Site icon Suddi Belthangady

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅನ್ನಪೂರ್ಣ ರಾನಡೆ ಕೊಲೆ: ಚಿತ್ಪಾವನ ಬ್ರಾಹ್ಮಣರ ಸಂಘದಿಂದ ಸೂಕ್ತ ಕ್ರಮಕ್ಕೆ ಮನವಿ

ಬೆಳ್ತಂಗಡಿ: ಶಿವಮೊಗ್ಗ-ಬೆಂಗಳೂರು ರೈಲಿನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರನ್ನು ಕೊಲೆ ಮಾಡಿ ದರೋಡೆ ನಡೆಸಿದ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಹಾಗೂ ಅವರ ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ತಹಸೀಲ್ದಾರ್ ಮೂಲಕ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಅರಣ್ಯ ಇಲಾಖೆಯ ಬೆಂಗಳೂರು ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಅನ್ನಪೂರ್ಣ ರಾನಡೆಯವರು ಶಿವಮೊಗ್ಗದಲ್ಲಿ ಇಲಾಖೆ ನಡೆಸಿದ ಸ್ಟೆನೋಗ್ರಾಫರ್ ಪರೀಕ್ಷೆ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸಿ ಬೆಂಗಳೂರಿಗೆ ಹಿಂದಿರುಗುವ ವೇಳೆ ಘಟನೆ ನಡೆದಿತ್ತು.ಘಟನೆ ನಡೆದು ಒಂದು ವಾರ ಕಳೆದರೂ ದುಷ್ಕರ್ಮಿಗಳನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿಲ್ಲ.ರೈಲು ಪ್ರಯಾಣ ಮಹಿಳೆಯರಿಗೆ ಎಷ್ಟು ಸುರಕ್ಷಿತ.ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಮಹಿಳಾ ಪ್ರಯಾಣಿಕರಿಗೆ ವಿಶೇಷ ಭದ್ರತೆ ಒದಗಿಸಬೇಕಾದ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್, ಕಾರ್ಯದರ್ಶಿ ನಾರಾಯಣ ಫಡಕೆ, ಪದಾಧಿಕಾರಿಗಳಾದ ವಿವೇಕ್ ಕೇಳ್ಕರ್, ಯಶವಂತ ಪಟವರ್ಧನ್, ಯೋಗೀಶ್ ಭಿಡೆ, ಗಣೇಶ ಶೆಂಡ್ಯೆ, ಲಾಯಿಲ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಸೂರ್ಯನಾರಾಯಣ ಪಾಳಂದೆ, ಮುಂಡಾಜೆ ಗ್ರಾ.ಪಂ.ಮಾಜಿ ಸದಸ್ಯೆ ಅಶ್ವಿನಿ ಹೆಬ್ಬಾರ್, ಲತಾ ಭಟ್ ಅರೆಕಲ್ಲು, ರಶ್ಮಿ ಪಟವರ್ಧನ್, ಡಾ.ದೀಪಾಲಿ ಡೋಂಗ್ರೆ, ತಾ.ಪಂ. ಮಾಜಿ ಸದಸ್ಯ ವಿಷ್ಣು ಮರಾಠೆ, ನ್ಯಾಯವಾದಿ ಶೈಲೇಶ್ ಠೋಸರ್, ಪತ್ರಕರ್ತ ಅರವಿಂದ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.

Exit mobile version