Site icon Suddi Belthangady

ಪಿಕಪ್-ಸ್ಕೂಟರ್ ಅಪಘಾತ: ಓರ್ವ ಸವಾರ ಸಾವು, ಇನ್ನೋರ್ವ ಗಂಭೀರ

ಬೆಳ್ತಂಗಡಿ: ಚರ್ಚ್ ರೋಡ್ ಸಮೀಪ ಮಾ.25ರಂದು ಅಪರಾಹ್ನ ಆಟೋ ರಿಕ್ಷಾ ಸ್ಪರ್ಶಿಸಿ ದ್ವಿಚಕ್ರ ವಾಹನ ಮಗುಚಿ ಬಿದ್ದಿದ್ದು, ಅವರ ಮೇಲೆ ಪಿಕಪ್ ಹರಿದ ಪರಿಣಾಮ ಓರ್ವ ಮೃತಪಟ್ಟಿದ್ದಾರೆ. ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಲಾಯಿಲ ಗ್ರಾಮದ ರಾಘವೇಂದ್ರ ನಗರ ನಿವಾಸಿ ಜಯರಾಮ ಎಂಬವರ ಪುತ್ರ ಪುರುಷೋತ್ತಮ ಮೃತಪಟ್ಟವರು. ಅವರು ವೃತ್ತಿಯಲ್ಲಿ ಪೇಂಟರ್ ಎಂದು ತಿಳಿದುಬಂದಿದೆ. ಇನ್ನೋರ್ವ ಸವಾರ ರಾಘವೇಂದ್ರ ನಗರದ ತೌಸಿಫ್ ಎಂಬವರ ಪುತ್ರನಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಮಾಹಿತಿ ಲಭಿಸಿದೆ.

ಪಿಕಪ್ ಪರಾರಿ: ಮಾ.25ರಂದು ಅಪರಾಹ್ನ ಗುರುವಾಯನಕೆರೆ ಕಡೆಯಿಂದ ಬೆಳ್ತಂಗಡಿಯತ್ತ ತೆರಳುತ್ತಿದ್ದ ಸ್ಕೂಟರ್, ಅದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ರಿಕ್ಷಾಕ್ಕೆ ಒರೆಸಿ ಮಗುಚಿ ಬಿದ್ದಿದೆ. ಈ ವೇಳೆ ಸ್ಕೂಟರ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದರು. ಅದೇ ಸಂದರ್ಭ ಬೆಳ್ತಂಗಡಿಯಿಂದ ಗುರುವಾಯನಕೆರೆಯತ್ತ ಸಾಗುತ್ತಿದ್ದ ಪಿಕಪ್ ರಸ್ತೆಯ ಮೇಲೆ ಬಿದ್ದವರ ಮೇಲೆ ಹರಿದಿದೆ.

ಘಟನೆಯ ಬಳಿಕ ಪಿಕಪ್ ಸ್ಥಳದಿಂದ ಪರಾರಿಯಾಗಿದೆ. ಸ್ಕೂಟರ್ ಸವಾರರ ಮೇಲೆ ಹರಿದು ಗಂಭೀರ ಗಾಯಗೊಂಡಿರುವುದನ್ನು ಪಿಕಪ್ ಚಾಲಕ ಗಮನಿಸಿದ್ದು, ವಾಹನದಿಂದ ಕೆಳಗಿಳಿದು ನೋಡಿದ ಬಳಿಕ ಅಲ್ಲಿಂದ ತೆರಳಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version