Site icon Suddi Belthangady

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ ನ ತಾಲೂಕಿನ ಪ್ರಗತಿಬಂದು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರುಗಳ ಸಭೆ- ಪ್ರಗತಿಬಂದು ಒಕ್ಕೂಟದ ಅಧ್ಯಕ್ಷರಾಗಿ ನಮಗೆಲ್ಲರಿಗೂ ಸೇವೆ ನೀಡಲು ಅವಕಾಶ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ: ಬೆಳ್ತಂಗಡಿ ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರುಗಳ ಸಭೆಯು ಮಂಜುನಾಥ ಸ್ವಾಮಿ ಕಲಾಭವನ ಬೆಳ್ತಂಗಡಿಯಲ್ಲಿ ನಡೆಯಿತು.

ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಸರ್ ರವರು ಉದ್ಘಾಟಿಸಿ ಮಾತನಾಡಿ ಒಂದು ಕುಟುಂಬದ ಸರ್ವತೋಮುಖ ಅಭಿವೃದ್ಧಿಯೆ ಯೋಜನೆಯ ಮೂಲ ದ್ಯೇಯ, ಸುಮಾರು 40 ವರ್ಷದ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆಯವರ ಮತ್ತು ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಪ್ರಾರಂಭಗೊಂಡ ಗ್ರಾಮಾಭಿವೃದ್ಧಿ ಯೋಜನೆಯು ಕಟ್ಟ ಕಡೆಯ ವ್ಯಕ್ತಿಗೂ ಕೂಡ ಮೂಲಸೌಕರ್ಯಗಳನ್ನು ಒದಗಿಸುವುದರೊಂದಿಗೆ ಅವರ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟು ಶ್ರಮಿಸಿದ ಪರಿಯನ್ನು ಒಕ್ಕೂಟದ ಅಧ್ಯಕ್ಷರಿಗೆ ತಿಳಿಸಿದರು.

ಒಕ್ಕೂಟದ ಅಧ್ಯಕ್ಷರು ಆಯಾ ಒಕ್ಕೂಟಕ್ಕೆ ಕಣ್ಣುಗಳಿದ್ದಂತೆ, ನಿರಂತರವಾಗಿ ಗ್ರಾಮದಲ್ಲಿ ಯಾವುದೇ ಸಮಸ್ಯೆಗಳು ಬಂದಾಗ ಅಥವಾ ತೀರಾ ಸಮಸ್ಯೆಗೆ ತುತ್ತಾದಾಗ ಆ ಕುಟುಂಬದ ನೆರವಿಗೆ ನಿಂತು ಕ್ಷೇತ್ರದ ವತಿಯಿಂದ ಎಲ್ಲ ಸಹಕಾರಗಳನ್ನು ಒದಗಿಸಿಕೊಡುವಲ್ಲಿ ಅಧ್ಯಕ್ಷರ ಜವಾಬ್ದಾರಿ ಮಹತ್ತರವಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ಸೇವೆ ಮಾಡುವ ಸೌಭಾಗ್ಯ ಎಲ್ಲರಿಗೂ ಕೂಡ ಸಿಗುವುದಿಲ್ಲ ಆದರೆ ಆಯಾ ಒಕ್ಕೂಟದ ಸದಸ್ಯರು ನಿಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನಿಮಗೆ ಜವಾಬ್ದಾರಿ ನೀಡಿರುವುದು ಯಾವುದೇ ಜನ್ಮದಲ್ಲಿ ಮಾಡಿದ ಪುಣ್ಯದ ಫಲ ಎನ್ನುವ ಮಾತಿನೊಂದಿಗೆ ಕಳೆದ ಎರಡು ವರ್ಷದ ಅವಧಿಯಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ನೀಡಿದ ಎಲ್ಲಾ ಅಧ್ಯಕ್ಷರಿಗೆ ಶಾಲು ಹೊದಿಸಿ ಕೃತಜ್ಞತೆಯನ್ನು ಸಲ್ಲಿಸಿ ನೂತನವಾಗಿ ಆಯ್ಕೆಯಾದ ತಾಲೂಕಿನ ಎಲ್ಲ ಒಕ್ಕೂಟದ ಅಧ್ಯಕ್ಷರಿಗೆ ಅಭಿನಂದಿಸಿದರು.

ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ ಶುಭಹಾರೈಸಿದರು.ಬೆಳ್ತಂಗಡಿ ತಾಲೂಕಿನ ಭಜನಾ ಪರಿಷತ್ತಿನ ಕಾರ್ಯದರ್ಶಿಗಳಾದ ಚಂದ್ರಶೇಖರ್ ರವರು ಶುಭಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸೀತಾರಾಮ ಬೆಳ್ತಂಗಡಿಯವರು ಯೋಜನೆಯು ಕೈಗೊಂಡಿರುವ ಪ್ರತಿಯೊಂದು ಕಾರ್ಯಕ್ರಮವು ಸಮಾಜಮುಖಿ ಹಾಗೂ ಸಮಾಜಕ್ಕೆ ಅರ್ಪಿಸುವ ಕಾರ್ಯಕ್ರಮ ಆಗಿದೆ, ಸಮಾಜದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೇವೆ ಮಾಡಲು ಒಕ್ಕೂಟದ ಅಧ್ಯಕ್ಷರ ಮೂಲಕವಾಗಿ ಅವಕಾಶ ಸಿಕ್ಕಿರುವುದು ನಮಗೆಲ್ಲರಿಗೂ ಸಿಕ್ಕ ಸೌಭಾಗ್ಯ ಎಂದರು,ಆಯಾ ಒಕ್ಕೂಟಗಳನ್ನು ಆಯಾ ಒಕ್ಕೂಟದ ಅಧ್ಯಕ್ಷರು ಬಲಪಡಿಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಯೋಜನೆಯ ಮೂಲಕವಾಗಿ ಅನುಷ್ಠಾನ ಮಾಡುವಲ್ಲಿ ನಾವೆಲ್ಲರೂ ಕೂಡ ಕೈಜೋಡಿಸಬೇಕೆಂದು ಅಧ್ಯಕ್ಷೀಯ ನುಡಿಗೈದರು.

ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಜಿರೆ ವಲಯ ಅಧ್ಯಕ್ಷರಾದ ಉಮಾರಬ್ಬ, ಲಾಯಿಲಾ ವಲಯದ ವಲಯ ಅಧ್ಯಕ್ಷ ಬಿ.ಎ ರಜಾಕ್, ಮುಂಡಾಜೆ ವಲಯದ ವಲಯ ಅಧ್ಯಕ್ಷ ಆರ್ ವಿಜಯ್, ಕೊಕ್ಕಡ ವಲಯ ವಲಯ ಅಧ್ಯಕ್ಷ ಸೇಸಪ್ಪ ಮೂಲ್ಯ, ನೆರಿಯ ವಲಯದ ಅಧ್ಯಕ್ಷ ಸತೀಶ್, ಧರ್ಮಸ್ಥಳ ವಲಯದ ಅಧ್ಯಕ್ಷ ಮೋನಪ್ಪ ಗೌಡ ಉಪಸ್ಥಿತರಿದ್ದರು.

ತಾಲೂಕಿನ 88 ಒಕ್ಕೂಟದ ನಿಕಟಪೂರ್ವ ಹಾಗೂ ನೂತನ ಒಕ್ಕೂಟದ ಅಧ್ಯಕ್ಷರು ಉಪಸ್ಥಿತರಿದ್ದರು.ಬೆಳ್ತಂಗಡಿ ತಾಲೂಕಿನ ಯೋಜನೆಯ ಯೋಜನಾಧಿಕಾರಿಗಳಾದ ಸುರೇಂದ್ರರವರು ಸ್ವಾಗತಿಸಿ, ತಾಲೂಕಿನ ಕೃಷಿ ಮೇಲ್ವಿಚಾರಕ ರಾಮ್ ಕುಮಾರ್ ಮಾರ್ನಾಡ್ ನಿರೂಪಿಸಿ, 9 ವಲಯದ ಮೇಲ್ವಿಚಾರಕರು, ಜ್ಞಾನವಿಕಾಸದ ಸಮನ್ವಯಾಧಿಕಾರಿ, ಲೆಕ್ಕಪರಿಶೋಧಕರು ಉಪಸ್ಥಿತರಿದ್ದರು.

Exit mobile version