Site icon Suddi Belthangady

ಓಡಿಲ್ನಾಳದಲ್ಲಿ ಹೊಡೆದಾಟ: ದೂರು- ಪ್ರತಿದೂರು ದಾಖಲು

ಓಡಿಲ್ನಾಳ: ಓಡಿಲ್ನಾಳ ಗ್ರಾಮದ ಕನಂತೊಡಿ ಎಂಬಲ್ಲಿ ಪತಿ ರಾತ್ರಿ ಮನೆಗೆ ಬಂದಾಗ ಪತ್ನಿ ತಡವಾಗಿ ಬಾಗಿಲು ತೆಗೆದ ವಿಚಾರವಾಗಿ ಪತಿ ಹಲ್ಲೆ ಮಾಡಿದರೆಂದು ದೂರು ದಾಖಲಾಗಿದ್ದು ಮತ್ತೊಂದೆಡೆ ಪತ್ನಿ ಮನೆಯವರು ಹಲ್ಲೆ ನಡೆಸಿರುವ ವಿಚಾರವಾಗಿ ಪತಿ ನೀಡಿದ ದೂರಿನಂತೆ ಪ್ರತಿದೂರು ದಾಖಲಾದ ಘಟನೆ ಮಾ.30ರಂದು ನಡೆದಿದೆ.

ಓಡಿಲ್ನಾಳ ಗ್ರಾಮದ ರಾಘವೇಂದ್ರ ಗೌಡ (40) ಅವರು ಪತ್ನಿಯೊಂದಿಗೆ ಕನ್ಯಾಡಿಯಲ್ಲಿ ನಡೆದ ಗೃಹ ಪ್ರವೇಶಕ್ಕೆ ತೆರಳಿದ್ದರು.ಬಳಿಕ ಅಲ್ಲಿಂದ ರಾಘವೇಂದ್ರ ಗೌಡ ಅವರು ಸಂಬಂಧಿಕರ ಮನೆಗೆ ದೈವದ ಕಾರ್ಯಕ್ರಮಕ್ಕೆ ತೆರಳಿ ವಾಪಸು ರಾತ್ರಿ ಸುಮಾರು 12.30ಕ್ಕೆ ಮನೆಗೆ ಬಂದು ಬಾಗಿಲು ಬಡಿದಾಗ ಬಾಗಿಲು ತೆರೆಯಲು ತಡವಾಗಿರುವ ವಿಚಾರವಾಗಿ ಪತ್ನಿ ಜತೆ ಜಗಳವಾಡಿದ್ದಾರೆ. ಬಳಿಕ ರಾಘವೇಂದ್ರ ಗೌಡರವರ ಪತ್ನಿ ತನ್ನ ಅಣ್ಣನಿಗೆ ತನಗೆ ಪತಿ ಜೀವ ಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದರು.ಅದರಂತೆ ಅವರ ಅಣ್ಣ ರಾತ್ರಿ ಅವರ ತಂದೆ ಮತ್ತು ಇತರರ ಜತೆಯಲ್ಲಿ ಬಂದು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವಾಗ ಜಗಳವಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಪತಿಯಿಂದ ಪ್ರತಿದೂರು: ಸಂಬಂಧಿಕರ ಮನೆಯ ದೈವದ ಕಾರ್ಯಕ್ರಮದಿಂದ ರಾತ್ರಿ ಬಂದು ಬಾಗಿಲು ತೆಗೆಯುವ ವಿಚಾರದಲ್ಲಿ ಪತ್ನಿ ಜತೆ ಜಗಳವಾಗಿದ್ದು ಈ ವೇಳೆ ಬಾಗಿಲನ್ನು ದೂಡಿದ ಪರಿಣಾಮ ಬಾಗಿಲು ಪತ್ನಿಯ ಹಣೆಗೆ ತಾಗಿ ಗಾಯವಾಗಿದೆ. ಮಾರನೇ ದಿನ ಬೆಳಿಗ್ಗೆ ಪತ್ನಿ ಮನೆಯವರು ಹಾಗೂ ಇತರರಾದ ಸಂಜೀವ ಗೌಡ, ವಿಜಯ ಗೌಡ, ಹರೀಶ, ಚಂದ್ರಶೇಖರ, ಸದಾನಂದ, ರಂಜಿತ್, ಶಶಿಧರ ಹಾಗೂ ಇತರರು ಕಾರಿನಲ್ಲಿ ಬಂದು ಏಕಾಏಕಿ ಬೆತ್ತದಲ್ಲಿ ಮತ್ತು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದು ಬಿಡಿಸಲು ಬಂದ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ದೂಡಿ ಪತ್ನಿಯನ್ನು ಅವರೊಂದಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ರಾಘವೇಂದ್ರ ಗೌಡ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

Exit mobile version