Site icon Suddi Belthangady

ಹಾಡಹಗಲೇ ಮನೆಯಿಂದ ಕಳವು

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆ ಅಯ್ಯಪ್ಪ ಗುಡಿ ಸಮೀಪದ ರಾಮನಗರ ಎಂಬಲ್ಲಿ ಹಾಡುಹಗಲೇ ಮನೆಯೊಂದರ ಬೀಗದ ಚಿಲಕವನ್ನು ಮುರಿದು ಒಳಗನುಗ್ಗಿದ್ದ ಕಳ್ಳರು ನಗದು, ಚಿನ್ನದ ಸರ ಸೇರಿದಂತೆ ಸುಮಾರು 70 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಜ.31ರಂದು ಮಧ್ಯಾಹ್ನ ಸಂಭವಿಸಿದೆ.

ರಾಮನಗರ ಶ್ರೀ ದುರ್ಗಾ ನಿವಾಸಿ ರಾಘವೇಂದ್ರ ಆಚಾರ್ಯ ಅವರ ಮನೆಯಿಂದ ಈ ಕಳ್ಳತನ ನಡೆದಿದೆ.ರಾಘವೇಂದ್ರ ಆಚಾರ್ಯ ಅವರು ಬೆಳ್ತಂಗಡಿಯಲ್ಲಿ ಚಿನ್ನಾಭರಣ ತಯಾರಿ ಕೆಲಸವನ್ನು ಮಾಡುತ್ತಿದ್ದು ಬೆಳಗ್ಗೆ ಅಲ್ಲಿಗೆ ಹೋಗಿದ್ದರು.ಪತ್ನಿ ಖಾಸಗಿಯಾಗಿ ಕೆಲಸಕ್ಕೆ ಹೋಗಿದ್ದು, ಮಕ್ಕಳು ಶಾಲೆಗೆ ಹೋಗಿರುವುದರಿಂದ ಮನೆಯಲ್ಲಿ ಯಾರೂ ಇರಲಿಲ್ಲ.ಇದೇ ಸಂದರ್ಭವನ್ನು ನೋಡಿಕೊಂಡ ಕಳ್ಳರು ಮನೆಯ ಎದುರು ಬಾಗಿಲಿನ ಚಿಲಕವನ್ನು ಮುರಿದು ಒಳ ನುಗ್ಗಿ ಮೂರು ಬೀರುವನ್ನು ಓಪನ್ ಮಾಡಿ ಬಟ್ಟೆ-ಬರೆಗಳನ್ನು ಹೊರಗೆ ಎಳೆದು ಹಾಕಿ ಚೆಲ್ಲಾಪಿಲ್ಲಿಗೊಳಿಸಿ, ಚಿನ್ನಾಭರಣ ಹಾಗೂ ನಗದಿಗಾಗಿ ಹುಡುಕಾಡಿರುವುದು ಕಂಡುಬಂದಿದೆ. ಬೀರುವಿನಲ್ಲಿದ್ದ 15 ಸಾವಿರ ರೂ. ನಗದು ಹಾಗೂ ಸುಮಾರು 50 ಸಾವಿರ ರೂ. ಮೌಲ್ಯದ ಒಂದು ಪವನ್‌ನ ಚಿನ್ನದ ಸರ ಹಾಗೂ ಬೆಳ್ಳಿಯ ಕೌಲಿಗೆಯನ್ನು ಕೊಂಡು ಹೋಗಿದ್ದಾರೆ ಎಂದು ಮನೆಯ ಮಾಲಕ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ.ನಗ-ನಗದು ಸೇರಿ ಸುಮಾರು 70 ಸಾವಿರ ಮೌಲ್ಯದ ಸೊತ್ತುಗಳು ಸೇರಿದೆ ಎಂದು ಅಂದಾಜಿಸಲಾಗಿದೆ.

ಮನೆಯ ಚಿಲಕವನ್ನು ಮುರಿದು ಒಳನುಗ್ಗಿ ಕಳ್ಳತನ ನಡೆಸಿ ಮರಳಿ ಹೋಗುವಾಗ ಎದುರಿನ ಬಾಗಿಲನ್ನು ಲಾಕ್ ಹಾಕಿಕೊಂಡು ಹೋಗಿದ್ದರು.ಮನೆಯ ದೇವರ ಕೋಣೆಯಲ್ಲಿದ್ದ ಬೆಳ್ಳಿಯ ದೀಪ ಫ್ರಿಜ್‌ನ ಮೇಲಿದ್ದು, ಕಳ್ಳರು ಅವಸರದಲ್ಲಿ ಇದನ್ನು ಬಿಟ್ಟು ಹೋಗಿರಬಹುದೆಂದು ಅಂದಾಜಿಸಲಾಗಿದೆ.

ಅಪರಿಚಿತ ಸುತ್ತಾಡಿದ್ದ: ಮಧ್ಯಾಹ್ನ ರಾಘವೇಂದ್ರ ಆಚಾರ್ಯ ಅವರು ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಸ್ಥಳೀಯ ಪರಿಸರದಲ್ಲಿ ಬೆಳಗ್ಗೆ ಅಪರಿಚಿತ ವ್ಯಕ್ತಿಯೋರ್ವ ಈ ಓಡಾಟ ನಡೆಸಿದ್ದನ್ನು ಸ್ಥಳೀಯರು ವಿಚಾರಿಸಿದಾಗ ಆತ ತಾನು ಜೋತಿಷ ಹೇಳುವವ ಎಂದು ಹೇಳಿದ್ದನೆನ್ನಲಾಗಿದೆ. ಈತನೇ ಈ ಕಳ್ಳತನ ನಡೆಸಿದನೇ ಅಥವಾ ಬೇರೆಯಾದರೂ ಈ ಕೃತ್ಯ ಎಸಗಿದರೇ, ಎಂಬ ಅನುಮಾನ. ವ್ಯಕ್ತವಾಗಿದೆ. ರಾಘವೇಂದ್ರ ಆಚಾರ್ಯರು ಠಾಣೆಗೆ ಬಂದು ಮಾಹಿತಿ ನೀಡಿದ ಅನಂತರ ಸಂಜೆ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Exit mobile version