Site icon Suddi Belthangady

ಶಿರ್ಲಾಲಿನಲ್ಲಿ ತಂದೆಯ ಮೇಲೆ ಮಗ ಹಾಗೂ ಸೊಸೆಯಿಂದ ಹಲ್ಲೆ

ಶಿರ್ಲಾಲು: ತಂದೆಯ ಮೇಲೆ ಮಗ ಹಾಗೂ ಸೊಸೆ ಹಲ್ಲೆ ನಡೆಸಿದ ಘಟನೆ ಶಿರ್ಲಾಲಿನಲ್ಲಿ ಸಂಭವಿಸಿದ್ದು ಹಲ್ಲೆ ಮಾಡಿದವರ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಶಿರ್ಲಾಲು ಗ್ರಾಮದ ಸರಪ್ಪಾಡಿ ಮನೆ ನಿವಾಸಿಯಾಗಿರುವ ಸುಂದರ ಪೂಜಾರಿ(75) ಎಂಬವರೇ ದೂರು ನೀಡಿದವರಾಗಿದ್ದಾರೆ.ಅವರ ಮಗ ಭುವನೇಂದ್ರ ಹಾಗೂ ಸೊಸೆ ರೇಖಾ ಎಂಬವರೇ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.

ಸುಂದರ ಪೂಜಾರಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರ ಹೆಸರಿನಲ್ಲಿರುವ ಜಮೀನನ್ನು ತನ್ಮ ಹೆಸರಿಗೆ ಬರೆದು ಕೊಡುವಂತೆ ಒತ್ತಾಯಿಸಿ ಮಗ ಹಾಗೂ ಸೊಸೆ ಆಗಾಗ ಜಗಳ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಮಾ.21ರಂದು ಸಂಜೆಯ ವೇಳೆ ಮಗ ಮನೆಯಲ್ಲಿ ಇದ್ದ ಅಡಿಕೆಯನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದು ಈ ವೇಳೆ ಸುಂದರ ಪೂಜಾರಿ ಪ್ರಶ್ನಿಸಿದ್ದಾರೆ ಇದರಿಂದ ಕೋಪಗೊಂಡ ಅವರ ಮಗ ಹಾಗೂ ಸೊಸೆ ಅಡಿಕೆ ಮರದ ಸಲಾಕೆಯಿಂದ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಗೆ ಒಳಗಾಗಿರುವ ಸುಂದರ ಪೂಜಾರಿ ಆಸ್ಪತ್ರೆಗೆ ದಾಖಲಾಗಿದ್ದು ಈ ಬಗ್ಗೆ ವೇಣೂರು ಪೋಲಿಸರಿಗೆ ದೂರು ನೀಡಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Exit mobile version