವ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಮಾತಾನಾಡಿದ ಮುಖ್ಯಶಿಕ್ಷರಾದ ಶಿವಪ್ರಸಾದ್ ಭಟ್ ಮಾತಾನಾಡಿ ಉತ್ತಮ ಆರೋಗ್ಯ ನಮ್ಮದಾಗಬೇಕಾದರೆಅದರ ಬಗ್ಗೆ ಮನಗೆ ಸ್ಪಷ್ಟ ಅರಿವಿರಬೇಕು- ಜಂಕ್‌ಫುಡ್ ಇವತ್ತಿನಿಂದಲೇ ದೂರಮಾಡಿ, ಆರೋಗ್ಯಕ್ಕಿಂತ ದೊಡ್ಡ ಭಾಗ್ಯವಿಲ್ಲ, ಅದನ್ನು ಕಾಪಾಡಿಕೊಳ್ಳಿ ಎಂಬ ಕರೆಯಿತ್ತರು.

ಆಹಾರ ಸುರಕ್ಷತಾ ದಿನದ ಮಹತ್ವ ಸಾರುವ ವೀಡಿಯೊ ಸಂದೇಶವನ್ನು ಪ್ರಸ್ತುತಪಡಿಸಲಾಯಿತು.ಸಂಸ್ಥೆಯ ವಿಜ್ಞಾನ ವಿಭಾಗದ ಉಸ್ತುವಾರಿಯಲ್ಲಿ ವಿದ್ಯಾರ್ಥಿನಿ ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರೆ, ವಿದ್ಯಾರ್ಥಿ ಸಚ್ಚಿನ್ ನಾಯಕ್ ವಂದನೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

Exit mobile version