Site icon Suddi Belthangady

ಜ.14-23: ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ಉಜಿರೆ: ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮಕರ ಸಂಕ್ರಮಣ ಜ.14ರಿಂದ ಮೊದಲ್ಗೊಂಡು ಜ.23ರವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ತಿಳಿಸಿದ್ದಾರೆ.

ಜ.14 ಮಕರ ಸಂಕ್ರಮಣ ಶುಭ ದಿನದಂದು ರಾತ್ರಿ ಧ್ವಜಾರೋಹಣ-ಭಂಡಾರ ಏರುವುದು, ಜ.15ರಂದು ರಾತ್ರಿ ಬದಿ ಮೇಲೆ ಉಳ್ಳಾಲ್ತಿ, ಪೊಸಳ್ತಾಯಿ ಮತ್ತು ಕುಮಾರಸ್ವಾಮಿ ದೈವಗಳಿಗೆ ನೇಮ, ಜ.16ರಂದು ಸಂಜೆ ಬದಿ ಮೇಲೆ ನೆತ್ತರ ಮುಗುಳಿ ದೈವದ ನೇಮ, ರಾತ್ರಿ ಭಂಡಾರ ಇಳಿದು ದೇವಸ್ಥಾನದಲ್ಲಿ ಶ್ರೀ ಕೃಷ್ಣ ಮಂಟಪ ಉತ್ಸವ, ಜ.17ರಂದು ರಾತ್ರಿ ಅಶ್ವತ್ಥ ಕಟ್ಟೆ ಉತ್ಸವ, ಜ.18ರಂದು ಪುಷ್ಕರಣಿ ಕಟ್ಟೆ ಉತ್ಸವ, ಜ.19ರಂದು ಪೇಟೆ ಸವಾರಿ ಉತ್ಸವ, ಜ.20ರಂದು ರಾತ್ರಿ ರಥಬೀದಿಯಲ್ಲಿ ಚಂದ್ರ ಮಂಡಲ ರಥೋತ್ಸವ, ಜ.21ರಂದು ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ ಉತ್ಸವ, ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಶ್ರೀ ಜನಾರ್ದನ ಸ್ವಾಮಿ ಮತ್ತು ಮಂಜುಳೇಶ ದೇವರ ವಿವಿಧ ವಾದ್ಯ ವಾದನಗಳ ಸುತ್ತು ಬಲಿ ಉತ್ಸವ, ಪಲ್ಲಕಿ ಉತ್ಸವ, ರಜತ ರಥ ಉತ್ಸವ, ರಥಬೀದಿಯಲ್ಲಿ ಮಹಾರಥೋತ್ಸವ, ಶ್ರೀ ಭೂತ ಬಲಿ, ಶಯನೋತ್ಸವ, ಜ.22ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಸಂಜೆ ಶ್ರೀ ದೇವರ ಅವಭ್ರತೋತ್ಸವ ಹಾಗು ರಾತ್ರಿ ಧ್ವಜಾವರೋಹಣ ಮತ್ತು ಜ.23ರಂದು ಕಲಶಾಭಿಷೇಕ ಮತ್ತು ಸಂಪ್ರೋಕ್ಷಣೆಯೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ.

ಈ ಸಂದರ್ಭದಲ್ಲಿ ಜ.17ರಿಂದ ಜ.22ರವರೆಗೆ ಶ್ರೀ ಶಾರದಾ ಮಂಟಪದಲ್ಲಿ ವಿವಿಧ ಕಲಾವಿದರಿಂದ ಸಂಗೀತ, ನೃತ್ಯ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿಸಲ್ಪಡಲಿವೆ.ಭಗವದ್ಭಕ್ತರು ಉತ್ಸವದಲ್ಲಿ ಭಾಗವಹಿಸಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಕೃತಾರ್ಥರಾಗುವಂತೆ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version