Site icon Suddi Belthangady

ಉಜಿರೆ ಎಸ್.ಡಿ.ಎಂ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷಾರಂಭ- ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮ

ಉಜಿರೆ: ಉಜಿರೆ ಎಸ್.ಡಿ.ಎಂ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷಾರಂಭ- ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮವು ಇಂದು ಮೇ 31ರಂದು ನಡೆಯಿತು. ಶೈಕ್ಷಣಿಕ ವರ್ಷಾರಂಭ ಹಾಗೂ ವಿದ್ಯಾರ್ಥಿ ಹಾಗೂ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಪ್ರಯತ್ನವನ್ನು ವೈಜ್ಞಾನಿಕವಾಗಿ ಮುಂದುವರಿಸುವ ಸಲುವಾಗಿ ಹೆತ್ತವರ ಭಾವನೆ, ನಿರೀಕ್ಷೆ, ಭರವಸೆಗಳನ್ನು ಈಡೇರಿಸುವ ಉದ್ದೇಶದಿಂದ ಈ ಸಂಸ್ಥೆ ಬಹಳಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಅಲ್ಲದೇ ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ಕೂಡ ಕಂಡಿದೆ.

ವಸತಿ ಪದವಿ ಪೂರ್ವ ಕಾಲೇಜು ‘ಮಿನಿ ಕರ್ನಾಟಕ’ ಇದ್ದ ಹಾಗೆ ರಾಜ್ಯದ ಹಲವಾರು ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ನಿರತರಾಗಿದ್ದಾರೆ. ಸ್ವಾಮಿ ಮಂಜುನಾಥನ ಕೃಪೆ, ಸಂಸ್ಥೆಯ ನಿರಂತರ ಪ್ರೋತ್ಸಾಹ, ನುರಿತ ಅಧ್ಯಾಪಕ ವರ್ಗದ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ದೊರಕಿತ್ತು, ಮುಂದಿನ ದಿನಗಳಲ್ಲಿ ಹೆತ್ತವರು ನಿಮ್ಮ ಮಕ್ಕಳ ಇನ್ನೂ ಉತ್ತಮ ಫಲಿತಾಂಶವನ್ನು ಕಾಣಲಿದ್ದೀರಿ. ಈ ದಿನ ಹೆತ್ತವರಾದ ನಿಮ್ಮ ಮುಖದಲ್ಲಿ ಕಾಣುತ್ತಿರುವ ಭಯ, ಆತಂಕ , ತಳಮಳ ಮುಂದಿನ ದಿನಗಳಲ್ಲಿ ಸಂತೃಪ್ತಿಯ ನಗೆಯ ಮೂಲಕ ಮಾಯವಾಗಲಿದೆ.

ಹೆತ್ತವರಾದ ನಿಮ್ಮ ನಿರೀಕ್ಷೆಗಳು ಮಿತಿಯಲ್ಲಿ ಇರಲಿ, ತಪೋಭೂಮಿಯಂತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಗುಣಾತ್ಮಕ ಹಾಗೂ ಮೌಲಿಕ ಬದಲಾವಣೆಗೆ ಸತತ ಪರಿಶ್ರಮವು ನಡೆಯುತ್ತಿದೆ.ಮಕ್ಕಳಿಗೆ ಕಲಿಕೆಗೆ ಅತಿಯಾದ ಒತ್ತಡವನ್ನು ಹೇರದೆ ಸವಾಲುಗಳನ್ನು ಎದುರಿಸಲು ಅವರನ್ನು ಸಜ್ಜುಗೊಳಿಸಲಾಗುತ್ತದೆ. ಓದುವ, ಓದಿ ಗುರಿ ಮುಟ್ಟುವ ಹಸಿವನ್ನು ವಿದ್ಯಾರ್ಥಿಗಳಲ್ಲಿ ಒಡ ಮೂಡಿಸುವುದು. ಆ ಮೂಲಕ ಸಾಧಿಸುವ ಛಲವನ್ನು ತುಂಬಿಸುವುದು ಬಹಳ ಮುಖ್ಯವಾಗಿದೆ.

ನಮ್ಮ ದೇಹದ ನರವ್ಯೂಹವನ್ನು ದುರ್ಬಲಗೊಳಿಸುವಂತಹ ಚಿಂತೆಯಿಂದ ದೂರವಿದ್ದು ಕೇವಲ ಆರೋಗ್ಯಪೂರ್ಣ ಮೌಲಿಕ ಶಿಕ್ಷಣವು ಇಂದಿನ ದಿನಗಳಲ್ಲಿ ಅನಿವಾರ್ಯವೆನಿಸಿದೆ.

ಹೆತ್ತವರ ನಿರೀಕ್ಷೆಗೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿ ಉತ್ತಮ ಕಲಿಕಾರ್ಥಿಯಾಗಿ ಉತ್ತಮ ಅಂಕದ ಜೊತೆಗೆ ನಿಮ್ಮ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗಿಸಿಕೊಳ್ಳಿ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎ.ಕುಮಾರ್ ಹೆಗ್ಡೆ ಉದ್ಘಾಟಿಸಿ, ಶೈಕ್ಷಣಿಕ ವರ್ಷಕ್ಕೆ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಅತ್ಯಂತ ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಿ, ಕಾಲೇಜಿನ ತಂಡ ನಿಮ್ಮ ಸಹಾಯಕ್ಕೆ ಸಜ್ಜಾಗಿದ್ದೇವೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್, ದೈಹಿಕ ಶಿಕ್ಷಕ ಲಕ್ಷ್ಮಣ್ ಜಿ.ಡಿ ಉಪಸ್ಥಿತರಿದ್ದರು.ಭೌತಶಾಸ್ತ್ರ ಉಪನ್ಯಾಸಕರಾದ ವಿಕ್ರಂ ಪಿ ವಂದಿಸಿ, ನಿರೂಪಿಸಿದರು.

Exit mobile version