Site icon Suddi Belthangady

ಉಜಿರೆ: ಅನುಗ್ರಹ ಶಾಲಾ ವಿಸ್ತೃತ ನೂತನ ಮಹಡಿಯ ಉದ್ಘಾಟನೆ

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯ ನೂತನ ಮಹಡಿಯ ಉದ್ಘಾಟನೆಯನ್ನು ಶಾಲಾ ಸಂಚಾಲಕರಾದ ವಂ! ಫಾ! ಜೇಮ್ಸ್ ಡಿ’ಸೋಜಾರವರು ಅತಿಥಿಗಳ ಜೊತೆಗೂಡಿ ರಿಬ್ಬನ್ ಕತ್ತರಿಸುವುದರ ಮೂಲಕ ನೇರವೇರಿಸಿದರು. ವಂ! ಫಾ! ವಿಜಯ್ ಲೋಬೋ ರವರು ಪ್ರಾರ್ಥನಾ ವಿಧಿಯನ್ನು ನೇರವೇರಿಸಿದರು.ಹಾಗೂ ವಂ! ಫಾ! ಜೇಮ್ಸ್ ಡಿಸೋಜಾ ರವರು ನೂತನ ಮಹಡಿಯನ್ನು ಪವಿತ್ರ ತೀರ್ಥ ಪ್ರೋಕ್ಷಣೆಯ ಮೂಲಕ ಶುದ್ದೀಕರಿಸಿದರು.

ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೋ ರವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಪ್ರಸ್ತುತ ನೂತನ 3ನೇ ಮಹಡಿಯಲ್ಲಿ ಮಿನಿಹಾಲ್‌ನ ಜೊತೆಗೆ ಗ್ರಂಥಾಲಯ, ಪ್ರಯೋಗಾಲಯ, ವಿಶೇಷ ತರಗತಿ, ಶಿಕ್ಷಕರ ಸಮಾಲೋಚನೆ, ಪಠ್ಯೇತರ ಚಟುವಟಿಕಾ ತರಗತಿ, ಒಳಾಂಗಣ ಕ್ರೀಡೆಗಳಿಗೆ ಅನುಕೂಲವಾಗುವಂತೆ 6 ಸುಸಜ್ಜಿತ ಕೊಠಡಿಗಳಿದ್ದು ಮಕ್ಕಳ ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಉಪಯೋಗವಾಗಿ ಮಕ್ಕಳು ಶೈಕ್ಷಣಿಕವಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಕಟ್ಟಡ ಕಾಮಗಾರಿಯಲ್ಲಿ ಸಹಕರಿಸಿದ ಇಂಜನಿಯರ್ ಸತ್ಯನಾರಾಯಣ, ಗುತ್ತಿಗೆದಾರರಾದ ಅನಿಲ್ ಡಿ’ಸೋಜಾ, ವಿದ್ಯುತ್ ಹಾಗೂ ಮೇಲ್ಚಾವಣಿ ಕೆಲಸ ಮಾಡಿದ ಜೋಯಲ್ ಹಾಗೂ ಸೆಬಾಸ್ಟಿಯನ್ ಹಾಗೂ ಆಸ್ಟಿನ್ ವೇಗಸ್ ರವರನ್ನು ಶಾಲು ನೀಡಿ ಗೌರವಿಸಲಾಯಿತು.ಸಂಚಾಲಕರು ಈ ನೂತನ ಕಾಮಗಾರಿಯ ಕೆಲಸದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತಾ ಅನುಗ್ರಹ ಶಿಕ್ಷಣ ಸಂಸ್ಥೆಯ ಮುಂದಿನ ಅಭಿವೃದ್ದಿಯ ಕೆಲಸಗಳಿಗೆ ಸರ್ವರೂ ಸಹಕರಿಸಬೇಕೆಂದು ಹೇಳುತ್ತಾ ಎಲ್ಲರಿಗೂ ಶುಭ ಹಾರೈಸಿದರು.ತದನಂತರ ಸಾಂಕೇತಿಕವಾಗಿ ಕ್ರಿಸ್ಮಸ್ ಕೇಕ್ ಕತ್ತರಿಸಲಾಯಿತು.

ಶಾಲೆಯಲ್ಲಿ ಪ್ರಶಿಕ್ಷಣಾರ್ಥಿಗಳಾಗಿ ಕಾರ್ಯನಿರ್ವಹಿಸಿದ ಬಿ.ಎಡ್ ವಿದ್ಯಾರ್ಥಿಗಳಾದ ಇಸಾಕ್, ಆಯಿಷತ್ ತಸ್ರೀನಾ ಹಾಗೂ ಐಶ್ವರ್ಯ ರವರನ್ನೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿವಾಸ್, ಸದಸ್ಯರುಗಳಾದ ಅನಿತಾ ಮೋನಿಸ್, ಸ್ಟ್ಯಾನಿ ಪಿಂಟೊ ಹಾಗೂ ಶಿಕ್ಷಕ ರಕ್ಷಕ ಸಂಘದ ಉಪಾದ್ಯಕ್ಷರಾದ ಡಾ.ಪ್ರಶಾಂತ್ ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

ಪ್ರಭಾಕರ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Exit mobile version