Site icon Suddi Belthangady

ಕುಕ್ಕಾಜೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ 15ನೇ ಪ್ರತಿಷ್ಠ ವರ್ಧಂತಿಯ ಆಮಂತ್ರಣ ಪತ್ರಿಕೆ ಬಿಡುಗಡೆ- ಹಿರಿತನಕ್ಕೆ ಗೌರವ ಪ್ರಾಪ್ತಿಯಾಗಬೇಕು: ಮಾಣಿಲ ಶ್ರೀಗಳು

ಬೆಳ್ತಂಗಡಿ: ಹಿರಿಯರು ಮಾಡಿದ ತ್ಯಾಗದ ತಿಳುವಳಿಕೆಯಿಂದ ಅವರ ಬಗ್ಗೆ ಗೌರವ ಮೂಡಿಸುವಂತಹ ಕಾರ್ಯವು ಇಂದು ನಡೆಯಬೇಕಾಗಿದೆ.ಯುವ ಪೀಳಿಗೆಗೆ ಸಾರ್ಥಕ ಬದುಕನ್ನು ನಡೆಸಲು ಸಂಸ್ಕಾರ ನೀಡುವುದರೊಂದಿಗೆ ನಮ್ಮ ಧಾರ್ಮಿಕ ಆಚರಣೆಗಳು ಮಾನಸಿಕವಾಗಿ ಸತ್ಪರಿಣಾಮ ಬೀರುವಂತೆ ಅನುಷ್ಠಾನವಾಗಬೇಕು.ಆರಾಧನಾ ಕೇಂದ್ರಗಳು ಮನಸ್ಸಿಗೆ ಸಾತ್ವಿಕ ಪ್ರಭಾವ ಬೀರುವ ವಾತಾವರಣವನ್ನು ಹೊಂದಿರಬೇಕೆಂದು ಶ್ರೀಧಾಮ ಮಾಣಿಲದ ಪರಮಹಂಸ ಶ್ರೀ ಮೋಹನದಾಸ ಸ್ವಾಮೀಜಿ ತಿಳಿಸಿದರು.

ಮಾಣಿಲ ಕ್ಷೇತ್ರದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರೀಯ ಸಮಿತಿಯ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಕುಕ್ಕಾಜೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ 15ನೇ ಪ್ರತಿಷ್ಠ ವರ್ಧಂತಿಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಬಿ.ಭುಜಬಲಿ ಪ್ರತಿಷ್ಠಾನದ ವತಿಯಿಂದ ಸಹಕಾರಿ ಸಂಸ್ಥೆ ಸ್ಥಾಪಿಸುವುದು ಉತ್ತಮ ಯೋಜನೆ ಎಂದು ತಿಳಿಸಿದರು.

ಹಿರಿಯರು ಮಾಡುವ ಸೇವಾ ಕಾರ್ಯವು ಮಹತ್ವದಾಗಿದ್ದು ಇದರಿಂದ ಸಮಾಜವು ಪ್ರೇರಣೆ ಪಡೆಯುವಂತಾಗಬೇಕೆಂದು ಪ್ರತಿಷ್ಠಾನದ ಉಪಾಧ್ಯಕ್ಷ ಯಂ. ಜಯರಾಮ ಭಂಡಾರಿ ಧರ್ಮಸ್ಥಳ ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯಾರು ನಾರಾಯಣ ಭಟ್ ಮಾತನಾಡಿ ಡಿಸೆಂಬರನಲ್ಲಿ ಜರಗುವ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿಸಲು ಸ್ವಯಂ ಕರ್ತವ್ಯವೆಂದು ತಿಳಿದು ಸದಸ್ಯರು ಬದ್ಧತೆಯಿಂದ ಸಹಕರಿಸಬೇಕೆಂದರು.

ಪ್ರತಿಷ್ಠಾನದ ಸದಸ್ಯರಾದ ಅನಾರು ಕೃಷ್ಣಶರ್ಮ ಮತ್ತು ಬಾಲಕೃಷ್ಣ ನಾಯಕ ಕೋಕಳ ಸ್ವಾಮೀಜಿಯವರನ್ನು ಪ್ರತಿಷ್ಠಾನದ ವತಿಯಿಂದ ಗೌರವಿಸಿದರು.ಬೆಳ್ತಂಗಡಿ ಘಟಕದ ಸಂಚಾಲಕ ವಸಂತ ಸುವರ್ಣ , ವಾರಿಜಾ ಸುವರ್ಣ, ಪುತ್ತೂರು ಘಟಕದ ಚಂದ್ರಶೇಖರ ಆಳ್ವ ಪಡುಮಲೆ,ಭವಾನಿ ಶಂಕರ ಶೆಟ್ಟಿ ಪುತ್ತೂರು, ಸೋಮನಾಥ ಬೇಕಲ್, ಚಂದ್ರಕಲಾ ಎಸ್ ಬೇಕಲ್, ಉದಯಶಂಕರ್ ರೈ ಪುಣಚ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ವಂದಿಸಿದರು. ಪ್ರತಿಷ್ಠಾನದ ಟ್ರಸ್ಟಿ ದುಗ್ಗಪ್ಪ. ಯನ್ ಕಾರ್ಯಕ್ರಮ ನಿರೂಪಿಸಿದರು.

Exit mobile version