Site icon Suddi Belthangady

ಸಂತಶಿರೋಮಣಿ ಪೂಜ್ಯ ಆಚಾರ್ಯಶ್ರೀ 108 ವಿದ್ಯಾಸಾಗರ ಮುನಿಮಹಾರಾಜರ ನಿಧನಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

ಧರ್ಮಸ್ಥಳ: ಪೂಜ್ಯ ಮುನಿಮಹಾರಾಜರು ಫೆ.18ರಂದು ಛತ್ತೀಸ್‌ಗಡದಲ್ಲಿ ಚಂದ್ರಗಿರಿತೀರ್ಥದ ಡೊಂಗರಗಡದಲ್ಲಿ ನಿಧನ ಹೊಂದಿದರು.

ಆಚಾರ್ಯಶ್ರೀ ಯವರು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಸದಲಗದವರು.ಈ ಹಿಂದೆ ನಾನು ಪೂಜ್ಯಶ್ರೀಗಳನ್ನು ಎರಡು ಬಾರಿ ದರ್ಶನ ಮಾಡುವ ಸದವಕಾಶ ದೊರಕಿತ್ತು.ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಮೊದಲೇ ತಿಳಿದಿದ್ದ ಪೂಜ್ಯರು ಕ್ಷೇತ್ರದ ಬಗ್ಗೆ ತುಂಬಾ ಅಭಿಮಾನದಿಂದ ಮಾತನಾಡಿ ನನ್ನನ್ನು ಮನ:ಪೂರ್ವಕವಾಗಿ ಆಶೀರ್ವದಿಸಿದಾಗ ನಾನು ಧನ್ಯನಾದೆ.

ಆಚಾರ್ಯಶ್ರೀಗಳು ಮೂಕಮಾಟಿ ಎಂಬ ಗ್ರಂಥವನ್ನು ಮರಾಠಿಯಲ್ಲಿ ಬರೆದಿದ್ದರು.ಈ ಗ್ರಂಥವು ಬರೀ ಧಾರ್ಮಿಕ ಗ್ರಂಥವಾಗಿ ಉಳಿಯದೆ ಕುಂಭ ಮತ್ತು ಕುಂಬಾರನ ಉದಾಹರಣೆಯನ್ನು ನೀಡಿ ಬಹಳ ಕಾವ್ಯಾತ್ಮಕವಾಗಿ ಧರ್ಮದ ತತ್ವಗಳನ್ನು ವಿವರಿಸಲಾಗಿದೆ.ಇದು ಎಲ್ಲಾ ಭಾಷೆಗಳಿಗೆ ಭಾಷಾಂತರಗೊಂಡು ಜನಜಾಗೃತಿಗೊಂಡಿದೆ.

ಇತ್ತೀಚೆಗೆ ಕನ್ನಡದಲ್ಲೂ ಈ ಕೃತಿ ಭಾಷಾಂತರಗೊಂಡು ಬಿಡುಗಡೆಯಾಗಿ ಈ ಗ್ರಂಥವನ್ನು ಅವಲೋಕಿಸುವ ಭಾಗ್ಯ ಕನ್ನಡಿಗರಿಗೆ ದೊರಕಿತು.

ಪೂಜ್ಯ ಮುನಿಮಹಾರಾಜರು ನೂರಾರು ಮುನಿಗಳು ಹಾಗೂ ಆರ್ಯಿಕೆಯರನ್ನು ರೂಪಿಸಿ ಸಮಾಜಕ್ಕೆ ನೀಡಿರುತ್ತಾರೆ. ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಕೂಡಾ ಪೂಜ್ಯಶ್ರೀಗಳ ದರ್ಶನ ಮಾಡಿ ಆಶೀರ್ವಾದ ಪಡೆದಿರುತ್ತಾರೆ.

ನಮ್ಮ ಸಮಾಜದ ಪ್ರತಿಷ್ಠಿತ ಆಚಾರ್ಯಶ್ರೀಗಳನ್ನು ಕಳೆದುಕೊಂಡು ಇಡೀ ಜೈನ ಸಮಾಜವು ಬಡವಾಗಿದೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದರು.

Exit mobile version