Site icon Suddi Belthangady

ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ಪಿಲ್ಯ: ಪಿಲ್ಯ ಗ್ರಾಮದ ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ವತಿಯಿಂದ ದೇವಳದ ವರ್ಷಾವಧಿ ಜಾತ್ರೆಯು ಎ.20ರಿಂದ 24ರವರೆಗೆ ತಂತ್ರಿಗಳಾದ ಕಾಜಿಮುಗೇರು ಸೀತಾರಾಮ ಕೇಳ್ಕರ್ ಅವರ ನೇತೃತ್ವದಲ್ಲಿ ನೆರವೇರಿತು.

ಎ.20ರಂದು ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ದೊರೆಯಿತು.ಸಂಜೆ ಲಲಿತಾ ಮಹಿಳಾ ಭಜನಾ ಸಂಘ ಸೂಳಬೆಟ್ಟು ಇವರಿಂದ ಭಜನಾ ಸತ್ಸಂಗ, ಬಳಿಕ ಪಿಲ್ಯ ಮಹಮ್ಮಾಯಿ ಭಜನಾ ಸಂಘದವರಿಂದ ಕುಣಿತ ಭಜನೆ, ದೇವರ ಉತ್ಸವ, ಎ.21ರಂದು ಸಂಜೆ ಕೀರ್ತನ ಕಲಾ ತಂಡ ಮುಂಡಾಜೆ ಇವರಿಂದ ಭಜನಾ ಸತ್ಸಂಗ, ಬಳಿಕ ಶ್ರೀಗೋಪಾಲಕೃಷ್ಣ ಭಜನಾ ಮಂಡಳಿ ಸೂಳಬೆಟ್ಟು ಇವರಿಂದ ಕುಣಿತ ಭಜನೆ, ವಸಂತ ಪೂಜೆ, ರಾತ್ರಿ ದರ್ಶನ ಬಲಿ, ಪಲ್ಲಕಿ ಉತ್ಸವ, ಎ.22ರಂದು ಬೆಳಿಗ್ಗೆ ಅಥರ್ವಶೀರ್ಷ ಸಹಸ್ರಾವರ್ತನ ಅಭಿಷೇಕ, ಸಂಜೆ ನಾದ ಮಾಧುರ್ಯ ಬಳಗ ಸೂಳಬೆಟ್ಟು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀರಾಮ ಭಜನಾ ಬಳಗ ಫಂಡಿಜೆ ಇವರಿಂದ ಭಜನಾ ಸತ್ಸಂಗ, ವಸಂತ ಪೂಜೆ, ರಾತ್ರೆ ದೇವರ ಉತ್ಸವ, ಭೂತ ಬಲಿ ನೆರವೇರಿತು.

ಎ.23 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ರಥ ಕಲಶ. ರಥಾರೋಹಣ, ಸಂಜೆ ಅಳದಂಗಡಿ ಡಾ|ಪದ್ಮಪ್ರಸಾದ ಅಜಿಲ ಇವರ ಉಪಸ್ಥಿತಿಯಲ್ಲಿ ದೇವರ ಉತ್ಸವ, ಪಲ್ಲಕಿ ಉತ್ಸವ, ವಸಂತ ಕಟ್ಟೆ ಉತ್ಸವ, ಕೊಡಮಣಿತ್ತಾಯ ನೇಮ, ಅಷ್ಟಸೇವೆ, ಮಹಾ ರಥೋತ್ಸವ, ದೈವ-ದೇವರ ಭೇಟಿ ನಡೆಯಿತು.

ಎ.24ರಂದು ಅವಭೃತೋತ್ಸವ, ಧ್ವಜಾವರೋಹಣದ ಮೂಲಕ ಜಾತ್ರೆ ಸಂಪನ್ನಗೊಂಡಿತು.ತಂತ್ರಿಗಳಾದ ಸಂತೋಷ್ ಕೇಳ್ಕರ್, ಅರ್ಚಕ ಭಾರ್ಗವ ಮರಾಠೆ, ಪ್ರಕಾಶ್ ಭಟ್ ಸುಲ್ಕೇರಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಆಡಳಿತ ಮೊಕ್ತೇಸರ ಎನ್.ಸದಾನಂದ ಸಹಸ್ರಬುದ್ಧೆ, ಪ್ರಭಾಕರ ಆಠವಳೆ ಸೂಳಬೆಟ್ಟು, ಪದ್ಮನಾಭ ನಾತು ಸೂಳಬೆಟ್ಟು, ಗಜಾನನ ನಾತು ಸವಣಾಲು, ದಯಾನಂದ ನಾತು ಫಂಡಿಜೆ, ಚಂದ್ರಕಾಂತ ಗೋರೆ ಕುದ್ಯಾಡಿ, ಪುರುಷೋತ್ತಮ ತಾಮ್ಹನ್‌ಕಾರ್ ಉಲ್ಫೆ, ಹಿರಿಯರಾದ ಮುರಲೀಧರ ಗೋಖಲೆ ಉಪಸ್ಥಿತರಿದ್ದರು.

Exit mobile version