Site icon Suddi Belthangady

ಕುಂದಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ: ಪಡಂಗಡಿ ನಿವಾಸಿ ಪ್ರದ್ಯೋತ್‌ ಮೃತ್ಯು

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಮೇಲೆರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಡಿ.29 ರಂದು ಮಧ್ಯರಾತ್ರಿ ಕಂಬದಕೋಣೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಸಮೀಪದ ನಡಿಬೆಟ್ಟು ಎಂಬಲ್ಲಿಯ ಪ್ರದ್ಯೋತ್ ಮೃತ ಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.ಕಾರವಾರದಿಂದ ಕುಂದಾಪುರ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಂಬದಕೋಣೆ ಜಂಕ್ಷನ್ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಡಿವೈಡರ್ ಮೇಲೆ ಏರಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಅಪಘಾತದ ವೇಳೆ ನುಜ್ಜುಗುಜ್ಜಾದ ಕಾರಿನೊಳಗೆ ಸಿಲುಕಿದ್ದ ಕಾರಿನ ಚಾಲಕನನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆದು ಬೈಂದೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದರು.ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮೃತ ವ್ಯಕ್ತಿ ಬೆಳ್ತಂಗಡಿ ತಾಲೂಕಿನ ಪಡಂಗಡಿಯ ನಡಿಬೆಟ್ಟು ಗುತ್ತು ನೇಮಿರಾಜ ಶೆಟ್ಟಿಯವರ ಮೊಮ್ಮಗ ಹಾಗೂ ದಿ.ಪ್ರಶಾಂತ್‌ ನಡಿಬೆಟ್ಟು ಅವರ ಪುತ್ರನಾಗಿದ್ದು ಇವರ ತಂದೆ ಕಳೆದ ಕೆಲವು ವರ್ಷಗಳ ಹಿಂದೆ ಕಂಬಳದಿಂದ ಹಿಂದಿರುಗುತ್ತಿರುವ ವೇಳೆ ಬೈಕ್ ಅಪಘಾತದಲ್ಲಿ ಮೃತ ಪಟ್ಟಿದ್ದರು.

ಘಟನೆ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಬೈಂದೂರು ಪಿ.ಎಸ್.ಐ ತಿಮ್ಮೇಶ್ ಬಿ.ಎನ್‌.ಮತ್ತು ಸಿಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Exit mobile version