Site icon Suddi Belthangady

ಜ.6: ಕುಂಭಶ್ರೀ ವಿದ್ಯಾಸಂಸ್ಥೆ ವತಿಯಿಂದ ಮಾತಾ-ಪಿತಾ ಗುರು ದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ

ಬೆಳ್ತಂಗಡಿ: ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆ ಆವರಣದಲ್ಲಿ ಜನವರಿ 6 ರಂದು ಸಂಸ್ಥೆಯಲ್ಲಿರುವ ಮಾತಾ-ಪಿತಾ ಗುರು ದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಗಿರೀಶ್.ಕೆ.ಎಚ್ ಹಾಗೂ ಆಡಳಿತಾಧಿಕಾರಿ ಅಶ್ವಿತ್ ಕುಲಾಲ್ ಹೇಳಿದರು.

ಅವರು ಜ.2ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಗುರುಕುಲ ಪದ್ದತಿಯ ಶಿಕ್ಷಣ ನೀಡುತ್ತಾ ರಾಜ್ಯದ ವಿವಿಧ ಊರಿನ ಮಕ್ಕಳ ಶಿಕ್ಷಣ ದಾಹವನ್ನು ನೀಗಿಸುತ್ತಾ ಬಂದಿರುವ ವೇಣೂರು ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆಗೆ ಇದೀಗ 26ರ ಸಂವತ್ಸರ.ಶಿಕ್ಷಣ ಕ್ಷೇತ್ರದಲ್ಲಿ ಎದುರಾದ ಸಾವಿರಾರು ಅಡೆತಡೆಗಳನ್ನು ಎದುರಿಸಿ ಆತ್ಮವಿಶ್ವಾಸದಿಂದ ಮುನ್ನಡೆದು ಪ್ರಗತಿಪಥದಲ್ಲಿ ಮುಂದುವರಿಯುತ್ತಿರುವ ಕುಂಭಶ್ರೀ ವಿದ್ಯಾಸಂಸ್ಥೆಯ ಪರಿಶ್ರಮದ ಫಲವಾಗಿ ಹಲವಾರು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಭಿನ್ನವಾದ ಪ್ರಶಸ್ತಿಯ ಗರಿಗಳು ಸಂದಿವೆ.ಜತೆಗೆ ಮಕ್ಕಳ ಕ್ರೀಡೆ, ಬೌದ್ಧಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.ವೇಣೂರು ಪರಿಸರದಲ್ಲಿ ಚಿಕ್ಕದಾಗಿ ಆರಂಭಗೊಂಡ ಕುಂಭಶ್ರೀ ವಿದ್ಯಾಸಂಸ್ಥೆ ಇಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ನೀಡುತ್ತಿದೆ.

ಶಾಲೆಯ ಸಾಧನೆಯನ್ನು ಗುರುತಿಸಿ ಹಲವು ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿದೆ. ಜ್ಞಾನ ಗಂಗೋತ್ರಿ ರಾಜ್ಯಪ್ರಶಸ್ತಿ-2008, ರಾಷ್ಟ್ರಮಟ್ಟದ ಸ್ಟಾರ್ ಆಫ್ ಏಷ್ಯಾ ಪ್ರಶಸ್ತಿ, ರಾಷ್ಟ್ರೀಯ ವಿದ್ಯಾಗೌರವ ಪ್ರಶಸ್ತಿ-2019, ಪ್ರಬುದ್ಧಭಾರತ ಪ್ರಶಸ್ತಿ-2021, ವಿದ್ಯಾರತ್ನ ಪ್ರಶಸ್ತಿ-2022, ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮತ್ತಿತರ ಪ್ರಶಸ್ತಿಗಳು ಲಭಿಸಿವೆ.

ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹಲವಾರು ಬಡ, ನಿರ್ಗತಿಕ ವಿದ್ಯಾರ್ಥಿಗಳಿಗೆ ರಿಯಾಯಿತಿ ಹಾಗೂ ಉಚಿತ ಶಿಕ್ಷಣ ನೀಡುತ್ತಾ ಬಂದಿರುತ್ತದೆ.ಮುಂಬರುವ ಸಾಲಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪರೀಕ್ಷೆಯ ಮೂಲಕ ಉಚಿತ ಶಿಕ್ಷಣ ನೀಡಲಿದೆ ಅದಕ್ಕಾಗಿ ಜ.26ರಂದು ಪ್ರವೇಶಾತಿ ಪರೀಕ್ಷೆಯನ್ನು ಹಮ್ಮಿಕೊಂಡಿದ್ದು, ಆ ಮೂಲಕ ಬಡ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ.

ಮಾತಾ-ಪಿತಾ ಗುರು ದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅವರು ಒದಗಿಸಿದ ಅನುದಾನದಲ್ಲಿ ಇಂಟರ್‌ಲಾಕ್ ಕಾಮಗಾರಿ ಹಾಗೂ ಶಾಲೆಯ ಹಿತೈಷಿ ದಾನಿ ದಿನೇಶ ದಾಮೋದರ ಗೋಖಲೆ ಚಿಕ್ಕಮಗಳೂರು ಅವರು ಕೊಡುಗೆಯಾಗಿ ನೀಡಿದ ಶಾಲಾ ಕೊಠಡಿಯ ಉದ್ಘಾಟನೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಓಮನಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಅಕ್ಷತಾ, ಹಳೆ ವಿದ್ಯಾರ್ಥಿ ಪೂಜಿತ್ ಕುಲಾಲ್ ಉಪಸ್ಥಿತರಿದ್ದರು.

Exit mobile version