Site icon Suddi Belthangady

ಪೆರೋಡಿತ್ತಾಯಕಟ್ಟೆ ಸ.ಉ.ಪ್ರಾ.ಶಾಲೆಯಲ್ಲಿ ಶಾಲಾ ಕಾಮಗಾರಿಗಳ ಹಸ್ತಾಂತರ, ನಿವೃತ್ತ ಶಿಕ್ಷಕರ ಸನ್ಮಾನ, ಶಾಲಾ ಪ್ರತಿಭಾ ಪುರಸ್ಕಾರ-ಊರಿನ ವಿದ್ಯಾ ಅಭಿಮಾನಿಗಳು ಒಗ್ಗಟ್ಟನ್ನು ಪ್ರದರ್ಶಿಸಿದಾಗ ಊರ ವಿದ್ಯಾಮಂದಿರದ ಅಭಿವೃದ್ಧಿ ಸಾಧ್ಯ: ವಸಂತ ಸಾಲಿಯಾನ್ ಕಾಪಿನಡ್ಕ

ಪಡಂಗಡಿ: ಊರಿನ ವಿದ್ಯಾ ಅಭಿಮಾನಿಗಳು ಜಾತಿ ಮತ ಭೇದವಿಲ್ಲದೆ ಊರಿನ ವಿದ್ಯಾಮಂದಿರದೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಒಗ್ಗಟ್ಟಿನಲ್ಲಿ ಕೆಲಸ ನಿರ್ವಹಿಸಿದಾಗ ವಿದ್ಯಾಮಂದಿರದ ಅಭಿವೃದ್ಧಿಯಾಗುತ್ತದೆ ಎಂದು ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯನ್ ಕಾಪಿನಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಪೆರೋಡಿತ್ತಾಯಕಟ್ಟೆ ಇಲ್ಲಿಯ ಶಾಲಾ ಕಾಮಗಾರಿಗಳ ಹಸ್ತಾಂತರ, ನಿವೃತ್ತ ಶಿಕ್ಷಕರ ಸನ್ಮಾನ ಮತ್ತು ಶಾಲಾ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ವಾರ್ಷಿಕೋತ್ಸವದಲ್ಲಿ ಉಳಿಕೆಯಾದ ಹಣದಿಂದ ಶಾಲಾ ಆವರಣ ಗೋಡೆ, ಪುನರ್ ನಿರ್ಮಾಣ ಮತ್ತು ಸೌಂದರೀಕರಣ, ಶಾಲಾ ಅಂಗಳಕ್ಕೆ ಇಂಟರ್ಲಾಕ್ ಅಳವಡಿಕೆ, ಶಾಲಾ ಸ್ಮಾರ್ಟ್ ಕ್ಲಾಸ್ ಮತ್ತು ಗಿಂಡಾಡಿಗುತ್ತು ದಿ.ರಾಮಚಂದ್ರ ಹೆಗಡೆ ಇವರ ಸ್ಮರಣಾರ್ಥ ಇವರ ಮಕ್ಕಳು ಕೊಡ ಮಾಡಿದ ನವೀಕೃತ ಧ್ವಜಸ್ತಂಭ ಕಾಮಗಾರಿಗಳ ಹಸ್ತಾಂತರವು ಡಿ.23 ರಂದು ನಡೆಯಿತು.

ಕಳೆದ ನವಂಬರ್ ನಲ್ಲಿ ಶಾಲಾ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಪದ್ಮಾವತಿ ಎನ್ ಇವರನ್ನು ಊರ ಪರವಾಗಿ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಉತ್ತಮ ಸಾಧನೆಗೈದ ಶಾಲೆಯ ವಿದ್ಯಾರ್ಥಿನಿ ಕುಮಾರಿ ದೀಕ್ಷಾಳನ್ನು ಸನ್ಮಾನಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಆಲಿಮಾರ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಪ್ರಸನ್ನ, ಪದ್ಮಾವತಿ, ನಿಜಾಮುದ್ದೀನ್, ಹೇಮಂತ್, ಸಿ.ಆರ್.ಪಿ ಕಿರಣ್ ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಂತೋಷ್ ಹೆಗ್ಡೆ ಪ್ರಸ್ತಾವನೆಗೈದರು.ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಠ ಸ್ವಾಗತಿಸಿ ವರದಿ ಮಂಡಿಸಿದರು.ಜ್ಯೋತಿಯು ಸನ್ಮಾನ ಪತ್ರ ಓದಿದರು.ಶಾಂತಿ ವಾಸ್ ನಿವೃತ್ತ ಮುಖ್ಯ ಶಿಕ್ಷಕಿ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಕಿಯರು ಬಹುಮಾನ ಪಟ್ಟಿಗಳನ್ನು ಓದಿದರು.ಶಿಕ್ಷಕಿ ಕುಮಾರಿ ದೇವಿಕಾ ವಂದಿಸಿದರು.ಕಾಶಿಪಟ್ಣ ಪ್ರೌಢಶಾಲೆಯ ಶಿಕ್ಷಕ ದೇವುದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ನಂತರ ವಿದ್ಯಾರ್ಥಿಗಳ ಆಕರ್ಷಕ ಪ್ರತಿಭಾ ಸಿಂಚನ ಕಾರ್ಯಕ್ರಮ ಜರಗಿತು.

Exit mobile version