Site icon Suddi Belthangady

ವೇಣೂರು ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ- ಹೂ ಅಲಂಕಾರ ಮಾಡಿ ಸೈ ಎನಿಸಿಕೊಂಡ ಮರೋಡಿಯ ಫಕೀರಬ್ಬ ಮಾಸ್ಟರ್

ಬೆಳ್ತಂಗಡಿ: ವೇಣೂರಿನ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಎಲ್ಲ 8 ದಿನಗಳಲ್ಲೂ ಹೂವಿನ ಅಲಂಕಾರ ನಡೆಸಿದವರು ಮಂಗಳೂರಿನ ಮಾಸ್ಟರ್ ಫ್ಲವರ್ಸ್ ಮಾಲಕ ಫಕೀರಬ್ಬ ಮಾಸ್ಟರ್. ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದವರಾದ ಫಕೀರಬ್ಬ ಅವರು ಮಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಅವರ ತಂಡ ವೇಣೂರಿನ ಮಸ್ತಕಾಭಿಷೇಕದಲ್ಲಿ ಬಾಹುಬಲಿ ಸನ್ನಿಧಾನ ಸಹಿತ ಇತರ ಕಡೆಗಳಲ್ಲಿ ಆಕರ್ಷಕವಾಗಿ ಹೂವಿನ ಅಲಂಕಾರ ನೆರವೇರಿಸುವ ಮೂಲಕ ಜಿನಭಕ್ತರ ವಿಶೇಷ ಗಮನ ಸೆಳೆದಿದ್ದಾರೆ.

ಈ ಹಿಂದೆ ಶ್ರವಣಬೆಳಗೊಳ, ಕಾರ್ಕಳ, ಧರ್ಮಸ್ಥಳದಲ್ಲಿ ನಡೆದ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲೂ ಫಕೀರಬ್ಬ ಮಾಸ್ಟರ್ ಹೂವಿನ ಅಲಂಕಾರ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿದ್ದು, ಪ್ರಸಿದ್ಧಿ ಪಡೆದಿದ್ದಾರೆ.

ಈ‌ ಬಗ್ಗೆ ಪ್ರತಿಕ್ರಿಯಿಸಿರುವ ಫಕೀರಬ್ಬ ಮಾಸ್ಟರ್, ವೇಣೂರಿನ ಮಹಾಮಸ್ತಕಾಭಿಷೇಕದಲ್ಲಿ ಮುಸಲ್ಮಾನರೂ ಸೇರಿದಂತೆ ನಾಡಿನ ಸರ್ವಧರ್ಮೀಯರೂ ಸಂತಸದಿಂದ ಪಾಲ್ಗೊಂಡಿದ್ದಾರೆ‌‌.

ಎಲ್ಲ ವರ್ಗದ ಜನರಿಗೂ ವ್ಯಾಪಾರ ಮಳಿಗೆಗಳಿಗೆ ಅವಕಾಶ ನೀಡಲಾಗಿತ್ತು. ಆದ್ದರಿಂದ ಮಸ್ತಕಾಭಿಷೇಕ ಸಮಿತಿ ಎಲ್ಲ ರೀತಿಯಿಂದಲೂ ಅಭಿನಂದನೆಗೆ ಅರ್ಹವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.‌

Exit mobile version