Site icon Suddi Belthangady

ಧರ್ಮಸ್ಥಳ: ಬಿಜೆಪಿ ನೂತನ ಮಂಡಲದ ಅಧ್ಯಕ್ಷ ಶ್ರೀನಿವಾಸ್ ರಾವ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಧರ್ಮಸ್ಥಳ: ಬೆಳ್ತಂಗಡಿ ಬಿಜೆಪಿ ಮಂಡಲದ ನೂತನ ಅಧ್ಯಕ್ಷ ಶ್ರೀನಿವಾಸ್ ರಾವ್ (ಪುಟಾಣಿ) ಅವರಿಗೆ ಅಭಿನಂದನಾ ಕಾರ್ಯಕ್ರಮ ಧರ್ಮಸ್ಥಳದ ನೇತ್ರಾ ವತಿ ಪ್ರಣವ್ ಲಾಡ್ಜ್ ಸಭಾಂಗಣದಲ್ಲಿ ಮಾರ್ಚ್ 19ರಂದು ನಡೆಯಿತು.

ನಿಕಟಪೂರ್ವ ಅಧ್ಯಕ್ಷ ಜಯಂತ್ ಕೋಟ್ಯಾನ್, ಶಕ್ತಿಕೇಂದ್ರ ಪ್ರಮುಖರಾದ ಹರ್ಷಿತ್ ಜೈನ್ ಹಾಗೂ ವಿಕ್ರಮ್ ಅವರು ಉಪಸ್ಥಿತರಿದ್ದರು.

ಹಿರಿಯ ಕಾರ್ಯಕರ್ತರು ಹಾಗೂ ಭಾಜಪಾ ಹಿತೈಷಿಗಳಿಂದ ದೀಪಪ್ರಜ್ವಲಣೆ ಮತ್ತು ಭಾರತಮಾತೆಗೆ ಪುಷ್ಪಾರ್ಚನೆ ಮೂಲಕ ಆರಂಭಗೊಂಡ ಕಾರ್ಯಕ್ರಮದಲ್ಲಿ ರಾಜೇಂದ್ರ ಅಜ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿಕಟಪೂರ್ವ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರು ಶ್ರೀನಿವಾಸ್ ರಾವ್ ಅವರ ಕಾರ್ಯತತ್ಪರತೆಯ ಬಗ್ಗೆ ಮಾತನಾಡಿದರು.ಗಣ್ಯರ ಪರ ಶ್ರೀಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ್ ತೋಳ್ಪಡಿತ್ತಾಯ ಮತ್ತು ಶ್ರೀ ಕ್ಷೇತ್ರದ ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್ ಅವರು ಪುಟಾಣಿ ಜೊತೆಗಿನ ಒಡನಾಟವನ್ನು ಸ್ಮರಿಸಿ ಶುಭಹಾರೈಸಿದರು.

ನಂತರ ಧರ್ಮಸ್ಥಳ ಶಕ್ತಿಕೇಂದ್ರದ ಪರವಾಗಿ, ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ, ಧರ್ಮಸ್ಥಳ ಮಹಾಶಕ್ತಿಕೇಂದ್ರದ ಪರವಾಗಿ, ಹತ್ಯಡ್ಕ ಶಕ್ತಿಕೇಂದ್ರದ ಪರವಾಗಿ, ಪುದುವೆಟ್ಟು ಶಕ್ತಿಕೇಂದ್ರದ ಪರವಾಗಿ ಹಾಗೂ ಎಲ್ಲಾ ಹಿತೈಷಿಗಳ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ್ ರಾವ್ ಅವರು ತಮ್ಮ ಸಂಘದ ಹಾಗೂ ರಾಜಕೀಯದ ಬದುಕಿನಲ್ಲಿ ಪ್ರೇರಣೆ ನೀಡಿದ ಎಲ್ಲಾ ಮಹನೀಯರನ್ನು ನೆನಪಿಸಿಕೊಂಡು ಅಧ್ಯಕ್ಷಗಿರಿಯನ್ನು ಅಧಿಕಾರ ಎಂದು ಭಾವಿಸದೆ ಜವಾಬ್ದಾರಿ ಎಂದು ತಿಳಿದು ಕರ್ತವ್ಯ ನಿರ್ವಹಿಸುತ್ತೇನೆ ಎಂದು ಎಲ್ಲರ ಸಹಕಾರವನ್ನು ಕೋರಿದರು.ಶ್ರೀನಿವಾಸ್ ರಾವ್ ಅವರಿಗೆ ಅಭಿನಂದನೆ ವಿಷಯ ಸ್ಟೇಟಸ್ ಮುಖಾಂತರ ತಿಳಿದ ಅವರ ವಿದ್ಯಾರ್ಥಿದೆಸೆಯ ಸ್ನೇಹಿತರು ಹಾಸನದಿಂದ ಆಗಮಿಸಿ ಶುಭಕೊರಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಶ್ರೀನಿವಾಸ್ ಕಲ್ಮಂಜ ಅವರ ವೈಯುಕ್ತಿಕಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಮಾಜಿ ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಜನಾರ್ಧನ್ ಸ್ವಾಗತದೊಂದಿಗೆ ತಾಲೂಕು ಸಾಮಾಜಿಕ ಜಾಲತಾಣ ಸಹಸಂಚಾಲಕ ಸಂದೀಪ್ ರೈ ಧರ್ಮಸ್ಥಳ ಧನ್ಯವಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ವಿಜಯ್ ಗೌಡ ಅತ್ತಾಜೆ ಹಾಗೂ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿದರು.

Exit mobile version