Site icon Suddi Belthangady

ಉಜಿರೆ ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ಕ್ಯಾಂಪ್‌ಗೆ ಚಾಲನೆ

ಗುರಿಪಳ್ಳ: ಉಜಿರೆಯ ಶ್ರೀ.ಧ.ಮಂ.ಕಾಲೇಜು (ಸ್ವಾಯತ್ತ) ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ಗುರಿಪಳ್ಳದ ದ.ಕ.ಜಿ.ಪಂ.ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಾಕ್ಕಾಗಿ ಯುವಜನತೆ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಸುಧೀರ್ಘ ಏಳುದಿನಗಳ ಕಾಲ ಜರುಗುತ್ತಿರುವ ವಾರ್ಷಿಕ ವಿಶೇಷ ಶಿಬಿರವು ಜ.27ರಂದು ಉದ್ಘಾಟನೆಗೊಂಡಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಜಿರೆಯ ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ.ಎಸ್. ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದರು. ಪ್ರಾಯೋಗಿಕ ಶಿಕ್ಷಣದ ತರಬೇತಿ ನೀಡುವ ಸಲುವಾಗಿ ಎನ್ ಎಸ್ ಎಸ್ ಶಿಬಿರವನ್ನು ನಡೆಸಲಾಗುತ್ತದೆ. ಶಾಲಾ ಕಾಲೇಜು ಮಕ್ಕಳಿಗೆ ಗ್ರಾಮಗಳಲ್ಲಿ  ಅಗತ್ಯವಾದ ಸಂವಹನ ಬೆಳೆಯಲು ಹಾಗೂ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ದಿಸೆಯಲ್ಲೂ ಶಿಬಿರಗಳು ಸಹಾಯವಾಗುತ್ತವೆ ಎಂದರು.

ಏನ್.ಎಸ್.ಎಸ್. ನಲ್ಲಿ ನಡೆಯುವ ಎಲ್ಲಾ ಕಾರ್ಯಾ ಚಟುವಟಿಕೆಗಳಿಗೂ ಈ ವಾರ್ಷಿಕ ವಿಶೇಷ ಶಿಬಿರವು ಕಿರೀಟ ಪ್ರಾಯವಾಗಿದೆ, ಎಂದು ಶುಭ ಹಾರೈಸಿದರು. 

ಉಜಿರೆಯ ಶ್ರೀ ಧ.ಮಂ.ಕಾಲೇಜು ಸ್ವಾಯತ್ತ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಗಡೆ ಅವರು ಅಧ್ಯಕ್ಷಿಯ ನುಡಿಯಲ್ಲಿ, “ಎನ್.ಎಸ್.ಎಸ್.ವಿದ್ಯಾರ್ಥಿಗಳಲ್ಲಿ ಮತ್ತು ಶಾಲಾ ಮಕ್ಕಳಲ್ಲಿ ಮಾನಸಿಕ, ಭೌತಿಕ  ವಿಕಸನಕ್ಕೆ ಹಾಗು ಆತ್ಮ ವಿಶ್ವಾಸ ಜಾಗೃತಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ” ಎಂದು ಹೇಳಿದರು.

ಉಜಿರೆಯ ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಎಸ್.ಎನ್.ಕಾಕತ್ಕರ್ ಅವರು ಮಾತನಾಡಿ,”ಊರಿನವರ ಪಾಲ್ಗೊಳ್ಳುವಿಕೆ ಇರುವಲ್ಲಿ ಶಿಬಿರವು ಸಫಲವಾಗುತ್ತದೆ.ಇಂದಿನ ಆಧುನಿಕ ಕಾಲದಲ್ಲಿ ಜೀವಿಸುತ್ತಿರುವ ಮಕ್ಕಳಿಗೆ ಗ್ರಾಮಗಳಿಗೆ ಬಂದು ಕಲಿಯಲು ಒಂದು ಅಪರೂಪದ ಅವಕಾಶವಿದಾಗಿದೆ. ಎನ್.ಎಸ್.ಎಸ್. ಶಿಬಿರವು ಒಂದು ವಿಜ್ಞಾನ ಸಿಂಚನವಾಗಿ ಭೌತಿಕ ಪ್ರಜ್ಞೆಯನ್ನು ಹೆಚ್ಚಿಸಲಿದೆ,”ಎಂದು ಹೇಳಿದರು.

ಗ್ರಾಮದ ಪ್ರಗತಿಪರ ಕೃಷಿಕ ರಮಾನಂದ ಶರ್ಮ, ಉದ್ಯಮಿ ಜಯಂತ್ ಗೌಡ, ಶಾಲಾ ಮುಖ್ಯೋಪಾಧ್ಯಯ  ಮಂಜುಳಾ, ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ,  ಶಾಲಾ ಅಭಿವೃದ್ಧಿ ಮತ್ತು ಮೆಲುಸ್ತುವಾರಿ ಸಮಿತಿಯ ಅಧ್ಯಕ್ಷೆ ಸವಿತಾ, ಶ್ರೀ ಧ.ಮಂ. (ಸ್ವಾಯತ್ತ ) ಕಾಲೇಜು ಉಜಿರೆಯ ಮೌಲ್ಯಮಾಪನ ವಿಭಾಗದ ಕುಲ ಸಚಿವೆ ಪ್ರೊ. ನಂದ ಕುಮಾರಿ ಕೆ.ಪಿ., ಶಿಭಿರಾಧಿಕಾರಿಗಳಾದ ಮಹೇಶ್ ಅರ್., ಶಿವಕುಮಾರ್ ಪಿ. ಪಿ. ಹಾಗು ಗ್ರಾಮಸ್ಥರು  ಉಪಸ್ಥಿತರಿದ್ದರು.

ಸಂಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ, ಹೆಚ್.  ಪ್ರಾಸ್ತಾವಿಕ ನುಡಿಗಳನ್ನಾಡಿ  ಸ್ವಾಗತಿಸಿದರು ಹಾಗು ಪ್ರೊ. ದೀಪ ಅರ್. ಪಿ.  ಸರ್ವರನ್ನು ವಂದಿಸಿದರು. ಸ್ವಯಂ ಸೇವಕಿ ಸಿಂಚನ ನಿರೂಪಿಸಿದರು.

ಧ್ವಜಾರೋಹಣ ಉದ್ಘಾಟನೆ: ಶಿಬಿರದ ಮೊದಲದಿನ ಜ.27ರ ಮುಂಜಾನೆಯು ಪ್ರಾರ್ಥನೆ ಹಾಗೂ ಯೋಗದೊಂದಿಗೆ ಶುರುವಾಗಿ ಧ್ವಜಾರೋಹಣ ಕಾರ್ಯವನ್ನು ಉದ್ಘಾಟಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಬಿರದ ಕಾವಲು ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರವ ಸುಂದರ ಗೌಡರವರು ಧ್ವಜಾರೋಹಣವನ್ನು ನೆರವೇರಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ತದನಂತರ G20 ಮಹತ್ವವನ್ನು ಸ್ವಯಂ ಸೇವಕರು ಸ್ವತಃ ಬಿಡಿಸಿದ ರಂಗೋಲಿಯ ಮೂಲಕ ತಿಳಿಸಿಕೊಟ್ಟು ‘ವಸುದೈವ ಕುಟುಂಬಕಂ’ ಎಂಬ ಘೋಷವಾಕ್ಯವನ್ನು ಉಚ್ಚರಿಸಲಾಯಿತು.

Exit mobile version