Site icon Suddi Belthangady

ಮೈಸೂರು ಮಹಾರಾಜ ಯದುವೀರ್ ಒಡೆಯರನ್ನು ಡಾ.ಉಮಾನಾಥ ಶೆಣೈ ದಂಪತಿ ಭೇಟಿ

ಬೆಳ್ತಂಗಡಿ: ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತಚಾಮರಾಜ ಒಡೆಯರ್‌ರವರ ಇತ್ತೀಚಿಗೆ ಅಳದಂಗಡಿ ಅರಮನೆಗೆ ಸಂದರ್ಶನವಿತ್ತಾಗ ಪುತ್ತೂರಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ವೈ.ಉಮಾನಾಥ ಶೆಣೈಯವರು ಮತ್ತು ಅವರ ಪತ್ನಿ ವಿಶ್ರಾಂತ ಕೆ.ಎ.ಎಸ್.ಅಧಿಕಾರಿ ವಿಜಯ ಕುಮಾರಿ ಅವರನ್ನು ಭೇಟಿಯಾಗಿ ಅಭಿನಂದಿಸಿ ಶುಭಾಶಯಗಳನ್ನು ಪಡೆದರು.

ಅಳದಂಗಡಿ ಅರಮನೆಯಲ್ಲಿ ಆಹಾರ ಸ್ವೀಕರಿಸುವ ಮೊದಲು, ಅರಮನೆಯ ಪರಿವಾರದವರನ್ನು, ಜನಪ್ರಮುಖರನ್ನು ಭೇಟಿಯಾಗಿ ಶುಭಕೋರಿದ ಮಹಾರಾಜರಿಗೆ, ಅಳದಂಗಡಿ ಅರಮನೆಯ ವತಿಯಿಂದ, ತಿಮ್ಮಣ್ಣ ಅರಸರಾದ ಡಾ.ಪದ್ಮಪ್ರಸಾದ್ ಅಜಿಲರು ಗೌರವ ಹಾಗೂ ನಿಷ್ಠೆಯ ದ್ಯೋತಕವಾಗಿ ಕಾಣಿಕೆ, ಉಡುಗೊರೆಯನ್ನು ಸಲ್ಲಿಸಿ ಗೌರವಿಸಲಾಯಿತು.

ಕೆಲವರು ಹಾರಾರ್ಪಣೆ ಮಾಡಿ ಕಾಣಿಕೆಯನ್ನಿತ್ತರು.

ಈ ಸಂದರ್ಭದಲ್ಲಿ ಪುಷ್ಪಗುಚ್ಛ, ಮಾಲಾರ್ಪಣೆ ಮಾಡಿದ ಬಳಿಕ ಡಾ.ಶೆಣೈಯವರು, ಫಲಪುಷ್ಪ ಮತ್ತು ಡಾ.ಉಮಾನಾಥ ಶೆಣೈ ಬರೆದಿರುವ ಕರಾವಳಿ ಕರ್ನಾಟಕದ ಜಿನಮಂದಿರಗಳ ದರ್ಶನ ಮತ್ತು ವೇಣೂರಿನ ವೈಭವ ಎಂಬ ಎರಡು ಪುಸ್ತಕಗಳನ್ನು ಸಮರ್ಪಿಸಿದರು.

ಸ್ವಲ್ಪ ಓದಿ ಸಂತಸಗೊಂಡ ಮಹಾರಾಜರು ಸಾಹಿತ್ಯ ಕೃಷಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಭೇಟಿಯ ಸಂದರ್ಭಕ್ಕಾಗಿ ಗಣ್ಯರಿಗಾಗಿ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು.ಸರಳವಾದರೂ ನಿಷ್ಠೆಯ ಈ ಕಾರ್ಯಕ್ರಮವನ್ನು ನೋಡಿ ಮಹಾರಾಜರು ಸಂತೋಷಪಟ್ಟರು.

Exit mobile version