Site icon Suddi Belthangady

ಚಿಕಿತ್ಸೆ ನೆಪದಲ್ಲಿ ಅಪರಿಚಿತರಿಂದ ವಂಚನೆ

ಬೆಳ್ತಂಗಡಿ: ಮುಂಡಾಜೆ ಗ್ರಾಮದಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಯ ಮನೆಗೆ ಬಂದ ಇಬ್ಬರು ವ್ಯಕ್ತಿಗಳು ಮಲಗಿದ್ದಲ್ಲಿಯೇ ಇದ್ದ ವ್ಯಕ್ತಿಯನ್ನು ಗುಣ ಪಡಿಸುವುದಾಗಿ ಹೇಳಿ 30 ಸಾವಿರ ರೂ. ಪಡೆದುಕೊಂಡು ಪರಾರಿಯಾದ ಘಟನೆ ನಡೆದಿದೆ.

ಮುಂಡಾಜೆ ಗ್ರಾಮದ ನಿವಾಸಿ ದಯಾನಂದ ಎಂಬವರು ವಂಚನೆಗೆ ಒಳಗಾದ ವ್ಯಕ್ತಿ. ಇವರ ತಂದೆ ಕಟ್ಟಡದಿಂದ ಬಿದ್ದು ಸೊಂಟದ ಬಲ ಕಳೆದುಕೊಂಡು ಮಲಗಿದಲ್ಲಿಯೇ ಇದ್ದರು.

ಜ.27ರಂದು ಇವರ ಮನೆಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ತಾವು ಆಯುರ್ವೇದ ಪಂಡಿತರಾಗಿದ್ದು ಪಂಚಕರ್ಮ ಆಯುರ್ವೇದ ದ್ ಔಷಧದಿಂದ ಅವರನ್ನು ಗುಣ ಪಡಿಸುವುದಾಗಿ ಹೇಳಿದ್ದಾರೆ.ಇದಾದ ಬಳಿಕ ಚಿಕಿತ್ಸೆಗೆಂದು ಕೆಲವು ವಸ್ತುಗಳನ್ನು ತರಿಸಿಕೊಂಡಿದ್ದಾರೆ.ಬಳಿಕ ಇನ್ನಷ್ಟು ಔಷಧಗಳನ್ನು ತರಬೇಕು ಎಂದು 30 ಸಾವಿರ ರೂ ಪಡೆದುಕೊಂಡು ಮೊಬೈಲ್ ನಂಬರ್ ನೀಡಿ ತೆರಳಿದ್ದಾರೆ.

ಆದರೆ ಆ ನಂಬರ್ ಮೂಲಕ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.ಮೋಸ ಹೋಗಿರುವುದನ್ನು ಮನಗಂಡಿರುವ ದಯಾನಂದ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಇದೇ ತಂಡ ಮುಂಡಾಜೆಯ ಕೆಲವು ಮನೆಗಳಿಗೆ ಭೇಟಿ ನೀಡಿ ಕೆಲವರಿಗೆ ಔಷಧ ನೀಡಿ ಹಣ ಪಡೆದಿದ್ದರು ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.ಇವರು ತಾವು ಶಿವಮೊಗ್ಗದಿಂದ ಬಂದವರು ಎಂದು ಪರಿಚಯಿಸಿಕೊಂಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರ ತನಿಖೆಯಿಂದಷ್ಟೆ ಇವರ ಹಿನ್ನೆಲೆ ಬಗ್ಗೆ ಮಾಹಿತಿ ತಿಳಿದು ಬರಬೇಕಾಗಿದೆ.
Exit mobile version