Site icon Suddi Belthangady

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಕಥಾ ರಚನಾ ಕಮ್ಮಟ- ಜಿಜ್ಞಾಸೆ ಹುಟ್ಟಿದಾಗ ಕಥೆ ಸೃಷ್ಟಿ: ಡಾ.ರಾಜಶ್ರೀ ರೈ ಪೆರ್ಲ

ಉಜಿರೆ: “ಸಂಶೋಧನೆ ಮತ್ತು ಕಥನ ನಮ್ಮಲ್ಲಿ ಸದಾ ಜಿಜ್ಞಾಸೆ ಹುಟ್ಟಿಸಬೇಕು, ಜಿಜ್ಞಾಸೆ ಹುಟ್ಟಿದರೆ ಮಾತ್ರ ಕಥೆ ರಚನೆ ಸಾಧ್ಯ” ಎಂದು ಸಾಹಿತಿ ಡಾ.ರಾಜಶ್ರೀ ರೈ ಪೆರ್ಲ ಹೇಳಿದರು.

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಕನ್ನಡ ಸಂಘವು ಮಾ.20ರಂದು ಆಯೋಜಿಸಿದ್ದ ‘ಕಥೆ ಕಟ್ಟುವ ಬಗೆ’ ಕಥಾ ರಚನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸತನ ಮತ್ತು ಅವಲೋಕನವಿದ್ದರೆ ಮಾತ್ರ ಕಥೆ ಪರಿಪೂರ್ಣವಾಗುತ್ತದೆ. ಆದ್ದರಿಂದ ಕಥೆಗಾರರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಥೆ ಯಾವುದೇ ಬರೆದರೂ ಅದನ್ನು ಓದುವ ವರ್ಗವು ಮುಖ್ಯವಾಗಿರುತ್ತದೆ. ಆದ್ದರಿಂದ ಕಥೆಗಾರ ತನ್ನತನವನ್ನು ಹುಟ್ಟುಹಾಕಿ, ಬೆಳೆಸಿ, ತನ್ಮೂಲಕ ಓದುಗನಿಗೆ ತಲುಪುವಂತೆ ಇರಬೇಕು ಎಂದು ಅವರು ತಿಳಿಸಿದರು.

“ನಾವು ಬರೆದ ಕಥೆಯನ್ನು ಓದುಗರು ಗುರುತಿಸಿದ್ದಾರೆ ಎಂದರೆ ಅದು ನಮ್ಮ ಪರಿಪೂರ್ಣತೆ ಅಲ್ಲ. ನಾವು ಕಥೆಯಲ್ಲಿ ಬರೆದ ಯಾವುದೋ ಒಂದು ಹೊಸ ವಿಷಯ ನಮ್ಮನ್ನು ಗುರುತಿಸುವಂತೆ ಮಾಡಿರಬಹುದು. ಆದ್ದರಿಂದ ಕಥೆ ಬರೆಯುವಾಗ ಹೊಸ ಸಂದರ್ಭ, ಹೊಸ ಸನ್ನಿವೇಶ, ಸಂದೇಶವನ್ನು ನೀಡುತ್ತ ಬರೆಯಬೇಕು. ಆ ಶಕ್ತಿ ಕಥೆಗಾರರಲ್ಲಿ ಇರಬೇಕು” ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ವಿದ್ಯಾರ್ಥಿಗಳಿಗೆ ಕಥಾ ಕಮ್ಮಟದ ಪ್ರಾಮುಖ್ಯ ತಿಳಿಸಿದರು. “ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದರಲ್ಲೂ ಬಹುಮುಖಿ ಓದು ಅಗತ್ಯ. ಇದರಿಂದ ನಮ್ಮ ಜ್ಞಾನ ಭಂಡಾರ ಹೆಚ್ಚಾಗುತ್ತದೆ. ಸಾಹಿತ್ಯ ರಚನೆಗೆ ಅನುಕೂಲವಾಗುತ್ತದೆ. ಹಾಗಾಗಿ ಜ್ಞಾನಭಂಡಾರ ವಿಸ್ತರಿಸಿಕೊಳ್ಳಿ, ಆರೋಗ್ಯಕರ ಹವ್ಯಾಸ ಬೆಳೆಸಿಕೊಳ್ಳಿ” ಎಂದು ಕರೆ ನೀಡಿದರು.

“ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಇಂದು ನಾವು ಹೆಚ್ಚು ಆಕರ್ಷಿತರಾಗಿದ್ದೇವೆ. ಯಂತ್ರದೊಂದಿಗೆ ನಮ್ಮ ಸಮಯವನ್ನು ಕಳೆಯುತ್ತೇವೆ. ಇದರ ಬದಲು ಸಣ್ಣ ಕಥೆ ಬರೆಯಲು ಶುರುಮಾಡಿ. ಸಣ್ಣ ಕುತೂಹಲದಿಂದ ಕಥೆ ರಚಿಸಲು ಸಾಧ್ಯ. ಕುತೂಹಲ ಹೆಚ್ಚಿಸಿಕೊಳ್ಳಿ. ನಿಮ್ಮ ಜ್ಞಾನಭಂಡಾರ ವಿಸ್ತಾರಗೊಳ್ಳುತ್ತದೆ” ಎಂದು ಕಿವಿಮಾತು ಹೇಳಿದರು.

ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್., ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಮತ್ತು ವಿಭಾಗದ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಸ್ವಾಗತಿಸಿ, ವಿದ್ಯಾರ್ಥಿ ಪ್ರಜ್ವಲ್ ವಂದಿಸಿ, ವಿದ್ಯಾರ್ಥಿನಿ ರೇಷ್ಮಾ ನಿರೂಪಿಸಿದರು.

Exit mobile version